
ನವದೆಹಲಿ: ಆರ್ಎಸ್ಎಸ್, ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡರೆ ದೇಶ ನಾಶವಾಗುತ್ತದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಇಂಡಿಯಾ ಬಣದ ಪಕ್ಷಗಳು ತಮ್ಮ ಸಿದ್ಧಾಂತಗಳು ಮತ್ತು ನೀತಿಗಳಲ್ಲಿ ಸ್ವಲ್ಪ ವ್ಯತ್ಯಾಸಗಳನ್ನು ಹೊಂದಿರಬಹುದು. ಆದರೆ ಅವರು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, "ಒಂದು ಸಂಘಟನೆಯು ದೇಶದ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಬಯಸುತ್ತದೆ. ಆ ಸಂಘಟನೆಯ ಹೆಸರು ರಾಷ್ಟ್ರೀಯ ಸ್ವಯಂಸೇವಕ ಸಂಘ. ಶಿಕ್ಷಣ ವ್ಯವಸ್ಥೆಯು ಅವರ ಕೈಗೆ ಹೋದರೆ, ಈ ದೇಶ ನಾಶವಾಗುತ್ತದೆ. ಅದು ವಾಸ್ತವವಾಗಿ ನಿಧಾನವಾಗಿ ಈಗ ನಡೆಯುತ್ತಿದೆ" ಎಂದು ಹೇಳಿದರು.
"ಭಾರತೀಯ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಆರ್ಎಸ್ಎಸ್ ನಿಯಂತ್ರಿಸುತ್ತಿದೆ ಎಂಬ ವಿಚಾರವನ್ನು ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳಿಗೆ ಹೇಳಬೇಕು. ಮುಂಬರುವ ದಿನಗಳಲ್ಲಿ, ಆರ್ಎಸ್ಎಸ್ ಶಿಫಾರಸಿನ ಮೇರೆಗೆ ರಾಜ್ಯ ವಿಶ್ವವಿದ್ಯಾಲಯಗಳ ವಿಸಿಗಳನ್ನು ನೇಮಿಸಲಾಗುತ್ತದೆ. ನಾವು ಇದನ್ನು ತಡೆಯಬೇಕು" ಎಂದು ಅವರು ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹೇಳಿದರು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಹಾಕುಂಭದ ಬಗ್ಗೆ ಹೇಳಿಕೆ ನೀಡಿದ್ದನ್ನು ಸ್ಮರಿಸಿದ ರಾಹುಲ್ ಗಾಂಧಿ, ಪ್ರಧಾನಿಯವರು ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆಯೂ ಮಾತನಾಡಬೇಕಿತ್ತು ಎಂದು ಟೀಕಿಸಿದರು.
"ಪ್ರಧಾನಿಯವರು ನಿರುದ್ಯೋಗ, ಹಣದುಬ್ಬರ ಮತ್ತು ಶಿಕ್ಷಣ ವ್ಯವಸ್ಥೆಯ ಬಗ್ಗೆ ಒಂದು ಮಾತನ್ನೂ ಮಾತನಾಡುವುದಿಲ್ಲ. ಎಲ್ಲಾ ಸಂಪನ್ಮೂಲಗಳನ್ನು ಅದಾನಿ ಮತ್ತು ಅಂಬಾನಿಗೆ ಹಸ್ತಾಂತರಿಸುವುದು ಮತ್ತು ಸಂಸ್ಥೆಗಳನ್ನು ಆರ್ಎಸ್ಎಸ್ಗೆ ಹಸ್ತಾಂತರಿಸುವುದು ಅವರ ಆಡಳಿತ ಮಾದರಿ" ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
Advertisement