
ಶ್ರೀನಗರ: ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನರನ್ನು ಗುಂಡಿಕ್ಕಿ ಕೊಂದ ನಾಲ್ವರು ಭಯೋತ್ಪಾದಕರಿಗಾಗಿ ಭಾರತೀಯ ಸೇನೆ ಕಣಿವೆಯಲ್ಲಿ ವ್ಯಾಪಕ ಶೋಧ ನಡೆಸುತ್ತಿರುವಂತೆಯೇ ಈ ಉಗ್ರರು ದಕ್ಷಿಣ ಕಾಶ್ಮೀರದಲ್ಲಿ ಅವಿತುಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆಘಾತಕಾರಿ ವಿಚಾರ ಎಂದರೆ ಈ ಉಗ್ರರಿಗೆ ಸ್ಥಳೀಯರೇ ಆಹಾರ ಮತ್ತು ಇತರೆ ವಸ್ತುಗಳ ನೆರವು ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಸುದ್ದಿಮಾಧ್ಯಮ ವರದಿ ಮಾಡಿದೆ.
ಪಹಲ್ಗಾಮ್ ದಾಳಿ ಉಗ್ರರು ಭಾರತೀಯ ಸೇನೆ, ಸ್ಥಳೀಯ ಪೊಲೀಸರನ್ನು ಒಳಗೊಂಡ ಬೃಹತ್ ಶೋಧ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳುತ್ತಾ ಇದೀಗ ದಕ್ಷಿಣ ಕಾಶ್ಮೀರದಲ್ಲಿ ಅವಿತಿದ್ದಾರೆ. ಈಗಲೂ ಉಗ್ರರು ಇದೇ ಪ್ರದೇಶದಲ್ಲೇ ಇದ್ದು ಸ್ಥಳೀಯರ ನೆರವಿನೊಂದಿಗೆ ರಹಸ್ಯಸ್ಥಳದಲ್ಲಿದ್ದಾರೆ ಎಂದು ಹೇಳಲಾಗಿದೆ.
ಭಯೋತ್ಪಾದಕರು 'ಸ್ವಾವಲಂಬಿಗಳಾಗಿರಬಹುದು', ಅವರಿಗೆ ಪಾಕಿಸ್ತಾನದ ನೆರವು ಸಿಗುತ್ತಿರಬಹುದು. ಸಾಕಷ್ಟು ಸರಬರಾಜುಗಳನ್ನು ಹೊಂದಿರಬಹುದು. ಆದ್ದರಿಂದ ದಟ್ಟ ಕಾಡುಗಳಲ್ಲಿ ಅಡಗಿಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಎಣಿಸಿದ್ದರು. ಅದರೆ ಉಗ್ರರು ರಾಜಾರೋಷವಾಗಿ ಜನನಿಭಿಡ ಪ್ರದೇಶಗಳಲ್ಲೇ ಇದ್ದರೂ ಈ ವರೆಗೂ ಏಕೆ ಸೇನಾ ಶೋಧಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿಲ್ಲ ಎಂದು ಅಧಿಕಾರಿಗಳು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಉಗ್ರರಿಗೆ ತಾವಿರುವ ಜಾಗಕ್ಕೇ ಬಾಹ್ಯ ಸೌಲಭ್ಯಗಳು ದೊರೆಯುತ್ತಿದ್ದು, ಆಹಾರ ಮತ್ತು ಇತರೆ ಸೌಲಭ್ಯಗಳು ಯಾವುದೇ ತಡೆ ಇಲ್ಲದೆ ದೊರೆಯುತ್ತಿದೆ. ಇದಕ್ಕೆ ಸ್ಥಳೀಯರ ನೆರವು ಇದ್ದು ಇದೇ ಕಾರಣಕ್ಕೆ ಅವರು ಸೇನಾ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕಿಲ್ಲ ಎಂಬ ಮತ್ತೊಂದು ವಾದ ಕೂಡ ಕೇಳಿಬರುತ್ತಿದೆ.
ಫೆಬ್ರವರಿ 2019 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಉಗ್ರದಾಳಿಯಲ್ಲಿ 40 ಸೈನಿಕರು ಸಾವನ್ನಪ್ಪಿದ ನಂತರ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದ್ದು, ಈ ದಾಳಿಯ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆ NIA ವಹಿಸಿಕೊಂಡಿದೆ.
ದಾಳಿ ಬಳಿಕ ಬೈಸರನ್ ಕಣಿವೆಯಲ್ಲೇ 48 ಗಂಟೆ ಇದ್ದ ಉಗ್ರರು
ಮತ್ತೊಂದು ಆಘಾತಕಾರಿ ಅಂಶ ಎಂದರೆ ಪಹಲ್ಗಾಮ್ ಉಗ್ರ ದಾಳಿ ಬಳಿಕ ಉಗ್ರರು ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲೇ 48 ಗಂಟೆ ಇದ್ದರು ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ. ಉಗ್ರ ದಾಳಿಯ ನಂತರ ವಿಚಾರಣೆಗೆ ಒಳಗಾದ OGW ಗಳು ಅಥವಾ ಓವರ್ ಗ್ರೌಂಡ್ ವರ್ಕರ್ಸ್ ಅಥವಾ ಭಯೋತ್ಪಾದಕ ಸಹಾನುಭೂತಿದಾರರು, ಅವರು ಇತರ ನಾಲ್ಕು ಸ್ಥಳಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು NIA ಮೂಲಗಳು ತಿಳಿಸಿವೆ.
ಇವುಗಳಲ್ಲಿ ಅರು ಮತ್ತು ಬೇತಾಬ್ ಕಣಿವೆಗಳಲ್ಲಿನ ಪ್ರದೇಶಗಳೂ ಸೇರಿವೆ. ಉಗ್ರರು ಅವಿತಿದ್ದ ಪ್ರದೇಶಗಳಲ್ಲಿ ಭಾರೀ ಕಾವಲು ಇರಿಸಲಾಗಿತ್ತು ಮತ್ತು ಆದ್ದರಿಂದ ಭಯೋತ್ಪಾದಕರು ಬೈಸರನ್ ಅನ್ನು ಆಯ್ಕೆ ಮಾಡಿಕೊಂಡರು. ಭಯೋತ್ಪಾದಕರು ಸುಧಾರಿತ ಸಂವಹನ ಉಪಕರಣಗಳನ್ನು ಹೊಂದಿದ್ದರು ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ.
ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ರಕ್ಷಣಾ ತಜ್ಞ ಮೇಜರ್ ಜನರಲ್ ಯಶ್ ಮೋರ್ ಈ ಬಗ್ಗೆ ಮಾತನಾಡಿದ್ದು, 'ಉಗ್ರರು ಬಳಸಿದ ಉಪಕರಣಗಳಿಗೆ ಸಿಮ್ ಕಾರ್ಡ್ಗಳ ಅಗತ್ಯವಿರಲಿಲ್ಲ ಮತ್ತು ಅದು ಅಲ್ಪ-ಶ್ರೇಣಿಯ ಎನ್ಕ್ರಿಪ್ಟ್ ಮಾಡಿದ ಪ್ರಸರಣ ವ್ಯವಸ್ಥೆಯನ್ನು ಹೊಂದಿತ್ತು, ಅದನ್ನು ತಡೆಯುವುದು ಅಸಾಧ್ಯವಲ್ಲದಿದ್ದರೂ ಕಷ್ಟಕರವಾಗಿತ್ತು, ದಾಳಿ ವೇಳೆ ಭಯೋತ್ಪಾದಕರು ಮೂರು ಉಪಗ್ರಹ ಫೋನ್(ಸ್ಯಾಟಲೈಟ್ ಫೋನ್)ಗಳನ್ನು ಬಳಸಿದ್ದಾರೆಂದು ವರದಿಯಾಗಿದೆ ಎಂದು ಹೇಳಿದ್ದಾರೆ.
ದಾಳಿಗೆ ಮೊದಲೇ ಯೋಜನೆ ಸಿದ್ಧವಾಗಿತ್ತು
ಅಂತೆಯೇ ಉಗ್ರ ದಾಳಿಯ ಯೋಜನೆ ಸರಳವಾಗಿತ್ತು. ಮೂವರು ಭಯೋತ್ಪಾದಕರು ಬೈಸರನ್ ಸುತ್ತಮುತ್ತಲಿನ ಅಡಗುತಾಣಗಳಿಂದ ಧಾವಿಸಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು. ಮತ್ತೋರ್ವ ಉಗ್ರ ದಾಳಿಯಲ್ಲಿ ಪಾಲ್ಗೊಂಡಿಲ್ಲವಾದರೂ ಅವರಿಗೆ ಅಗತ್ಯವಿದ್ದರೆ ಬೆಂಬಲವನ್ನು ಒದಗಿಸಲು ಅಲ್ಲಿಯೇ ಅಡಗಿಕೊಂಡಿದ್ದ. ಒಂದು ವೇಳೆ ಭದ್ರತಾ ಪಡೆಗಳು ಧಾವಿಸಿದರೆ, ಅವರಿಗೆ ಪ್ರತ್ಯುತ್ತರ ನೀಡಲು ಈ ಉಗ್ರನಿಗೆ ಸೂಚಿಸಲಾಗಿತ್ತು ಎಂದು ಹೇಳಲಾಗಿದೆ.
ಭಾರತದಲ್ಲಿ ವೈಷಮ್ಯ ಪಸರಿಸಲು ಕೃತ್ಯ
ಇದೇ ವೇಳೆ ಭಯೋತ್ಪಾದಕರು ವೈಷಮ್ಯ ಪಸರಿಸಲೆಂದೇ ಉಗ್ರ ದಾಳಿ ವೇಳೆ ಪ್ರವಾಸಿದರ ಧರ್ಮ ವಿಚಾರಿಸಿ ಇಸ್ಲಾಮಿಕ್ ಶ್ಲೋಕಗಳನ್ನು ಪಠಿಸುವಂತೆ ಕೇಳಿದ್ದಾರೆ. ಬಳಿಕ ಹಿಂದೂ ಧರ್ಮಕ್ಕೆ ಸೇರಿದ ಪುರುಷರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement