ಮಧ್ಯ ಪ್ರದೇಶ: ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಮೇಲೆ ಎರಡು ದಿನ ನಾಲ್ವರಿಂದ ಅತ್ಯಾಚಾರ; ಆರು ಮಂದಿ ಬಂಧನ

ಏಪ್ರಿಲ್ 29 ರಂದು ತನ್ನ ಮಗಳು ನಾಪತ್ತೆಯಾದ ಕುರಿತು ತಾಯಿ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಏಪ್ರಿಲ್ 30 ರಂದು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137(2)ರ ಅಡಿಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೋಪಾಲ್: ಎರಡು ದಿನಗಳ ಕಾಲ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಉಪ ಜೈಲರ್ ನನ್ನನ್ನು ಅಪಹರಿಸಿದ್ದು, ಹೋಟೆಲ್ ಕೋಣೆಯೊಳಗೆ ಬಲವಂತವಾಗಿ ಕೂಡಿಹಾಕಿದ್ದಾರೆ ಎಂದು ಮಧ್ಯ ಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯೊಬ್ಬಳು ಆರೋಪಿಸಿದ್ದಾಳೆ.

ಏಪ್ರಿಲ್ 29 ರಂದು ನಾಪತ್ತೆಯಾಗಿದ್ದ ಬಾಲಕಿ ನಂತರ ಶಹದೋಲ್ ಜಿಲ್ಲೆಯ ಪ್ರಮುಖ ಹೋಟೆಲ್‌ನ ಕೋಣೆಯಲ್ಲಿ ಬಂಧಿಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅಪಹರಣ ಮತ್ತು ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಉಪ ಜೈಲರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಏಪ್ರಿಲ್ 29 ರಂದು ತನ್ನ ಮಗಳು ನಾಪತ್ತೆಯಾದ ಕುರಿತು ತಾಯಿ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಏಪ್ರಿಲ್ 30 ರಂದು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137(2)ರ ಅಡಿಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು.

ವಿಚಾರಣೆಯ ಸಮಯದಲ್ಲಿ ಬಾಲಕಿ, ಏಪ್ರಿಲ್ 29 ರಂದು ಸಮೀರ್ ಖಾನ್ ಎಂಬಾತನಿಂದ ಫೋನ್ ಕರೆ ಬಂತು. ಆತ ತನ್ನನ್ನು ಬೈಕ್‌ನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಸಮೀರ್‌ನ ಸಹಾಯಕ ಚೋಟು ಮುಸಲ್ಮಾನ್ ಕೂಡ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

ಏಪ್ರಿಲ್ 30 ರಂದು ತನ್ನನ್ನು ಶಹದೋಲ್ ರೈಲು ನಿಲ್ದಾಣದಲ್ಲಿ ಬಿಟ್ಟು ಹೋದರು. ಆಗ ಅನ್ಮೋಲ್ ಎಂದು ಗುರುತಿಸಲಾದ ಇನ್ನೊಬ್ಬ ಯುವಕ ತನ್ನನ್ನು ಬಲವಂತವಾಗಿ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದೇ ದಿನ, ಮುದ್ನಾ ನದಿಯ ಬಳಿ ಅನ್ಮೋಲ್‌ನ ಸಹಾಯಕ ಶಾಕಿಬ್ ಖಾನ್ ಎಂಬಾತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಸಾಂದರ್ಭಿಕ ಚಿತ್ರ
ಒಡಿಶಾ: ಅಪ್ರಾಪ್ತ ಬಾಲಕಿ ಅಪಹರಿಸಿ, ಅರಣ್ಯ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ

ಆಕೆಯ ಹೇಳಿಕೆಯ ಪ್ರಕಾರ, ಏಪ್ರಿಲ್ 30 ರಂದು ತಡರಾತ್ರಿ ಹಾಸ್ಟೆಲ್ ಬಳಿ ನನ್ನನ್ನು ಬಿಟ್ಟುಹೋದರು. ಮೇ 1 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಬುರ್ಹಾರ್ ಉಪ ಜೈಲಿನ ಉಪ ಜೈಲರ್ ವಿಕಾಸ್ ಸಿಂಗ್, ತನ್ನನ್ನು ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ದರು. ಬಲವಂತವಾಗಿ ಕೋಣೆಯೊಳಗೆ ಕೂಡಿಹಾಕಿದರು ಎಂದು ತಿಳಿಸಿದ್ದಾರೆ. ನಂತರ ಪೊಲೀಸರು ಆಕೆ ಇರುವ ಸ್ಥಳವನ್ನು ಪತ್ತೆಹಚ್ಚಿ, ಹೋಟೆಲ್ ಕೊಠಡಿಯಿಂದ ಆಕೆಯನ್ನು ರಕ್ಷಿಸಿದ್ದಾರೆ.

2024ರಲ್ಲಿ, ತನ್ನ ತಾಯಿಯೊಂದಿಗೆ ಜಗಳವಾಡಿದ ನಂತರ ಮನೆಬಿಟ್ಟು ಓಡಿಹೋಗಿದ್ದಾಗಲೂ ನನ್ನ ಮೇಲೆ ಐವರು ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

ಶಹದೋಲ್ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ್‌ಜಿ ಶ್ರೀವಾಸ್ತವ ಶುಕ್ರವಾರ TNIE ಜೊತೆ ಮಾತನಾಡಿ, 'ಅಪಹರಣಕ್ಕೆ ಸಂಬಂಧಿಸಿದ ಸೆಕ್ಷನ್ 137(2) BNS ಅಡಿಯಲ್ಲಿ ಈಗಾಗಲೇ ಪ್ರಕರಣವನ್ನು ದಾಖಲಿಸಲಾಗಿದೆ. 2024 ಮತ್ತು ಏಪ್ರಿಲ್ 29 ಮತ್ತು 30, 2025 ರಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರು ಮಂದಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಅಪ್ರಾಪ್ತ ಬಾಲಕಿ ಅತ್ಯಾಚಾರ, ಎನ್ ಕೌಂಟರ್ ಪ್ರಕರಣ: ರಾಜ್ಯ ಸರ್ಕಾರಕ್ಕೆ NHRC ನೋಟಿಸ್

'ಬುರ್ಹಾರ್ ಉಪ ಜೈಲಿನ ಉಪ ಜೈಲರ್ ವಿಕಾಸ್ ಸಿಂಗ್ ವಿರುದ್ಧ ಅಪಹರಣ ಮತ್ತು ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಇನ್ನೂ ಅವರನ್ನು ಬಂಧಿಸಿಲ್ಲ' ಎಂದು ಎಸ್ಪಿ ಹೇಳಿದರು.

ಪೊಲೀಸ್ ಅಧಿಕಾರಿಗಳ ಪ್ರಕಾರ, ಬಾಲಕಿಯ ಆರಂಭಿಕ ಹೇಳಿಕೆಗಳಲ್ಲಿ ಹಲವಾರು ಅಸಂಗತತೆಗಳಿವೆ. ಆಕೆಯ ಔಪಚಾರಿಕ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಕೆಯ ವೈದ್ಯಕೀಯ ಪರೀಕ್ಷೆಯನ್ನೂ ಶುಕ್ರವಾರ ನಡೆಸಲು ನಿರ್ಧರಿಸಲಾಗಿತ್ತು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com