
ನವದೆಹಲಿ: 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಬಾಲಾಕೋಟ್ನಲ್ಲಿ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸತ್ಯಾಸತ್ಯತೆಯನ್ನು ಕಾಂಗ್ರೆಸ್ ನಾಯಕ ಚರಣಜಿತ್ ಸಿಂಗ್ ಚನ್ನಿ ಶನಿವಾರ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ 40 ಸೈನಿಕರು ಹುತಾತ್ಮರಾದರು. ಚುನಾವಣೆ ನಡೆದಾಗ ಸರ್ಕಾರ ಕ್ರಮದ ಬಗ್ಗೆ ಹೆಮ್ಮೆಪಡುತ್ತದೆ. ಆದರೆ ಪಾಕಿಸ್ತಾನದಲ್ಲಿ ಎಲ್ಲಿ ದಾಳಿ ಮಾಡಲಾಯಿತು ಮತ್ತು ಜನರು ಎಲ್ಲಿ ಕೊಲ್ಲಲ್ಪಟ್ಟರು ಎಂಬುದನ್ನು ನಾವು ನೋಡಿಲ್ಲ. ನಮ್ಮ ದೇಶದಲ್ಲಿ ಯಾರಾದರೂ ಬಾಂಬ್ ಎಸೆದರೆ ಅದು ಜನರಿಗೆ ತಿಳಿಯುವುದಿಲ್ಲವೇ? ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ ಎಂದು ಹೇಳಿಕೊಂಡರೂ ಏನೂ ಆಗಿಲ್ಲ.
ಸರ್ಜಿಕಲ್ ಸ್ಟ್ರೈಕ್ಗಳನ್ನು ಎಲ್ಲಿಯೂ ನೋಡಿಲ್ಲ ಮತ್ತು ಯಾರಿಗೂ ಅವುಗಳ ಬಗ್ಗೆ ತಿಳಿದಿರಲಿಲ್ಲ" ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಹೇಳಿದರು.ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ತನ್ನ ಹೇಳಿಕೆಯಿಂದ ಹಿಂದೆ ಸರಿದ ಚೆನ್ನಿ, ಸರ್ಜಿಕಲ್ ಸ್ಟ್ರೈಕ್ ಗೆ ಯಾವುದೇ ಪುರಾವೆಗಳ ಅಗತ್ಯ ಇಲ್ಲ ಎಂದರು.
ಚನ್ನಿ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಪಾಕಿಸ್ತಾನಕ್ಕೆ ಕಾಂಗ್ರೆಸ್ ಪದೇ ಪದೇ "ಆಮ್ಲಜನಕ" ನೀಡುತ್ತಿದೆ. ಹೊರಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆದರೆ ಒಳಗೆ ಪಾಕಿಸ್ತಾನದ ಕಾರ್ಯಕಾರಿ ಸಮಿತಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಕಾಂಗ್ರೆಸ್ನ ನಿರ್ಣಯಗಳು ಮತ್ತು ನಾಯಕತ್ವವು ಒಂದು ಧ್ವನಿಯಲ್ಲಿ ಮಾತನಾಡುತ್ತಿದ್ದರೆ, ಅದರ ಹಲವು ನಾಯಕರು ಇನ್ನೊಂದು ಧ್ವನಿಯಲ್ಲಿ ಮಾತನಾಡುವುದು ಒಂದು ಮಾದರಿಯಾಗಿದೆ ಎಂದರು.
ಪಾಕಿಸ್ತಾನಕ್ಕೆ ಪಾಠ ಕಲಿಸಲು ಕೇಂದ್ರವು ದೃಢತೆ ಮತ್ತು ಸ್ಪಷ್ಟತೆಯಿಂದ ಕಾರ್ಯನಿರ್ವಹಿಸಬೇಕೆಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಶುಕ್ರವಾರ ನಿರ್ಣಯವನ್ನು ಅಂಗೀಕರಿಸಿದೆ. ಸಿಡಬ್ಲ್ಯುಸಿ ನಿರ್ಣಯವನ್ನು ಅಂಗೀಕರಿಸಿದ ತಕ್ಷಣ ಚನ್ನಿ ಮತ್ತೊಂದು ಸುದ್ದಿಗೋಷ್ಠಿ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳಿದ್ದಾರೆ. ಪಾಕಿಸ್ತಾನದ ಸೇನೆ ಮತ್ತು ಭಯೋತ್ಪಾದಕರಿಗೆ ಆಮ್ಲಜನಕವನ್ನು ಪೂರೈಸಲು ಮತ್ತು ಅವರ ನೈತಿಕತೆಯನ್ನು ಹೆಚ್ಚಿಸಲು ಕಾಂಗ್ರೆಸ್ ಯಾವುದೇ ಸಂದರ್ಭವನ್ನು ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯಕ್ಕೆ ಹಾನಿ ಉಂಟು ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.
Advertisement