
ಅಜಮ್ಗಢ: ಉತ್ತರ ಪ್ರದೇಶದಲ್ಲಿ ಭೀಕರ ಆ್ಯಲಸಿಡ್ ದಾಳಿ ಪ್ರಕರಣ ವರದಿಯಾಗಿದ್ದು, ಭಗ್ನಪ್ರೇಮಿ ಯೋರ್ವ ತಾನು ಪ್ರೀತಿಸಿದ ಯುವತಿ ಮೇಲೆಯೇ ಆ್ಯಸಿಡ್ ಎರಚಿದ್ದಾನೆ.
ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ 25 ವರ್ಷದ ರೀಮಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಮೇಲೆ ದುಷ್ಕರ್ಮಿ ಆ್ಯಸಿಡ್ ದಾಳಿ ನಡೆಸಿದ್ದಾನೆ.
ಮೂಲಗಳ ಪ್ರಕಾರ ಬ್ಯಾಂಕಿನಿಂದ ಮನೆಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಆರೋಪಿ ರಾಮ್ ಜನಮ್ ಸಿಂಗ್ ಪಟೇಲ್, 'ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು' ಎಂದು ಹೇಳಿ ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.
ಗುರುವಾರ, ಬ್ಯಾಂಕಿನಿಂದ 20,000 ರೂ.ಗಳನ್ನು ಡ್ರಾ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ, ಮೇ 27 ರಂದು ನಡೆದ ಆಕೆಯ ಮದುವೆ ನಿಲ್ಲಿಸುವ ಉದ್ದೇಶದಿಂದ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಮಹಿಳೆಯ ಮುಖ, ಭುಜ, ಕುತ್ತಿಗೆ ಮತ್ತು ದೇಹದ ಮೇಲ್ಭಾಗ ತೀವ್ರವಾಗಿ ಸುಟ್ಟ ಗಾಯಗಳಾಗಿವೆ.
ಆಕೆಯನ್ನು ಆಕೆಯ ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ನಂತರ ಪ್ರಾಥಮಿಕ ಚಿಕಿತ್ಸೆಯ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶೇ. 60 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿರುವ ಆಕೆ ಅಜಮ್ಗಢದ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪಟೇಲ್ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಬಳಸಲಾದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮದುವೆ ನಿಶ್ಚಯವಾಗಿತ್ತು
ಇನ್ನು ಸಂತ್ರಸ್ಥ ಯುವತಿಗೆ ಈಗಾಗಲೇ ಮದುವೆ ನಿಶ್ಚಯವಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಆಕೆಯ ಮದುವೆ ನಡೆಯಬೇಕಿತ್ತು. ಯುವತಿ ಮನೆಯಲ್ಲಿ ಈಗಾಗಲೇ ಆಕೆಯ ಮದುವೆಗೆ ಸಿದ್ಧತೆಗಳು ನಡೆಯುತ್ತಿತ್ತು. ಯುವತಿಯ ತಂದೆ ನಿಧನರಾಗಿದ್ದರಿಂದ ಮತ್ತು ಆಕೆಯ ಸಹೋದರ ತೀರಾ ಚಿಕ್ಕವನಾಗಿದ್ದರಿಂದ ಆಕೆಯಿಂದಲೇ ಇಡೀ ಕುಟುಂಬ ನಡೆಯುತ್ತಿತ್ತು. ಆದರೆ ಈಗ ಆಕೆಯ ಮೇಲೆ ಇಂತಹ ಧಾರುಣ ದಾಳಿ ನಡೆದಿದೆ.
ಮದುವೆಗಾಗಿ ಪೀಡಿಸುತ್ತಿದ್ದ ಆರೋಪಿ
ಆರೋಪಿ ರಾಮ್ ಜನಮ್ ಸಿಂಗ್ ಪಟೇಲ್ ಸಂತ್ರಸ್ಥೆ ರೀಮಾಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಇಷ್ಟರಲ್ಲಾಗಲೇ ರೀಮಾ ಮದುವೆ ಬೇರೆ ವ್ಯಕ್ತಿಯೊಂದಿಗೆ ನಿಶ್ಚಯವಾಗಿತ್ತು. ಇದಕ್ಕೆ ರಾಮ್ ಜನಮ್ ಸಿಂಗ್ ತೀವ್ರ ವಿರೋಧ ಮಾಡಿದ್ದ. ಅಲ್ಲದೆ ಆಕೆಯ ಮದುವೆ ರದ್ದಾಗುವಂತೆ ಮಾಡಲು ಯೋಜನೆ ರೂಪಿಸಿದ್ದ. ಆಕೆಯ ಮದುವೆ ತಡೆಯಲು ಆಕೆಗೆ ಕನಿಷ್ಟ ಹಾನಿ ಮಾಡುವ ಸಲುವಾಗಿ ಆ್ಯಸಿಡ್ ದಾಳಿ ಯೋಜನೆ ರೂಪಿಸಿದ್ದ. ಇದಕ್ಕಾಗಿ ಆಕೆಯ ಬೆನ್ನಿಗೆ ಆ್ಯಸಿಡ್ ಎರಚಲು ಯೋಜನೆ ರೂಪಿಸಿದ್ದಾಗಿ ಆರೋಪಿ ರಾಮ್ ಜನಮ್ ಸಿಂಗ್ ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Advertisement