
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪಹಲ್ಗಾಮ್'ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಬಳಿಕ ಇದೀಗ ಕಾರಾಗೃಹಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ಗುಪ್ತಚರ ದಳ ಮಾಹಿತಿ ನೀಡಿದೆ.
ಶ್ರೀನಗರದ ಸೆಂಟ್ರಲ್ ಜೈಲು ಹಾಗೂ ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನ ಮೇಲೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ದಳ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಶ್ರೀನಗರದ ಸೆಂಟ್ರಲ್ ಜೈಲು ಹಾಗೂ ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಲ್ಲಿ ಹಲವಾರು ಮಂದಿ ಹೈಪ್ರೊಫೈಲ್ ಭಯೋತ್ಪಾದಕರು ಹಾಗೂ ಸ್ಲೀಪರ್ ಸೆಲ್ ಸದಸ್ಯರುಗಳಿದ್ದಾರೆ.
ಇವರೆಲ್ಲರೂ ಭಯೋತ್ಪಾದನೆಯಲ್ಲಿ ನೇರವಾಗಿ ಭಾಗಿಯಾದವರು ಅಲ್ಲದಿದ್ದರೂ ಭಯೋತ್ಪಾದಕರಿಗೆ ಬೇಕಾದ ವಸ್ತುಗಳು, ವಸತಿ ಹಾಗೂ ಅವರ ಓಡಾಟಕ್ಕೆ ಸಹಾಯ ಮಾಡುವವರಾಗಿದ್ದಾರೆ.
ಇತ್ತೀಚೆಗೆ ನಡೆದ ಪಹಲ್ಗಾಮ್ ಭಯಾನಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಬಲಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ನಿಸಾರ್ ಮತ್ತು ಮುಷ್ತಾಕ್ ಎಂಬ ಇಬ್ಬರು ಶಂಕಿತರನ್ನು ವಿಚಾರಣೆ ನಡೆಸಿದ್ದಾರೆ. ಅವರು ಈ ಹಿಂದೆ ಸೇನಾ ವಾಹನದ ಮೇಲೆ ನಡೆದ ದಾಳಿಯಲ್ಲೂ ಭಾಗಿಯಾಗಿದ್ದರು ಎನ್ನಲಾಗಿದೆ.
ಇದೀಗ ಗುಪ್ತಚರ ದಳದ ಎಚ್ಚರಿಕೆಯ ನಂತರ ಜೈಲುಗಳ ಭದ್ರತೆಯನ್ನು ಪರಿಶೀಲಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
Advertisement