
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನಮಿಲಿಟರಿ ಸಂಘರ್ಷದಿಂದಾಗಿ, ಶ್ರೀನಗರ ಮತ್ತು ಚಂಡೀಗಢ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ 24 ವಿಮಾನ ನಿಲ್ದಾಣಗಳಲ್ಲಿ ಮೇ 15 ರವರೆಗೆ ನಾಗರಿಕ ವಿಮಾನ ಹಾರಾಟ ಬಂದ್ ಮಾಡಲಾಗಿದೆ.
ಏರ್ ಇಂಡಿಯಾ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಪಾಕ್ ಬೆದರಿಕೆ ಪೀಡಿತ ಸ್ಥಳಗಳಿಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಿದ್ದು, ಪ್ರಯಾಣಿಕರಿಗೆ ಮರು ಪಾವತಿಯ ಆಫರ್ ನೀಡಿವೆ.
ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಮೇ 10 ರವರೆಗೆ ನಾಗರಿಕ ವಿಮಾನಗಳಿಗಾಗಿ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಹೊಸ ಆದೇಶದ ನಂತರ ಮೇ 15 ರವರೆಗೆ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಕಾರಣ ತಮ್ಮ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಶುಕ್ರವಾರ ತಿಳಿಸಿವೆ.
ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂತರ್, ಕಿಶನ್ಗಢ್, ಪಟಿಯಾಲ, ಶಿಮ್ಲಾ, ಧರ್ಮಶಾಲಾ, ಮತ್ತು ಬಟಿಂಡಾ, ಜೈಸಲ್ಮೇರ್, ಜೋಧ್ಪುರ, ಲೇಹ್, ಬಿಕಾನೇರ್, ಪಠಾಣ್ಕೋಟ್, ಜಮ್ಮು, ಜಾಮ್ನಗರ್ ಮತ್ತು ಭುಜ್ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ನಾಗರಿಕ ವಿಮಾನಯಾನ ಪ್ರಾಧಿಕಾರದ ಸೂಚನೆಯಂತೆ ಜಮ್ಮು, ಶ್ರೀನಗರ, ಲೇಹ್, ಜೋಧ್ಪುರ, ಅಮೃತಸರ, ಚಂಡೀಗಢ, ಭುಜ್, ಜಾಮ್ನಗರ್ ಮತ್ತು ರಾಜ್ಕೋಟ್ಗೆ ಮೇ 15 ರವರೆಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಪೋಸ್ಟ್ನಲ್ಲಿ ತಿಳಿಸಿದೆ.
Advertisement