
ಜಮ್ಮು: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದವನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಅವರ ತಂದೆ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ. ಆದರೆ ಇದು ಸ್ವಲ್ಪ ತಡವಾಯಿತು ಎಂದಿದ್ದಾರೆ.
ತನ್ನ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, ಎರಡ್ಮೂರು ದಿನಗಳ ಹಿಂದೆಯೇ ಈ ಕದನ ವಿರಾಮ ಬಂದಿದ್ದರೆ, ಬಹುಶಃ ನಾವು ನೋಡಿದ ರಕ್ತಪಾತ ನಡೆಯುತ್ತಿರಲಿಲ್ಲ. ಕೆಲವರ ಅಮೂಲ್ಯ ಜೀವ ಸುರಕ್ಷಿತವಾಗಿರುತಿತ್ತು ಎಂದು ಅವರು ಹೇಳಿದರು.
ಭಾರತ ಮತ್ತು ಪಾಕ್ ಉದ್ವಿಗ್ನತೆ ಸಂದರ್ಭದಲ್ಲಿ ಹಾನಿಗೊಳಗಾದವರಿಗೆ ಪರಿಹಾರ ನೀಡುವುದು ಈಗ ಜಮ್ಮು-ಕಾಶ್ಮೀರದ ಕರ್ತವ್ಯವಾಗಿದೆ. ಅಮೂಲ್ಯ ಜೀವಗಳ ನಷ್ಟಕ್ಕೆ ಪರಿಹಾರವನ್ನು ಘೋಷಿಸಿದ್ದೇವೆ. ಈಗ ಗಾಯಗೊಂಡವರಿಗೆ ಪರಿಹಾರವನ್ನು ನೀಡಬೇಕಾಗಿದೆ ಎಂದರು.
ಜಮ್ಮು, ಪೂಂಚ್, ರಜೌರಿ, ತಂಗ್ಧಾರ್ ಮತ್ತಿತರ ಗಡಿ ಪ್ರದೇಶಗಳಲ್ಲಿ ಗಡಿಯಾಚೆಗಿನ ಶೆಲ್ ದಾಳಿಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಈಗ ನಾವು ಹಜ್ ವಿಮಾನಗಳನ್ನು ಪುನರಾರಂಭಿಸಬಹುದು,ಏಕೆಂದರೆ ವಿಮಾನ ನಿಲ್ದಾಣ ಮುಚ್ಚಿದ್ದರಿಂದ ಯಾತ್ರಾರ್ಥಿಗಳನ್ನು ಹಜ್ಗೆ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.
ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರು ಪ್ರಾಣ ಕಳೆದುಕೊಳ್ಳುವುದರಿಂದ ಉಭಯ ದೇಶಗಳ ನಡುವಿನ ಹಗೆತನವನ್ನು ಕೊನೆಗಾಣಿಸಬೇಕಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಶ್ವತ ಸ್ನೇಹಕ್ಕಾಗಿ ತಮ್ಮ ಪಕ್ಷವು ಯಾವಾಗಲೂ ಪ್ರತಿಪಾದಿಸುತ್ತದೆ. ಆದರೆ, ನಂಬಿಕೆಯ ಕೊರತೆಯನ್ನು ನಿವಾರಿಸುವ ಪ್ರಾಥಮಿಕ ಜವಾಬ್ದಾರಿಯು ಪಾಕಿಸ್ತಾನದ ಮೇಲಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.
Advertisement