
ಬುಲಂದ್ಶಹರ್: ಚಲಿಸುತ್ತಿದ್ದ ಕಾರಿನೊಳಗೆ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆಕೆಯ ಜೊತೆಗಿದ್ದ ಸ್ನೇಹಿತೆಯನ್ನು ವಾಹನದಿಂದ ಹೊರಗೆ ತಳ್ಳಿದ್ದರಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಲಂದ್ಶಹರ್ನಲ್ಲಿ ಅಪ್ರಾಪ್ತೆ ಕಾರಿನಿಂದ ತಪ್ಪಿಸಿಕೊಂಡು ಅಪರಾಧದ ಬಗ್ಗೆ ವರದಿ ಮಾಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಮಂಗಳವಾರ ಸಂಜೆ ಆರೋಪಿಯು ಕೆಲಸ ಕೊಡಿಸುವ ಭರವಸೆ ನೀಡಿ ಮಹಿಳೆ ಮತ್ತು ಅಪ್ರಾಪ್ತೆಯನ್ನು ಗ್ರೇಟರ್ ನೋಯ್ಡಾದಿಂದ ಲಕ್ನೋಗೆ ಕರೆದುಕೊಂಡು ಹೋಗಿದ್ದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಗಳು ಕಾರಿನಲ್ಲೇ ಮದ್ಯಪಾನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾ ನಿವಾಸಿಗಳಾದ ಸಂದೀಪ್, ಅಮಿತ್ ಮತ್ತು ಗಾಜಿಯಾಬಾದ್ ನಿವಾಸಿ ಗೌರವ್ ಎಂದು ಗುರುತಿಸಲಾದ ಆರೋಪಿಗಳು ಮತ್ತು ಅಪ್ರಾಪ್ತೆ ಸೇರಿದಂತೆ ಮಹಿಳೆಯೊಂದಿಗೆ ಕಾರಿನೊಳಗೆ ಜಗಳ ನಡೆದಿದೆ. ಈ ವೇಳೆ ಮೀರತ್ ಜಿಲ್ಲೆಯಲ್ಲಿ ಮಹಿಳೆಯನ್ನು ಕಾರಿನಿಂದ ಹೊರಗೆ ತಳ್ಳಲಾಗಿದೆ. ನಂತರ ಆಕೆ ಸಾವಿಗೀಡಾಗಿದ್ದಾರೆ.
ಬಳಿಕ ಕಾರಿನಲ್ಲಿದ್ದ ಅಪ್ರಾಪ್ತೆ ಮೇಲೆ ಮೂವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಮೀರತ್ನಿಂದ ಸುಮಾರು 100 ಕಿಲೋಮೀಟರ್ ಮುಂದಿರುವ ಬುಲಂದ್ಶಹರ್ ಜಿಲ್ಲೆಯ ಖುರ್ಜಾ ಸುತ್ತಮುತ್ತ ಇರುವಾಗ ಆಕೆ ಅವರಿಂದ ತಪ್ಪಿಸಿಕೊಂಡಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಆರೋಪಿಗಳ ಕಿಯಾ ಸೆಲ್ಟೋಸ್ ಕಾರನ್ನು ಅಲಿಘರ್-ಬುಲಂದ್ಶಹರ್ ಹೆದ್ದಾರಿ ಬಳಿ ತಡೆದು, ಗೌರವ್ ಮತ್ತು ಸಂದೀಪ್ ಕಾಲಿಗೆ ಗುಂಡು ಹಾರಿಸಲಾಗಿದೆ.
ಬುಲಂದ್ಶಹರ್ ಎಸ್ಎಸ್ಪಿ ದಿನೇಶ್ ಕುಮಾರ್ ಸಿಂಗ್ ಅವರ ಪ್ರಕಾರ, ಎರಡು ಅಕ್ರಮ ಪಿಸ್ತೂಲ್ಗಳು, ಜೀವಂತ ಮತ್ತು ಖಾಲಿ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬುಧವಾರ ಖುರ್ಜಾ ಪೊಲೀಸ್ ಠಾಣೆಯಲ್ಲಿ ಭಾರತ್ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
Advertisement