
ನವದೆಹಲಿ: ಪಾಕಿಸ್ತಾನವು ಭಯೋತ್ಪಾದನೆಗೆ ನೆರವು ನೀಡುತ್ತಿರುವುದನ್ನು ಬಯಲು ಮಾಡುವ ಸಲುವಾಗಿ ವಿದೇಶಗಳಿಗೆ ತೆರಳಿರುವ ಸಂಸದರನ್ನು ಕಾಂಗ್ರೆಸ್ ಪಕ್ಷವು ಉಗ್ರರಿಗೆ ಹೋಲಿಸಿದೆ, ಹೀಗಾಗಿ ಕಾಂಗ್ರೆಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ 50ನೇ ವರ್ಷದ ಅಂಗವಾಗಿ ಜೂನ್ 25–26ರಂದು ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸರ್ಕಾರವು ಜನರ ಗಮನವನ್ನು ಗಂಭೀರ ಸಮಸ್ಯೆಗಳ ಬದಲಾಗಿ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ನಮ್ಮ ಸಂಸದರು ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಉಗ್ರರೂ ಓಡಾಡಿಕೊಂಡಿದ್ದಾರೆ' ಎಂದು ಹೇಳಿದ್ದರು.
'ಪಾಕಿಸ್ತಾನ ಮತ್ತು ಭಯೋತ್ಪಾದಕರನ್ನು ಗುರಿಯಾಗಿಸಬೇಕಾದ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವತ್ತ ಆಸಕ್ತಿ ತೋರುತ್ತಿದೆ' ಎಂದು ಲೇವಡಿ ಮಾಡಿದ್ದರು. ಹಾಗೆಯೇ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಕುರಿತು ಸಂಸತ್ತಿನ ವಿಶೇಷ ಅದಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದರು.
ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, 'ವಿದೇಶಗಳಲ್ಲಿ ಪಾಕಿಸ್ತಾನದ ಮುಖವನ್ನು ಬಯಲು ಮಾಡುತ್ತಿರುವ ಸರ್ವಪಕ್ಷಗಳ ಸಂಸದರು ವಾಸ್ತವದಲ್ಲಿ ಭಯೋತ್ಪಾದಕರಿದ್ದಂತೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ' ಎಂದು ಆರೋಪಿಸಿದ್ದಾರೆ.
ರಾಜತಾಂತ್ರಿಕ ಹೊಡೆತದ ಮೂಲಕ ಪಾಕಿಸ್ತಾನವನ್ನು ಮೂಲೆಗುಂಪು ಮಾಡುತ್ತಿರುವ ಹೊತ್ತಿನಲ್ಲಿ, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಆ ರಾಷ್ಟ್ರದ ಪರವಾಗಿ ಮಾತನಾಡಲು ಮುಂದಾಗುತ್ತಿದೆ. ಸಂಸದರನ್ನು ಉಗ್ರರು ಎಂದು ಹೇಳುತ್ತಿದೆ' ಎಂದು ಆರೋಪಿಸಿದ್ದಾರೆ. ಮುಂದುವರಿದು, ವಿದೇಶಗಳಿಗೆ ಭೇಟಿ ನೀಡಿರುವ ನಿಯೋಗಗಳಲ್ಲಿರುವ ಡಿಎಂಕೆ ಸಂಸದೆ ಕನಿಮೋಳಿ, ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ ಹಾಗೂ ಸಮಾಜವಾದಿ ಪಕ್ಷದ ರಾಜೀವ್ ರೈ ಅವರೂ ಭಯೋತ್ಪಾದಕರೇ ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ.
'ಕೈ' ನಾಯಕನ ಹೇಳಿಕೆಯು ಭಾರತದ ರಾಜತಾಂತ್ರಿಕ ಸಿದ್ಧಾಂತಕ್ಕೆ ಮಾಡಿದ ಅಪಮಾನವಾಗಿದೆ. ಇದು (ಹೇಳಿಕೆ) ಆ ಪಕ್ಷದ ಮನಸ್ಥಿತಿಯನ್ನು ತೋರುತ್ತದೆ ಎಂದೂ ಪ್ರತಿಪಾದಿಸಿರುವ ಪೂನಾವಾಲಾ, ಈ ವಿಚಾರದ ಬಗ್ಗೆ ಸಂಸತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಆರೋಪಗಳಿಗೆ ಜೈರಾಮ್ ರಮೇಶ್ ಅವರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ "ಕ್ಲೀನ್ ಚೀಟ್" ನೀಡುವಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ಅವರ ಪಕ್ಷದ "ಮನಸ್ಥಿತಿ"ಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಆರೋಪಿಸಿದರು.
"ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಕಾಂಗ್ರೆಸ್ ಪಾಕಿಸ್ತಾನದ ಡಿಜಿ ಐಎಸ್ಪಿಆರ್ (ಅಹ್ಮದ್ ಷರೀಫ್ ಚೌಧರಿ) ಮತ್ತು ಪಾಕಿಸ್ತಾನಿ ಯೂಟ್ಯೂಬರ್ಗಳ ಭಾಷೆಯಲ್ಲಿ ಮಾತನಾಡುತ್ತಿದೆ" ಎಂದು ಪೂನವಾಲ್ಲಾ ಆರೋಪಿಸಿದ್ದಾರೆ.
Advertisement