

ವಾರಾಣಸಿ: ವಾರಾಣಸಿಯಿಂದ ಮುಂಬೈಗೆ ಹೊರಟಿದ್ದ ಆಕಾಸ ಏರ್ಲೈನ್ಸ್ ವಿಮಾನ ಟೇಕ್ಆಫ್ ಆಗುವ ಮೊದಲು ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ QP 1497 ವಿಮಾನವು ಸೋಮವಾರ ಸಂಜೆ 6.45ಕ್ಕೆ ಮುಂಬೈಗೆ ಹೊರಟಿತ್ತು. ವಿಮಾನ ರನ್ವೇನಲ್ಲಿ ಸಾಗುತ್ತಿದ್ದಾಗ ಸುಜಿತ್ ಸಿಂಗ್ ಎನ್ನುವ ಪ್ರಯಾಣಿಕ ತುರ್ತು ನಿರ್ಗಮನದ ದ್ವಾರವನ್ನು ತೆಗೆಯಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಕ್ಯಾಬಿನ್ ಸಿಬ್ಬಂದಿ ಎಟಿಸಿಗೆ ಮಾಹಿತಿ ನೀಡಿ ವಿಮಾನವನ್ನು ನಿಲ್ಲಿಸಿದ್ದಾರೆ.
ಭದ್ರತಾ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಸುಜಿತ್ ಸಿಂಗ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ, ಸುಜಿತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕುತೂಹಲಕ್ಕಾಗಿ ಬಾಗಿಲು ತೆಗೆಯಲು ಯತ್ನಿಸಿದ್ದೇನೆ ಎಂದು ಸುಜಿತ್ ಹೇಳಿರುವುದಾಗಿ ಎಸ್ಎಚ್ಒ ಮಾಹಿತಿ ನೀಡಿದ್ದಾರೆ. ಬಳಿಕ ಸಂಜೆ 7.45ಕ್ಕೆ ವಿಮಾನ ಹಾರಾಟ ಆರಂಭಿಸಿತು.
Advertisement