

ಪಾಟ್ನಾ: ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಕ್ಕಾಗಿ ಪಾಟ್ನಾದ ಮಾನೇರ್ ವಿಧಾನಸಭಾ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ಭಾಯಿ ವೀರೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ವೃದ್ಧ ಮಹಿಳೆಯೊಬ್ಬರಿಗೆ ಅವರ ಮತಗಟ್ಟೆಯನ್ನು ಹುಡುಕಲು ಸಹಾಯ ಮಾಡುತ್ತಿದ್ದಾಗ ಭದ್ರತಾ ಸಿಬ್ಬಂದಿಯೊಂದಿಗೆ ಆರ್ಜೆಡಿ ನಾಯಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ದಾನಾಪುರ್-2 ಎಸ್ಡಿಪಿಒ ಅಮರೇಂದ್ರ ಕುಮಾರ್ ಝಾ ತಿಳಿಸಿದ್ದಾರೆ.
'ಮಾನೇರ್ ವಿಧಾನಸಭಾ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ಭಾಯಿ ವೀರೇಂದ್ರ ಅವರು ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ' ಎಂದು ಎಸ್ಡಿಪಿಒ ತಿಳಿಸಿದ್ದಾರೆ.
ಸಂಬಂಧಪಟ್ಟ ಭದ್ರತಾ ಸಿಬ್ಬಂದಿ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ, ಆ ಸ್ಥಾನದಿಂದ ಮರುಚುನಾವಣೆ ಬಯಸುತ್ತಿರುವ ಆರ್ಜೆಡಿ ನಾಯಕನ ವಿರುದ್ಧ 'ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕರ್ತವ್ಯದಲ್ಲಿದ್ದ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣ' ದಾಖಲಿಸಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ 121 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಿತು.
ರಾಜ್ಯದಲ್ಲಿ 3.75 ಕೋಟಿ ಮತದಾರರ ಪೈಕಿ ಶೇ 65ರಷ್ಟು ಜನರು ಈ ಕ್ಷೇತ್ರಗಳಾದ್ಯಂತ ತಮ್ಮ ಮತ ಚಲಾಯಿಸಿದ್ದು, 'ಈವರೆಗಿನ ಅತ್ಯಧಿಕ' ಮತದಾನ ಇದಾಗಿದೆ.
Advertisement