
ಅಹ್ಮದಾಬಾದ್: ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಹತ್ವದ ನಿರ್ಣಯ ಕೈಗೊಂಡಿದ್ದು, ಮತಾಂತರವಾದವರು, ಇತರರ ಮತಾಂತರಕ್ಕೆ ಮುಂದಾದರೆ ಕಠಿಣ ಕ್ರಮ ವಹಿಸಲಾಗುತ್ತದೆ ಎಂದು ಗುರುವಾರ ಹೇಳಿದೆ.
ಹೌದು.. 'ಯಾವುದೇ ವ್ಯಕ್ತಿ ಇನ್ನೊಂದು ಧರ್ಮಕ್ಕೆ ತಾನು ಮತಾಂತರಗೊಂಡು, ನಂತರ ಇತರರನ್ನೂ ಮತಾಂತರಗೊಳಿಸಲು ಯತ್ನಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಮತಾಂತರಕ್ಕೆ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ನಿರ್ಜಾರ್ ದೇಸಾಯಿ ಅವರ ಪೀಠವು ಈ ಮಹತ್ವದ ನಿರ್ಣಯ ಹೊರಡಿಸಿದೆ.
2006 ರಿಂದ 35 ಹಿಂದೂ ಕುಟುಂಬಗಳ 100 ಬುಡಕಟ್ಟು ಜನಾಂಗದವರನ್ನು ಮತಾಂತರಿಸಿದ ಪ್ರಕರಣದಲ್ಲಿ ಭರೂಚ್ನ ಅಮೋದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2021 ರ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ವಜಾಗೊಳಿಸಿದ ನಂತರ ಇತ್ತೀಚೆಗೆ ಹೊರಡಿಸಲಾದ ಆದೇಶದಲ್ಲಿ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ನೀಡಿದೆ.
'ಮೂಲತಃ ನಾವು ಹಿಂದೂಗಳಾಗಿದ್ದು, ನಮ್ಮನ್ನು ಇಸ್ಲಾಂಗೆ ಮತಾಂತರಿಸಲಾಗಿದೆ. ನಾವು ಈ ಪ್ರಕರಣದಲ್ಲಿ ಬಲಿಪಶುಗಳಾಗಿದ್ದೇವೆ. ಆದರೂ ನಮ್ಮ ವಿರುದ್ಧ ಮತಾಂತರದ ಆರೋಪ ಮಾಡಲಾಗಿದೆ. ನಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇವರ ವಿರುದ್ಧ ಹಲವರು ಮತಾಂತರದ ಆರೋಪ ಮಾಡಿದ್ದು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಫ್ಐಆರ್ ರದ್ದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಪೀಠ ವಜಾಗೊಳಿಸಿದ್ದು, ‘ಪ್ರಥಮ ಮಾಹಿತಿ ವರದಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಡ, ಆಮಿಷ ಹಾಗೂ ಪ್ರಭಾವ ಬೀರಿದ್ದು ದಾಖಲಾಗಿದೆ. ಜತೆಗೆ ಸಾಕ್ಷಿಗಳೂ ಅದನ್ನೇ ಹೇಳಿದ್ದಾರೆ. ಈ ಎಲ್ಲವನ್ನೂ ಪರಿಶೀಲಿಸಿದ ನ್ಯಾಯಾಲಯವು, ಮತಾಂತರದ ಸಂತ್ರಸ್ತರು ಎಂದು ಹೇಳಿಕೊಂಡಿರುವ ಆರೋಪಿಗಳು ಮೇಲ್ನೋಟಕ್ಕೆ ಮತಾಂತರದಲ್ಲಿ ಭಾಗಿಯಾಗಿದ್ದಾರೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
'ಆರೋಪ ಹೊತ್ತವರು ಹಿಂದೆ ಹಿಂದೂಗಳಾಗಿದ್ದರು ಮತ್ತು ಮತಾಂತರದ ಸಂತ್ರಸ್ತರು ಎಂದು ಒಪ್ಪಲು ಸಾಧ್ಯವಿಲ್ಲ. ಎಫ್ಐಆರ್ನಲ್ಲಿ ದಾಖಲಾಗಿರುವ, ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ಆರೋಪ ಪಟ್ಟಿಯನ್ನು ಗಮನಿಸಿದರೆ ಇವರು ಸಂತ್ರಸ್ತರು ಎಂದು ಹೇಳಲು ಸಾಧ್ಯವಿಲ್ಲ ಹೇಳಿದೆ.
37 ಹಿಂದೂ ಕುಟುಂಬಗಳು ಇಸ್ಲಾಂಗೆ ಮತಾಂತರ
‘ಇಸ್ಲಾಂಗೆ ಮತಾಂತರಗೊಂಡಿದ್ದಕ್ಕೆ ಮೂವರು ವ್ಯಕ್ತಿಗಳು ಹೆಬ್ಬೆಟ್ಟಿನ ರುಜುವಾತನ್ನು ಪಡೆದಿದ್ದಾರೆ ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ. ಈ ಕಾರ್ಯ ನಡೆಸಿದ್ದಕ್ಕಾಗಿ ಮೂವರಲ್ಲಿ ಒಬ್ಬರಿಗೆ ಆರ್ಥಿಕ ನೆರವು ಲಭಿಸುತ್ತಿದೆ. ಇವರು ಸುಮಾರು 37 ಹಿಂದೂ ಕುಟುಂಬಗಳ ನೂರಕ್ಕೂ ಹೆಚ್ಚು ಜನರನ್ನು ಇಸ್ಲಾಂಗೆ ಮತಾಂತರಿಸಿದ್ದಾರೆ. ಸಂತ್ರಸ್ತರಿಗೆ ಹಣದ ಆಮಿಷ ಒಡ್ಡಲಾಗಿದೆ. ತಿರಸ್ಕರಿಸಿದವರನ್ನು ಬೆದರಿಸಲಾಗಿದೆ. ನಂತರ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಎಫ್ಐಆರ್ ದಾಖಲಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
Advertisement