
ನವದೆಹಲಿ: ಯಮುನಾ ನದಿ ಅಪಾಯ ಮಟ್ಟಕ್ಕಿಂತ 207 ಮೀಟರ್ ಎತ್ತರದಲ್ಲಿ ಉಕ್ಕಿ ಹರಿಯುತ್ತಿದ್ದು, ದೆಹಲಿಯ ತಗ್ಗು ಪ್ರದೇಶಗಳ ನಿವಾಸಿಗಳು ತಮ್ಮ ಜೀವ ಮತ್ತು ವಸ್ತುಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ರಸ್ತೆಗಳು ಹೊಳೆಯಂತಾಗಿದ್ದು, ಮಾರುಕಟ್ಟೆ ಪ್ರದೇಶಗಳು ಕೊಳಚೆ ನೀರಿನ ಕೊಳಗಳಾಗಿ ಮಾರ್ಪಟ್ಟಿವೆ.
ಮಜ್ನು ಕಾ ತಿಲಾದ ಅಂಗಡಿಯವರಿಂದ ಹಿಡಿದು ಮದನ್ಪುರ್ ಖಾದರ್ ಮತ್ತು ಬದರ್ಪುರ್ನ ಕುಟುಂಬಗಳವರೆಗೆ, ಅನೇಕರು ಈಗ ತಾತ್ಕಾಲಿಕ ಶೆಲ್ಟರ್ ಗಳಲ್ಲಿ ವಾಸಿಸುತ್ತಿದ್ದಾರೆ.
ಬುಧವಾರ ಮಧ್ಯಾಹ್ನ 1 ಗಂಟೆಗೆ ಯಮುನಾ ನದಿ 207 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಅಧಿಕಾರಿಗಳು ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿದ್ದು, ಹಳೆಯ ರೈಲ್ವೆ ಸೇತುವೆಯನ್ನು ಬಂದ್ ಮಾಡಿದ್ದಾರೆ. ಆದರೆ ನದಿ ನೀರು ಕಡಿಮೆಯಾದ ನಂತರ ಸ್ಥಳಾಂತರಗೊಂಡ ಕುಟುಂಬಗಳ ನಿಜವಾದ ಹೋರಾಟ ಪ್ರಾರಂಭವಾಗುತ್ತದೆ. ಏಕೆಂದರೆ ಅವು ಪ್ರವಾಹದಿಂದ ಕೊಚ್ಚಿಹೋದ ಮನೆಗಳಾಗಿದ್ದು, ಅವರ ಜೀವನ ಮೂರಾಬಟ್ಟೆಯಾಗಿದೆ.
ಅಂಗಡಿಯೊಂದರ ಮಾಲೀಕ ಅನುಪ್ ಥಾಪಾ ಮಾತನಾಡಿ, ರಾತ್ರಿ 11 ಗಂಟೆ ಸುಮಾರಿಗೆ ನಮ್ಮ ಅಂಗಡಿಯಿಂದ ಬಹುತೇಕ ಸಾಮಾಗ್ರಿಗಳನ್ನು ತೆಗೆದುಕೊಂಡು ಬಂದಿದ್ದೇವೆ. ಆದರೆ ಕೆಲವು ವಸ್ತುಗಳು ನೀರು ಪಾಲಾಗಿವೆ. ನೀರು ಹೋದ ನಂತರ, ನಾವು ಅಂಗಡಿಯನ್ನು ದುರಸ್ತಿ ಮಾಡಬೇಕಾಗುತ್ತದೆ, ಅದು ನಮಗೆ ಹೆಚ್ಚು ವೆಚ್ಚವಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಅಂಗಡಿಯ ಪಕ್ಕದಲ್ಲಿ ತನ್ನ ಪತ್ನಿ ಮತ್ತು ಮೂರು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದ ಥಾಪಾ ರಸ್ತೆ ಬದಿಯ ಶೆಲ್ಟರ್ ಗೆ ಸ್ಥಳಾಂತರಗೊಂಡಿದ್ದಾರೆ.
"2023ರ ನಂತರ ಇದು ಎರಡನೇ ಬಾರಿ ಈ ರೀತಿ ಆಗಿದೆ. ಇಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸದಂತೆ ಬೀದಿಗಳನ್ನು ಸ್ವಚ್ಛಗೊಳಿಸಿ ಪ್ರದೇಶವನ್ನು ಸರಿಪಡಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಅವರು ಪ್ರವಾಹದ ನೀರಿನ ಮೇಲೆ ಅಪಾಯಕಾರಿಯಾಗಿ ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ತೋರಿಸುತ್ತಾ ಹೇಳಿದ್ದಾರೆ.
"ನಮಗೆ ಆಹಾರ ಅಥವಾ ಪಾತ್ರೆಗಳು ಸಹ ಇರಲಿಲ್ಲ. ಬಿಸ್ಕತ್ತು ಮತ್ತು ಬನ್ ಗಳಿಂದ ಮಾತ್ರ ಬದುಕುಳಿದಿದ್ದೇವೆ. ಅಡುಗೆಗೆ ಅಗತ್ಯವಾದ ವಸ್ತುಗಳನ್ನು ತರಲು ನಮಗೆ ಸಾಧ್ಯವಾಗುತ್ತಿಲ್ಲ ಮತ್ತು ಈಗ ನಮಗೆ ಅಡುಗೆ ಮಾಡಲು ಯಾವುದೇ ಸೌಲಭ್ಯಗಳಿಲ್ಲ - ನಾವು ಕಿಯೋಸ್ಕ್ ನಿಂದ ಖರೀದಿಸಬಹುದಾದ ಯಾವುದನ್ನಾದರೂ ಆಧರಿಸಿ ಬದುಕುಳಿಯುತ್ತಿದ್ದೇವೆ" ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.
Advertisement