
ನವದೆಹಲಿ: ಕೆಂಪು ಕೋಟೆ ಆವರಣದಲ್ಲಿ ನಡೆದ ಜೈನ ಧಾರ್ಮಿಕ ಕಾರ್ಯಕ್ರಮದ ವೇಳೆ ಸುಮಾರು 1 ಕೋಟಿ ರೂ. ಮೌಲ್ಯದ ರತ್ನ ಖಚಿತ ಚಿನ್ನದ 'ಕಲಶ' ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಹಾಪುರದಲ್ಲಿ ಬಂಧಿಸಲಾಗಿದೆ.
ಭೂಷಣ್ ವರ್ಮಾ ಬಂಧಿತ ಆರೋಪಿ. ಕಳುವಾದ ವಸ್ತುಗಳಲ್ಲಿ ಚಿನ್ನದ ‘ ಝರಿ ‘ಮತ್ತು ಸುಮಾರು 760 ಗ್ರಾಂ ತೂಕದ ಚಿನ್ನದ ತೆಂಗಿನಕಾಯಿ, ವಜ್ರಗಳು, ಪಚ್ಚೆಗಳು ಮತ್ತು ಮಾಣಿಕ್ಯಗಳಿಂದ ಕೂಡಿದ 115 ಗ್ರಾಂ ಚಿನ್ನದ ‘ಝರಿ’ ಸೇರಿವೆ ಎನ್ನಲಾಗಿದೆ. ಈ ವಸ್ತುಗಳನ್ನು ಜೈನ ಆಚರಣೆಗಳಲ್ಲಿ ಬಳಸಲಾಗುತ್ತದೆ, ಆದ್ದರಿಂದ ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಇವು ಉದ್ಯಮಿ ಸುಧೀರ್ ಜೈನ್ ಅವರ ಒಡೆತನದಲ್ಲಿದ್ದವು, ಅವರು ಪ್ರತಿದಿನ ಧಾರ್ಮಿಕ ಕಾರ್ಯಗಳಿಗಾಗಿ ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದರು. ಆರೋಪಿ ಕದ್ದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.ಕೆಂಪು ಕೋಟೆ ಆವರಣದಲ್ಲಿರುವ 15 ಆಗಸ್ಟ್ ಪಾರ್ಕ್ನಲ್ಲಿ 10 ದಿನಗಳ ಜೈನ ಧಾರ್ಮಿಕ ಕಾರ್ಯಕ್ರಮವಾದ ‘ದಶಲಕ್ಷಣ ಮಹಾಪರ್ವ’ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ.
ಜೈನ ಅರ್ಚಕನ ವೇಷದಲ್ಲಿ ಬಂದು ಕಳ್ಳ ತನ್ನ ಕೈಚಳಕವನ್ನು ತೋರಿಸಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ. ಆಯೋಜಕರು ಗಣ್ಯರನ್ನು ಸ್ವಾಗತಿಸಲು ವ್ಯವಸ್ಥೆಗಳಲ್ಲಿ ನಿರತರಾಗಿದ್ದಾಗ ಘಟನೆ ನಡೆದಿದೆ. ವಿಧ್ಯುಕ್ತ ಚಟುವಟಿಕೆಗಳು ಆರಂಭವಾದಾಗ ವೇದಿಕೆಲ್ಲಿರಬೇಕಾದ ವಸ್ತುಗಳು ಕಾಣೆಯಾಗಿವೆ.
Advertisement