
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, "ಅಂದು ಇಬ್ಬರು ಗುಜರಾತಿಗಳು ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಈಗ ಇಬ್ಬರು ಗುಜರಾತಿಗಳು ಜನರನ್ನು ವಿಭಜಿಸುವ ಮೂಲಕ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಇಂದು ಗುಜರಾತ್ ನ ಜುನಾಗಢದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಸಂವಿಧಾನವನ್ನು ರಕ್ಷಿಸುವುದಾಗಿ ಮತ್ತು 2027 ರ ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವುದಾಗಿ ಪ್ರತಿಜ್ಞೆ ಮಾಡಿದರು.
ಗುಜರಾತ್ ಅನ್ನು ಮರಳಿ ಪಡೆಯುವ ಕಾಂಗ್ರೆಸ್ನ ಮಾರ್ಗಸೂಚಿಯು ಜುನಾಗಢದಲ್ಲಿ ಗೋಚರಿಸಿತು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2027 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಇದು ಲಾಂಚ್ಪ್ಯಾಡ್ ಎಂದು ಘೋಷಿಸಿ, ಬೃಹತ್ ತರಬೇತಿ ಶಿಬಿರವನ್ನು ಉದ್ಘಾಟಿಸಿದರು.
ಸೆಪ್ಟೆಂಬರ್ 12 ಮತ್ತು 17 ರಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದು, ಪ್ರೇರಣಾಧಮ್ನಲ್ಲಿ ನಡೆಯುವ ಈ ಶಿಬಿರವು ಸೆಪ್ಟೆಂಬರ್ 19 ರವರೆಗೆ ನಡೆಯಲಿದ್ದು, ಹೊಸದಾಗಿ ನೇಮಕಗೊಂಡ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷರಿಗೆ ತರಬೇತಿ ನೀಡಲಾಗುತ್ತಿದೆ.
ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿ ಅಥವಾ ಬಿಜೆಪಿ ನಾಯಕರನ್ನು ನೇರವಾಗಿ ಹೆಸರಿಸದೆ, " ಅಂದು ಇಬ್ಬರು ಗುಜರಾತಿಗಳು ನಮಗೆ ಸ್ವಾತಂತ್ರ್ಯವನ್ನು ನೀಡಿದರು. ಈ ದೇಶವನ್ನು ಒಗ್ಗೂಡಿಸಿದರು. ಈಗ, ಇನ್ನಿಬ್ಬರು ಗುಜರಾತಿಗಳು ಜನರನ್ನು ವಿಭಜಿಸುವ ಮೂಲಕ ಮತ್ತು ನಮ್ಮ ಸಂವಿಧಾನವನ್ನು ದುರ್ಬಲಗೊಳಿಸುವ ಮೂಲಕ ಆ ಪರಂಪರೆಯನ್ನು ನಾಶಪಡಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸುತ್ತೇವೆ
ಅಧಿಕಾರದಲ್ಲಿರುವವರು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಣೆ ಮಾಡುತ್ತಿಲ್ಲ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಿಸುವುದು ನಮ್ಮ ಪಕ್ಷದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗುಜರಾತ್ ನಲ್ಲಿ ಮಹಾತ್ಮ ಗಾಂಧಿಜೀ, ಸರ್ದಾರ್ ಪಟೇಲ್ ಮತ್ತು ದಾದಾಭಾಯಿ ನೌರೋಜಿ ಅವರಂತಹ ಮಹಾನ್ ವ್ಯಕ್ತಿಗಳು ಜನಿಸಿದ್ದಾರೆ. ಗಾಂಧೀಜಿ ನಮಗೆ ಕಾಂಗ್ರೆಸ್ನ ಕೆಲಸವೆಂದರೆ ತಳಮಟ್ಟದಲ್ಲಿರುವವರನ್ನು ಮೇಲಕ್ಕೆತ್ತುವುದು ಮತ್ತು ಸಮಾನತೆಯನ್ನು ತರುವುದು ಎಂದು ಹೇಳಿದರು. ಸಂಘಟನೆಯಿಲ್ಲದೆ ಶಕ್ತಿ ನಿಷ್ಪ್ರಯೋಜಕ ಎಂದು ಸರ್ದಾರ್ ಪಟೇಲ್ ನಂಬಿದ್ದರು ಮತ್ತು ನೆಹರೂಜಿ ನಮಗೆ ಬದಲಾವಣೆಗೆ ಹೊಂದಿಕೊಳ್ಳಲು ಮತ್ತು ಜನರೊಂದಿಗೆ ಸಂಪರ್ಕದಲ್ಲಿರಲು ಕಲಿಸಿದರು ಎಂದರು.
Advertisement