CEC 'ಮತ ಕಳ್ಳರ ರಕ್ಷಕ', ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ
ಲೋಕಸಭೆ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಭಾರತದ ಚುನಾವಣಾ ಆಯೋಗದ ಮೇಲೆ ತೀವ್ರ ವಾಗ್ದಾಳಿ ಮುಂದುವರಿಸಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು "ಮತ ದೋಚುವವರನ್ನು ರಕ್ಷಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಇಂದು ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ವಿಶೇಷ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅರಿತುಕೊಂಡು ಈ ಹೇಳಿಕೆಗಳನ್ನು ನೀಡುತ್ತಿದ್ದೇನೆ ಎಂದು ಹೇಳಿದರು.
ಭಾರತದ ಮುಖ್ಯ ಚುನಾವಣಾ ಆಯುಕ್ತರು ಭಾರತೀಯ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರನ್ನು ರಕ್ಷಿಸುತ್ತಿದ್ದಾರೆ ಎಂಬುದಕ್ಕೆ ನನ್ನಲ್ಲಿ ಸ್ಪಷ್ಟ ಪುರಾವೆಗಳಿವೆ. ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ನಾನು ನಿಮಗೆ ತೋರಿಸಲಿದ್ದೇನೆ ಎಂದರು.
ಇಷ್ಟು ವರ್ಷಗಳಲ್ಲಿ, ವಿವಿಧ ಚುನಾವಣೆಗಳಲ್ಲಿ "ಕೆಲವು ಶಕ್ತಿಗಳು" ಭಾರತದಾದ್ಯಂತ ಲಕ್ಷಾಂತರ ಮತದಾರರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿವೆ. ವಿರೋಧ ಪಕ್ಷಗಳಿಗೆ ಮತ ಹಾಕುತ್ತಿದ್ದ ದಲಿತರು, ಅಲ್ಪಸಂಖ್ಯಾತರು, ಒಬಿಸಿಗಳು ಮತ್ತು ಆದಿವಾಸಿಗಳು ಸೇರಿದಂತೆ ಸಮುದಾಯಗಳ ಮತಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದರು.
ಈಗ ನಾನು ಹೇಳುತ್ತಿರುವುದು ಶೇಕಡಾ 100ರಷ್ಟು ಸತ್ಯ. ನಾನು ನನ್ನ ದೇಶವನ್ನು ಪ್ರೀತಿಸುವ ವ್ಯಕ್ತಿ, ನನ್ನ ಸಂವಿಧಾನವನ್ನು ಪ್ರೀತಿಸುತ್ತೇನೆ, ನಾನು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರೀತಿಸುತ್ತೇನೆ. ನಾನು ಆ ಪ್ರಕ್ರಿಯೆಯನ್ನು ರಕ್ಷಿಸುತ್ತಿದ್ದೇನೆ. ಪುರಾವೆಗಳಿಲ್ಲದೆ ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ ಎಂದರು.
ರಾಹುಲ್ ಗಾಂಧಿ ಆರೋಪವೇನು?
ಕರ್ನಾಟಕದ ಒಂದು ಕ್ಷೇತ್ರದಲ್ಲಿ ಸಾಮೂಹಿಕ ಮತ ಅಳಿಸುವಿಕೆಯನ್ನು ವಿವರಿಸಿದ ರಾಹುಲ್ ಗಾಂಧಿ, ಆಳಂದ ಕರ್ನಾಟಕದ ಒಂದು ಕ್ಷೇತ್ರವಾಗಿದೆ. ಆಳಂದ ಕ್ಷೇತ್ರದಲ್ಲಿ 6018 ಮತದಾರರ ಹೆಸರು ಅಳಿಸಲಾಗಿದೆ. 2023 ರ ಚುನಾವಣೆಯಲ್ಲಿ ಆಳಂದದಲ್ಲಿ 6,018 ಕ್ಕಿಂತ ಹೆಚ್ಚು ಮತಗಳನ್ನು ಅಳಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಸ್ವಂತ ಚಿಕ್ಕಪ್ಪನ ಮತವನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಂಡುಕೊಂಡಾಗ ಈ ವಂಚನೆ ಆಕಸ್ಮಿಕವಾಗಿ ಬಹಿರಂಗವಾಯಿತು ಎಂದರು.
ಅವರು ತಮ್ಮ ಚಿಕ್ಕಪ್ಪನ ಮತವನ್ನು ಯಾರು ಅಳಿಸಿದ್ದಾರೆಂದು ಪರಿಶೀಲಿಸಿದರು, ಮತವನ್ನು ಅಳಿಸಿದ್ದು ನೆರೆಹೊರೆಯವರು ಎಂದು ಕಂಡುಕೊಂಡು ತಮ್ಮ ನೆರೆಹೊರೆಯವರನ್ನು ಕೇಳಿದರು, ಆದರೆ ಅವರು ನಾನು ಯಾವುದೇ ಮತವನ್ನು ಅಳಿಸಿಲ್ಲ ಎಂದು ಹೇಳಿದರು. ಮತವನ್ನು ಅಳಿಸಿದ ವ್ಯಕ್ತಿಯಾಗಲಿ ಅಥವಾ ಯಾರ ಮತವನ್ನು ಅಳಿಸಲಾಗಿದೆಯೋ ಆ ವ್ಯಕ್ತಿಯಾಗಲಿ ತಿಳಿದಿಲ್ಲ. ಬೇರೆ ಯಾವುದೋ ಶಕ್ತಿ ಪ್ರಕ್ರಿಯೆಯನ್ನು ಹೈಜಾಕ್ ಮಾಡಿ ಮತವನ್ನು ಅಳಿಸಿದೆ" ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ