
ಮಣಿಪುರ: ಮಣಿಪುರದ ಇಂಫಾಲ್ ಹೊರವಲಯದಲ್ಲಿ ಇಂದು ಸಂಜೆ ಬಂದೂಕುಧಾರಿಗಳ ಗುಂಪೊಂದು ಅಸ್ಸಾಂ ರೈಫಲ್ಸ್ನ ಟ್ರಕ್ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ ಪರಿಣಾಮ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಂಫಾಲ್ನಲ್ಲಿರುವ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ದಾಖಲಿಸಲಾಗಿದೆ.
ಸಂಜೆ 5.50 ಕ್ಕೆ ಪಟ್ಸೊಯ್ ಕಂಪನಿಯ ಕಾರ್ಯಾಚರಣೆ ನೆಲೆಯಿಂದ ನಂಬೋಲ್ ನೆಲೆಗೆ ಪ್ರಯಾಣಿಸುತ್ತಿದ್ದಾಗ, ಅರೆಸೈನಿಕ ಪಡೆಗಳ 407 ಟಾಟಾ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದರು. ಪ್ರಧಾನಿ ನರೇಂದ್ರ ಮೋದಿ ಒಂದು ವಾರದ ಹಿಂದೆ ಮಣಿಪುರಕ್ಕೆ ಭೇಟಿ ನೀಡಿದ್ದಾಗ ಅವರು ತೆರಳಿದ ಅದೇ ರಸ್ತೆಯಲ್ಲಿ ಈ ಘತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಹೊಂಚುಹಾಕಿ ದಾಳಿ ನಡೆಸಲಾದ ಸ್ಥಳ ಇಂಫಾಲ ಮತ್ತು ಚುರಚಂದ್ಪುರದ ಮಧ್ಯದಲ್ಲಿದೆ. "ಸಾಮಾನ್ಯ ಪ್ರದೇಶವಾದ ನಂಬೋಲ್ ಸಬಲ್ ಲೈಕೈನಲ್ಲಿ, ಮಣಿಪುರದ ಡಿನೋಟಿಫೈಡ್ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಗುರುತಿಸಲಾಗದ ಭಯೋತ್ಪಾದಕರು ಕಾವಲುಗಾರರ ಮೇಲೆ ದಾಳಿ ನಡೆಸಿದ್ದಾರೆ. ನಂತರದ ಕಾರ್ಯಾಚರಣೆಯಲ್ಲಿ, ಅಸ್ಸಾಂ ರೈಫಲ್ಸ್ನ ಇಬ್ಬರು ಸಿಬ್ಬಂದಿ ಹುತಾತ್ಮರಾದರು ಮತ್ತು ಐದು ಮಂದಿ ಗಾಯಗೊಂಡರು" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇಲ್ಲಿಯವರೆಗೆ, ಯಾವುದೇ ಗುಂಪು ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಘಟನೆಯಲ್ಲಿ ಭಾಗಿಯಾಗಿರುವ ಸಶಸ್ತ್ರ ವ್ಯಕ್ತಿಗಳನ್ನು ಹಿಡಿಯಲು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ.
ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ದಾಳಿಯನ್ನು ಖಂಡಿಸಿದ್ದಾರೆ ಮತ್ತು ತೀವ್ರ ದುಃಖ ವ್ಯಕ್ತಪಡಿಸಿದ್ದು, ಕರ್ತವ್ಯದ ಸಮಯದಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಅವರು ಪ್ರಾರ್ಥಿಸಿದರು. ಯಾವುದೇ ಸಂದರ್ಭದಲ್ಲೂ ಇಂತಹ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಭಲ್ಲಾ ಹೇಳಿದ್ದಾರೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಲವಾದ ಸಂಕಲ್ಪದೊಂದಿಗೆ ಭಯೋತ್ಪಾದಕರನ್ನು ಎದುರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಣಿವೆ ಪ್ರದೇಶದ ಐದು ಜಿಲ್ಲೆಗಳ 13 ಪೊಲೀಸ್ ಠಾಣೆ ಪ್ರದೇಶಗಳನ್ನು ಹೊರತುಪಡಿಸಿ, ಮಣಿಪುರ ರಾಜ್ಯದಾದ್ಯಂತ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಅನ್ವಯಿಸುತ್ತದೆ. ನಂಬೋಲ್ ಬಿಷ್ಣುಪುರ ಜಿಲ್ಲೆಯ ಅಡಿಯಲ್ಲಿ ಬರುತ್ತದೆ, ಇದು AFSPA ವ್ಯಾಪ್ತಿಗೆ ಒಳಪಡುವುದಿಲ್ಲ. AFSPA ಅನ್ನು ಕೊನೆಯದಾಗಿ ಮಾರ್ಚ್ 2025 ರಲ್ಲಿ ಆರು ತಿಂಗಳವರೆಗೆ ವಿಸ್ತರಿಸಲಾಯಿತು. ಈ ತಿಂಗಳ ಅಂತ್ಯದಲ್ಲಿ ಅದನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಗೃಹ ಸಚಿವಾಲಯದ ನಿಷೇಧಿತ ಸಂಘಟನೆಗಳ ಪಟ್ಟಿಯ ಪ್ರಕಾರ ಮಣಿಪುರದಲ್ಲಿ 9 ನಿಷೇಧಿತ ಮೈತೈ ಭಯೋತ್ಪಾದಕ ಗುಂಪುಗಳಿವೆ. 2021 ರ ನವೆಂಬರ್ನಲ್ಲಿ ಚುರಾಚಂದ್ಪುರ ಜಿಲ್ಲೆಯಲ್ಲಿ ಹೊಂಚುದಾಳಿಯಲ್ಲಿ ಕರ್ನಲ್ ವಿಪ್ಲವ್ ತ್ರಿಪಾಠಿ, ಅವರ ಪತ್ನಿ ಮತ್ತು ಮಗನ ಹತ್ಯೆ ಸೇರಿದಂತೆ ಅಸ್ಸಾಂ ರೈಫಲ್ಸ್ ಮೇಲಿನ ದಾಳಿಗಳಿಗೆ ಅವರು ಕಾರಣರಾಗಿದ್ದಾರೆ. ಸೆಹ್ಕೆನ್ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಅಸ್ಸಾಂ ರೈಫಲ್ಸ್ ಕರ್ನಲ್ ಅವರ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿ, ಅವರು, ಅವರ ಪತ್ನಿ, ಅವರ ಮಗ ಮತ್ತು ಮೂವರು ಕ್ವಿಕ್ ರಿಯಾಕ್ಷನ್ ತಂಡದ ಜವಾನರು ಸ್ಥಳದಲ್ಲೇ ಸಾವನ್ನಪ್ಪಿದರು.
Advertisement