
ಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ 'I Love Muhammad' ರ್ಯಾಲಿ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಖಡಕ್ ಎಚ್ಚರಿಕೆ ನೀಡಿರುವ ಸಿಎಂ ಯೋಗಿ ಆದಿತ್ಯಾನಾಥ್ (Yogi Adityanath), 'ಸರ್ಕಾರ ಯಾರದ್ದು ಅಂತ ಮೌಲಾನ ಮರೆತಿದ್ದಾರೆ.. ಅವರ ತಲೆಮಾರುಗಳು ನೆನಪಿನಲ್ಲಿಟ್ಟುಕೊಳ್ಳೋ ಪಾಠ ಕಲಿಸುತ್ತೇವೆ' ಎಂದು ಹೇಳಿದ್ದಾರೆ.
ಹೌದು.. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಗರಂ ಆಗಿದ್ದು, ಇತ್ತೀಚಿನ ಬರೇಲಿ ಘಟನೆಯನ್ನು ನೇರವಾಗಿ ಗುರಿಯಾಗಿಸಿಕೊಂಡ ಅವರು ನೇರವಾಗಿ ಪ್ರಚೋದನೆ ನೀಡುತ್ತಿರುವ ಧಾರ್ಮಿಕ ಮುಖಂಡರುಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಲಕ್ನೋದಲ್ಲಿ ನಡೆದ 'ಡೆವಲಪ್ಡ್ ಉತ್ತರ ಪ್ರದೇಶ ವಿಷನ್ @ 2047' ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯಾನಾಥ್, "ಬರೇಲಿಯಲ್ಲಿ, ಒಬ್ಬ ಮೌಲಾನಾ ಅಧಿಕಾರದಲ್ಲಿ ಯಾರು ಇದ್ದಾರೆ ಎಂಬುದನ್ನು ಮರೆತಿದ್ದಾರೆ. ಅವರು ದಿಗ್ಬಂಧನ ಹೇರುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ದಿಗ್ಬಂಧನ ಅಥವಾ ಕರ್ಫ್ಯೂ ಎರಡೂ ನಡೆಯುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಅವರು ಹೀಗೆಯೇ ಮುಂದುವರೆದರೆ ಅವರ ಭವಿಷ್ಯದ ಪೀಳಿಗೆಗಳು ಸಹ ಗಲಭೆಯ ಕಲ್ಪನೆಯನ್ನು ಮರೆಯುವಂತೆ ನಾವು ಪಾಠ ಕಲಿಸುತ್ತೇವೆ" ಎಂದು ಗುಡುಗಿದ್ದಾರೆ.
2017 ರಿಂದ, ತಮ್ಮ ಸರ್ಕಾರವು ಗಲಭೆಕೋರರನ್ನು "ಒಬ್ಬೊಬ್ಬರಾಗಿ, ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ" ನಿಭಾಯಿಸುತ್ತಾ ಬಂದಿದೆ. ಇದು ಉತ್ತರ ಪ್ರದೇಶದ ಬೆಳವಣಿಗೆಯ ಕಥೆಗೆ ಶಕ್ತಿ ತುಂಬಿದ ಶಾಂತಿ ಮತ್ತು ಭದ್ರತೆಯ ಹೊಸ ಯುಗವನ್ನು ಪ್ರಾರಂಭಿಸಿದೆ. ಆದರೆ ರಾಜ್ಯದ ಅಭಿವೃದ್ದಿ ಕೆಲವರಿಗೆ ರುಚಿಸುತ್ತಿಲ್ಲ. ಹೀಗಾಗಿ ಅವರು ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇಂತಹ ದುರಾತ್ಮಗಳಿಗೆ ಡೆಂಟಿಂಗ್ ಪೇಟಿಂಗ್ ಮಾಡುವ ಅವಶ್ಯಕತೆ ಇದೆ. ಇದಕ್ಕಾಗಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಸರಿಪಡಿಸಬೇಕಿದೆ. ಇದೇ ರೀತಿ ಬರೇಲಿಯಲ್ಲಿ ಇಂತಹ ಡೆಂಟಿಂಗ್ ಪೇಟಿಂಗ್ ನಡೆದಿದೆ. ಧಮ್ಕಿ ಹಾಕಿ ಬಲವಂತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದರೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ಕೊಂಡಿದ್ದಾರೆ. ಆದರೆ ಅವರು ಬಹುಶಃ ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂಬುದನ್ನು ಮರೆತಂತಿದೆ ಎಂದು ಹೇಳಿದರು.
ಅಂತೆಯೇ ಇದು ಯಾವ ರೀತಿಯ ಪ್ರತಿಭಟನೆ. ನೀವು ಇಡೀ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಲು ಮುಂದಾಗಿದ್ದೀರಿ. ಇಂತಹ ಪ್ರವೃತ್ತಿ ಉತ್ತರ ಪ್ರದೇಶದಲ್ಲಿ ನಡೆಯುವುದಿಲ್ಲ. 2017ರ ಮೊದಲು ನಡೆಯುತ್ತಿತ್ತು. ಆದರೆ ಈಗ ಅದು ನಡೆಯುವುದಿಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಅವರಿಗೆ ಪಾಠ ಕಲಿಸುತ್ತೇವೆ ಎಂದು ಯೋಗಿ ಆದಿತ್ಯಾನಾಥ್ ಹೇಳಿದರು.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ 'ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (IMC) ಮುಖ್ಯಸ್ಥ ಮೌಲಾನಾ ತೌಕೀರ್ ರಜಾ.. 'ಐ ಲವ್ ಮುಹಮ್ಮದ್' (I Love Muhammad) ಹೆಸರಿನಲ್ಲಿ ಆರಂಭಿಸಿದ್ದ ಪ್ರತಿಭಟನಾ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಇದೇ ಹಿಂಸಾಚಾರದ ವಿವಾದಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಈ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಸುಮಾರು 40 ಜನರನ್ನು ಬಂಧಿಸಲಾಗಿದೆ, ಆದರೆ ಸುಮಾರು 2,000 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸರು ಪ್ರತಿಭಟನಾ ರ್ಯಾಲಿಗೆ ಅನುಮತಿ ನಿರಾಕರಿಸಿದರೂ, ಶುಕ್ರವಾರದ ಪ್ರಾರ್ಥನೆಯ ನಂತರ ಮೌಲಾನಾ ರಜಾ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು. ಗುಂಪು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿತು. ಪೊಲೀಸರು ಅವರನ್ನು ಚದುರಿಸಲು ಲಾಠಿಚಾರ್ಜ್ ಮಾಡಬೇಕಾಯಿತು.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಗಲಭೆಕೋರರು ಕಾರುಗಳು ಮತ್ತು ಬೈಕ್ಗಳನ್ನು ಧ್ವಂಸಗೊಳಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಹಲವರು ಚಪ್ಪಲಿ ಮತ್ತು ಬೂಟುಗಳ ರಾಶಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಪಿನಲ್ಲಿ ಅನೇಕ ಅಪ್ರಾಪ್ತ ವಯಸ್ಕರು ಸಹ ಕಾಣಿಸಿಕೊಂಡಿದ್ದಾರೆ.
ಅಧಿಕಾರಿಗಳು ನಿನ್ನೆ ರಾತ್ರಿ ಮೌಲಾನಾ ತೌಕೀರ್ ರಜಾ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದರು. ಅವರನ್ನು ಮುಂಜಾನೆ ಬಂಧಿಸಲಾಯಿತು ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ ನಂತರ ಬೆಳಿಗ್ಗೆ 6 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಜೈಲಿಗೆ ಕಳುಹಿಸಿದೆ. ಭದ್ರತಾ ಕಾರಣಗಳಿಂದಾಗಿ ಮೌಲಾನಾ ಅವರನ್ನು ನಂತರ ಸೀತಾಪುರ ಜೈಲಿಗೆ ಸ್ಥಳಾಂತರಿಸಲಾಯಿತು.
ಏನಿದು ಘಟನೆ?
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಯ ಹೊರಗೆ ಸ್ಥಳೀಯ ಮುಸ್ಲಿಮರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದವು. ಮೌಲಾನಾ ತೌಕೀರ್ ರಜಾ ಖಾನ್ ಅವರ ಕರೆಯ ಮೇರೆಗೆ, 'ಐ ಲವ್ ಮೊಹಮ್ಮದ್' ಅನ್ನು ಬೆಂಬಲಿಸಿ ನಗರದಲ್ಲಿ ಮುಸ್ಲಿಂ ಜನಸಮೂಹ ಜಮಾಯಿಸಿತ್ತು. ಅವರು ಇಸ್ಲಾಮಿಯಾ ಮೈದಾನಕ್ಕೆ ಹೋಗಲು ಬಯಸಿದ್ದರು, ಮತ್ತು ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ, "ಅಲ್ಲಾಹು ಅಕ್ಬರ್" ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಖಲೀಲ್ ಶಾಲಾ ಜಂಕ್ಷನ್ ಬಳಿ ಗಲಭೆಕೋರರು ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಿದರು. "ಐ ಲವ್ ಮುಹಮ್ಮದ್" ಎಂದು ಬರೆದ ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ಹಿಡಿದು ನಗರದ ವಿವಿಧ ಪ್ರದೇಶಗಳಲ್ಲಿ ನೂರಾರು ಜನರು ಬೀದಿಗಿಳಿದಿದ್ದರು.
Advertisement