Karur Stampede: 'ಸಾಕಷ್ಟು ಭದ್ರತೆ ನೀಡಿದ್ದರೆ ಕಾಲ್ತುಳಿತ ಸಂಭವಿಸುತ್ತಿರಲಿಲ್ಲ': DMK ಸರ್ಕಾರವನ್ನು ದೂಷಿಸಿದ ಎಡಪ್ಪಾಡಿ ಪಳನಿಸ್ವಾಮಿ

ಟಿವಿಕೆ ಅಧ್ಯಕ್ಷ ಮತ್ತು ನಟ ವಿಜಯ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಂಭವಿಸಿದ ಕಾಲ್ತುಳಿತದಲ್ಲಿ 39 ಜನರು ಸಾವಿಗೀಡಾಗಿದ್ದಾರೆ ಮತ್ತು 95 ಜನರು ಗಾಯಗೊಂಡಿದ್ದಾರೆ.
Karur stampede: Death toll rises to 39; CM Stalin visits site, orders probe
ಕರೂರು ಕಾಲ್ತುಳಿತ
Updated on

ಕರೂರ್: ವಿರೋಧ ಪಕ್ಷಗಳ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಭದ್ರತೆ ನೀಡುವಲ್ಲಿ ಡಿಎಂಕೆ ಸರ್ಕಾರ ತಾರತಮ್ಯ ಮಾಡಿದೆ ಎಂದು ಆರೋಪಿಸಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ, ಸರ್ಕಾರ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಲ್ಲಿ ವಿಫಲವಾದ ಕಾರಣ ಕರೂರಿನಲ್ಲಿ ನಡೆದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಭಾನುವಾರ ಹೇಳಿದ್ದಾರೆ.

ಟಿವಿಕೆ ಅಧ್ಯಕ್ಷ ಮತ್ತು ನಟ ವಿಜಯ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಂಭವಿಸಿದ ಕಾಲ್ತುಳಿತದಲ್ಲಿ 39 ಜನರು ಸಾವಿಗೀಡಾಗಿದ್ದಾರೆ ಮತ್ತು 95 ಜನರು ಗಾಯಗೊಂಡಿದ್ದಾರೆ.

'ನಿನ್ನೆ, 39 ಜನರು ಪ್ರಾಣ ಕಳೆದುಕೊಂಡರು. ವಿದ್ಯುತ್ ಕರೆಂಟ್‌ನಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ನಮಗೆ ತಿಳಿಸಲಾಯಿತು. ಈ ಹಿಂದೆ 4 ಜಿಲ್ಲೆಗಳಲ್ಲಿ ಇಂತಹ ಅಭಿಯಾನ ನಡೆದಿತ್ತು ಮತ್ತು ಪೊಲೀಸರು ಸಾಕಷ್ಟು ಭದ್ರತೆ ಒದಗಿಸಬೇಕಾಗಿತ್ತು. ಹಾಗೆ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಕರೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಲ್ತುಳಿತದ ಗಾಯಾಳುಗಳನ್ನು ಭೇಟಿ ಮಾಡಿದ ನಂತರ ಪಳನಿಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

'ನಮ್ಮ ಎಐಎಡಿಎಂಕೆ ಸಭೆಯಲ್ಲಿಯೂ ಸಹ ಸರಿಯಾದ ಭದ್ರತೆ ಒದಗಿಸಲಾಗಿಲ್ಲ. ಡಿಎಂಕೆ ಸಭೆಗಳಲ್ಲಿ ಸಾವಿರಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತದೆ. ಭದ್ರತೆ ನೀಡುವಲ್ಲಿ ಪೊಲೀಸರು ವಿರೋಧ ಪಕ್ಷಗಳಿಗಿಂತ ಆಡಳಿತ ಪಕ್ಷದ ಪರವಾಗಿ ಪಕ್ಷಪಾತ ಮಾಡಬಾರದು. ಪೂರ್ಣ ಭದ್ರತೆ ನೀಡಿದ್ದರೆ, ಇಂತಹ ಕಾಲ್ತುಳಿತ ಸಂಭವಿಸುತ್ತಿರಲಿಲ್ಲ' ಎಂದು ಅವರು ಹೇಳಿದರು.

'ರಾಜಕೀಯ ಪಕ್ಷದ ನಾಯಕರು ಸಹ ಪರಿಶೀಲನೆ ನಡೆಸಿ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಜೀವಗಳು ಬಲಿಯಾಗಿರುವುದು ಆಘಾತಕಾರಿ ಮತ್ತು ದುಃಖಕರ. ಸರ್ಕಾರ ಮತ್ತು ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದರೆ, ಅಂತಹ ಜೀವಗಳು ಬಲಿಯಾಗುತ್ತಿರಲಿಲ್ಲ' ಎಂದು ಅವರು ಹೇಳಿದರು.

'ಏಕವ್ಯಕ್ತಿ ಆಯೋಗ ರಚನೆಯಾಗಿದೆ. ನಿನ್ನೆಯ ಪ್ರಚಾರದ ಮಧ್ಯೆ, ವಿಜಯ್ ಅವರು ಆಂಬ್ಯುಲೆನ್ಸ್ ನಡುವೆ ಬಂದಿರುವುದನ್ನು ಗಮನಸೆಳೆದರು. ಇದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ. ನಿನ್ನೆಯ ಕಾಲ್ತುಳಿತ ಆಘಾತಕಾರಿ ಮತ್ತು ತಮಿಳುನಾಡಿನಲ್ಲಿ ರಾಜಕೀಯ ಪ್ರಚಾರದಲ್ಲಿ ಇಷ್ಟು ದೊಡ್ಡ ಕಾಲ್ತುಳಿತ ಹಿಂದೆಂದೂ ಸಂಭವಿಸಿರಲಿಲ್ಲ' ಎಂದು ಅವರು ಹೇಳಿದರು.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ಕಾಲ್ತುಳಿತ ಘಟನೆಯ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ಸಮಿತಿ ರಚಿಸಿದ್ದಾರೆ.

Karur stampede: Death toll rises to 39; CM Stalin visits site, orders probe
Karur Stampede: ಸಾವಿನ ಸಂಖ್ಯೆ 39ಕ್ಕೇರಿಕೆ, TVK ಮುಖ್ಯಸ್ಥ ನಟ Vijay ಬಂಧನಕ್ಕೆ ಆಗ್ರಹ, FIR ದಾಖಲು

ಟಿವಿಕೆ ಮುಖ್ಯಸ್ಥರು ಮಧ್ಯಾಹ್ನದ ಸುಮಾರಿಗೆ ಕರೂರ್ ತಲುಪಬೇಕಿತ್ತು. ಆದರೆ, ಕನಿಷ್ಠ ಆರು ಗಂಟೆ ತಡವಾಗಿ ಬಂದರು. ಆ ಹೊತ್ತಿಗಾಗಲೇ ಜನಸಂದಣಿ ಹೆಚ್ಚಾಗಿತ್ತು ಮತ್ತು ಅವರು ಪ್ರಯಾಣಿಸುತ್ತಿದ್ದ ಪ್ರಚಾರ ಬಸ್ಸಿಗೂ ಸಹ ರಸ್ತೆಯಲ್ಲಿ ಜಾಗವಿರಲಿಲ್ಲ.

ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ವಿಜಯ್, ತಮ್ಮ ಪಕ್ಷದ ಪರ ರಾಜ್ಯದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ಕಾಲ್ತುಳಿತ ಘಟನೆಯ ತನಿಖೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ಸಮಿತಿ ರಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com