

ನವದೆಹಲಿ: ದೇಶಭಕ್ತಿ, ರಾಷ್ಟ್ರೀಯ ಸೇವಾ ಮೌಲ್ಯಗಳಿಗೆ ಸದಾ ಪ್ರೇರಣೆಯಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಕರ್ನಾಟಕದ ಡಾ.ರೂಪಾ ಅಯ್ಯರ್ ನಿರ್ಮಿಸಿ ನಿರ್ದೇಶಿಸಿದ "ಆಜಾದ್ ಭಾರತ್" ಹಿಂದಿ ಚಲನಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿಯಾಯಿತು.
ಸಂಸತ್ತಿನ ಗ್ರಂಥಾಲಯ ಕಟ್ಟಡದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುವ ಪ್ರತೀಕವಾಗಿ ಹಿಂದಿ ಭಾಷೆಯಲ್ಲಿ ನಿರ್ಮಿಸಿದ "ಆಜಾದ್ ಭಾರತ್" ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಸಂಸತ್ ಸದಸ್ಯರು ಮತ್ತು ಸಚಿವಾಲಯಗಳ ಅನೇಕ ಅಧಿಕಾರಿಗಳು ಸಿನಿಮಾ ವೀಕ್ಷಿಸಿ ನೇತಾಜಿಗೆ ನಮನ ಸಲ್ಲಿಸಿದರು.
ನೇತಾಜಿ ಮರಿಮೊಮ್ಮಕ್ಕಳು ವೀಕ್ಷಣೆ: ಡಾ.ರೂಪಾ ಅಯ್ಯರ್ ನಿರ್ಮಿಸಿ, ನಿರ್ದೇಶಿಸಿದ ಈ ಚಲನ ಚಿತ್ರವನ್ನು ವಿಶೇಷವಾಗಿ ಲೋಕಸಭೆ, ರಾಜ್ಯಸಭೆ ಮತ್ತು ಸಚಿವಾಲಯ ಅಧಿಕಾರಿಗಳು ಮತ್ತವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಲಾಗಿತ್ತು. ನೇತಾಜಿ ಮರಿಮೊಮ್ಮಗಳು ಶ್ರೀಮತಿ ಮೀನಾಕ್ಷಿ ಲೇಖಿ, ಶ್ರೀಮತಿ ರಾಜ್ಯಶ್ರೀ ಚೌಧುರಿ ಅವರು ಚಲನಚಿತ್ರ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ನೇತಾಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಅಮೂಲ್ಯ ಕೊಡುಗೆ ಸ್ಮರಿಸಿದರಲ್ಲದೆ, 101 ವರ್ಷದ ಐಎನ್ಎ (INA) ಹಿರಿಯ ಹೋರಾಟಗಾರರನ್ನು ಸನ್ಮಾನಿಸಿದರು.
ಚಲನಚಿತ್ರ ಪ್ರದರ್ಶನಕ್ಕೂ ಮೊದಲು ಜೋಶಿ ಅವರು ಚಿತ್ರನಿರ್ದೇಶಕರಾದ ಡಾ.ರೂಪಾ ಅಯ್ಯರ್ ಮತ್ತು ಚಲನಚಿತ್ರದ ಇತರ ಕಲಾವಿದರನ್ನೂ ಸನ್ಮಾನಿಸಿದರು. ನಮ್ಮ ಕರ್ನಾಟಕದವರೇ ಆಗಿರುವ ರೂಪಾ ಅಯ್ಯರ್ ನಟಿಸಿ, ನಿರ್ದೇಶಿಸಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಚಲನಚಿತ್ರ "ಸುಭಾಷ್ ಚಂದ್ರ ಬೋಸ್ ಅವರ ಅಪ್ಪಟ ದೇಶಭಕ್ತಿ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಯುವ ಪೀಳಿಗೆಯನ್ನು ಪ್ರೇರೇಪಿಸುವ ಗುರಿ ಹೊಂದಿದೆ. ರಾಷ್ಟ್ರೀಯ ಏಕತೆ, ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖವಾಗಿವೆ. ನಮ್ಮ ವೀರ ಹೋರಾಟಗಾರರ ತ್ಯಾಗ ಎಲ್ಲರಿಗೂ ಸ್ಫೂರ್ತಿಯಾಗಲೆಂದು ಆಶಿಸಿದರು.
"ಆಜಾದ್ ಭಾರತ್" ಚಿತ್ರಪ್ರದರ್ಶನ ಸ್ವಾತಂತ್ರ್ಯ ಹೋರಾಟಗಾರರಿಗೆ ನಿರಂತರವಾಗಿ ಅರ್ಥಪೂರ್ಣ ಗೌರವ ಸಲ್ಲಿಸುವ ಪ್ರತೀಕವಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (INA) ಯ ಮಹಾನ್ ತ್ಯಾಗಗಳಿಗೆ ಸಲ್ಲಿಸಿದ ಹೃದಯಸ್ಪರ್ಶಿ ಗೌರವವಾಗಿದೆ ಎಂದರು.
Advertisement