

ನವದೆಹಲಿ: ಮಹಾಕುಂಭಮೇಳದಲ್ಲಿ ಸುದ್ದಿಯಾಗಿ ದೇಶಾದ್ಯಂತ ಗಮನ ಸೆಳೆದಿದ್ದವರೆಲ್ಲಾ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ, ಅದೂ ವಿವಾಹದ ಕಾರಣಕ್ಕಾಗಿಯೇ ಎಂಬುದು ಮತ್ತೊಂದು ಕಾಕತಾಳಿಯ.
ಕುಂಭಮೇಳದಲ್ಲಿ ಸುದ್ದಿಯಾಗಿ ಖ್ಯಾತಿ ಗಳಿಸಿದ್ದ ಮೋನಾಲಿಸಾ ಇತ್ತೀಚೆಗಷ್ಟೇ ಮುಸ್ಲಿಂ ಯುವಕನನ್ನು ವಿವಾಹವಾಗುವ ಮೂಲಕ ದೇಶಾದ್ಯಂತ ಸುದ್ದಿಯಲ್ಲಿದ್ದರು. ಕುಂಭಮೇಳದ ಮೂಲಕ ಸುದ್ದಿಯಾಗಿದ್ದ ಮತ್ತೋರ್ವ ಖ್ಯಾತ ವ್ಯಕ್ತಿ ಐಐಟಿ ಬಾಬಾ ಈಗ ವಿವಾಹದ ಕಾರಣಕ್ಕಾಗಿಯೇ ಸುದ್ದಿಯಾಗುತ್ತಿದ್ದಾರೆ.
ಐಐಟಿ ಬಾಬಾ ಎಂದೇ ಕರೆಸಿಕೊಳ್ಳುತ್ತಿದ್ದ ಅಭಯ್ ಸಿಂಗ್ ಈಗ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಐಐಟಿ ಬಾಬಾ ಡಿಪ್ರೆಷನ್ ನಲ್ಲಿದ್ದ ಬಗ್ಗೆಯೂ ವರದಿಗಳಾಗಿತ್ತು. ಈಗ ಅವರು ಡಿಪ್ರೆಷನ್ ನಿಂದ ಹೊರಬಂದು ಬದುಕಿನ ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ.
ವಿಶೇಷ ಅಂದರೆ, ಈ 'ಐಐಟಿ ಬಾಬಾ'ನ ಮನಗೆದ್ದು ಮಡದಿಯಾಗಿರುವುದು ನಮ್ಮ ಕರ್ನಾಟಕದ ಯುವತಿ. ಯಾರು ಆ ಯುವತಿ? ಈ ಜೋಡಿಯ ವಿವರಗಳು ಇಲ್ಲಿದೆ
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಶಿವ ದೇವಾಲಯದಲ್ಲಿ ಐಐಟಿ ಬಾಬಾ ಹಾಗೂ ಕರ್ನಾಟಕದ ಯುವತಿ ಭೇಟಿಯಾಗಿದ್ದು, ಕ್ರಮೇಣ ಪ್ರೇಮಾಂಕುರವಾಗಿತ್ತು. ಈಗ ಅವರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಐಐಟಿ ಬಾಬಾ ಮದುವೆಯ ಸುದ್ದಿ ಹೊರಬಂದ ತಕ್ಷಣ, ಇಂಟರ್ನೆಟ್ನಲ್ಲಿ ಕುತೂಹಲ ಹೆಚ್ಚಾಗಿದೆ.
ಕರ್ನಾಟಕದ ನಿವಾಸಿ ಪ್ರತೀಕಾ ಐಐಟಿ ಬಾಬಾ ವರಿಸಿರುವ ಯುವತಿಯಾಗಿದ್ದು, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ದಂಪತಿ ಪ್ರಸ್ತುತ ಹಿಮಾಚಲದಲ್ಲಿ ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಿದ್ದಾರೆ ಮತ್ತು 'ಸನಾತನ ವಿಶ್ವವಿದ್ಯಾಲಯ' ಸ್ಥಾಪನೆಯತ್ತ ಗಮನಹರಿಸುತ್ತಿದ್ದಾರೆ
ಇತ್ತೀಚೆಗೆ ಅಭಯ್ ಸಿಂಗ್ ತಮ್ಮ ಪತ್ನಿ ಪ್ರತೀಕಾ ಅವರೊಂದಿಗೆ ಹರಿಯಾಣದ ಝಜ್ಜರ್ನಲ್ಲಿರುವ ತಮ್ಮ ಮನೆಗೆ ಹೋಗಿದ್ದಾರೆ ಎನ್ನಲಾಗಿದೆ. ಅಲ್ಲಿಯೇ ಮಾಧ್ಯಮಗಳಿಗೆ ಮದುವೆಯಾಗಿರುವುದನ್ನು ದೃಢಪಡಿಸಿದ್ದಾರೆ.
Advertisement