

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೆ ಭವನೀಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದರು.
71 ವರ್ಷದ ಮಮತಾ ಬ್ಯಾನರ್ಜಿ ಸರಳ ಜೀವನಶೈಲಿ ಅನುಸರಿಸಿಕೊಂಡು ಬಂದಿದ್ದು, ದೀರ್ಘಕಾಲ ರಾಜಕೀಯದಲ್ಲಿದ್ದರೂ ಮನೆ, ಕಾರು ಅಥವಾ ಯಾವುದೇ ಪ್ರಮುಖ ಸ್ಥಿರ ಆಸ್ತಿ ಹೊಂದಿಲ್ಲವೆಂದು ಅವರ ಚುನಾವಣಾ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ದೇಶದ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿರುವ ಅವರು, ಒಟ್ಟು 15.4 ಲಕ್ಷ ರೂ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. 2024–25ರಲ್ಲಿ ಅವರ ವಾರ್ಷಿಕ ಆದಾಯ 23,21,570 ರೂ ಆಗಿದ್ದು, 2023–24ರಲ್ಲಿ 20,72,740 ರೂ ಆಗಿತ್ತು. 2021–22ರಲ್ಲಿ ಅವರ ಆದಾಯ ಗರಿಷ್ಠ 38,14,410 ರೂ ಆಗಿತ್ತು.
ಅಫಿಡವಿಟ್ ಪ್ರಕಾರ, 2025–26 ಹಣಕಾಸು ವರ್ಷದಲ್ಲಿ 40,600 ರೂ ಟಿಡಿಎಸ್ ಮರುಪಾವತಿ (refund) ಇದೆ. ಮಾಜಿ ಕೇಂದ್ರ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ 75,700 ರೂ ನಗದು ಹೊಂದಿದ್ದಾರೆ. ಅವರ ಹೆಚ್ಚಿನ ಉಳಿತಾಯ ಇಂಡಿಯನ್ ಬ್ಯಾಂಕ್ ಖಾತೆಯಲ್ಲಿ 12,36,209.71 ರೂಪಾಯಿಯಾಗಿ ಇದೆ. ಚುನಾವಣಾ ವೆಚ್ಚಗಳಿಗೆ ಪ್ರತ್ಯೇಕ ಖಾತೆಯಲ್ಲಿ 40,000 ರೂಪಾಯಿ ಇದೆ. ಒಟ್ಟು ಬ್ಯಾಂಕ್ ಠೇವಣಿಗಳು 12,76,209 ರೂಪಾಯಿ ಆಗಿವೆ.
ಅವರು 9 ಗ್ರಾಂ 750 ಮಿಲಿಗ್ರಾಂ ಚಿನ್ನವನ್ನು ಹೊಂದಿದ್ದು, ಅದರ ಮೌಲ್ಯ ಸುಮಾರು 1,45,000 ರೂಪಾಯಿ ಆಗಿದೆ. ಅವರ ಚರ ಆಸ್ತಿಗಳ ಒಟ್ಟು ಮೌಲ್ಯ 15,37,509.71 ರೂ ಆಗಿದೆ. ಮೂರು ಅವಧಿಗೆ ಮುಖ್ಯಮಂತ್ರಿ ಆಗಿರುವ ಮಮತಾ ಬ್ಯಾನರ್ಜಿ ಯಾವುದೇ ಕೃಷಿ ಅಥವಾ ಕೃಷಿಯೇತರ ವಾಣಿಜ್ಯ ಭೂಮಿ, ವಾಸಸ್ಥಳ ಅಥವಾ ಖಾಸಗಿ ವಾಹನವನ್ನು ಹೊಂದಿಲ್ಲವೆಂದು ಘೋಷಿಸಿದ್ದಾರೆ.
‘ಅತ್ಯಂತ ಬಡ’ ಮುಖ್ಯಮಂತ್ರಿ:
2021ರ ಚುನಾವಣೆಯಲ್ಲಿ, ದೇಶದ 31 ಮುಖ್ಯಮಂತ್ರಿಗಳಲ್ಲಿ ಮಮತಾ ಬ್ಯಾನರ್ಜಿ ಸುಮಾರು 15 ಲಕ್ಷ ರೂ ಮೌಲ್ಯದ ಆಸ್ತಿ ಹೊಂದಿ ಅತಿ ಕಡಿಮೆ ಸಂಪತ್ತಿನವರಾಗಿದ್ದರು ಎಂದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ವರದಿ ತಿಳಿಸಿದೆ. ಅದೇ ವೇಳೆ, ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಸುಮಾರು 930 ಕೋಟಿ ರೂಪಾಯಿ ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಆಗಿದ್ದರು.
2016ರಲ್ಲಿ ಮಮತಾ ಬ್ಯಾನರ್ಜಿ ಅವರ ಆಸ್ತಿ ಸುಮಾರು 30 ಲಕ್ಷ ರೂಪಾಯಿಗಳಾಗಿತ್ತು.
ಮಮತಾ ಬ್ಯಾನರ್ಜಿ ರಾಜಕೀಯ ಜೀವನ
1970ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. 1998ರಲ್ಲಿ ಕಾಂಗ್ರೆಸ್ನಿಂದ ಬೇರ್ಪಟ್ಟು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು.
1984ರಲ್ಲಿ ಅವರು ಭಾರತದ ಅತಿ ಕಿರಿಯ ಸಂಸದರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದು, ಹಿರಿಯ ಕಮ್ಯುನಿಸ್ಟ್ ನಾಯಕ ಸೋಮನಾಥ್ ಚಟರ್ಜಿಯನ್ನು ಸೋಲಿಸಿದ್ದರು. 1991ರಲ್ಲಿ ಮತ್ತೆ ಆಯ್ಕೆಯಾಗಿ, ನಂತರ 1996, 1998, 1999, 2004 ಮತ್ತು 2009ರ ಲೋಕಸಭಾ ಚುನಾವಣೆಯಲ್ಲೂ ಕೋಲ್ಕತ್ತಾ ದಕ್ಷಿಣ ಕ್ಷೇತ್ರದಲ್ಲಿ ಗೆದ್ದು ಬಂದರು.
1991ರಲ್ಲಿ ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್ ಅವರ ಸಚಿವ ಸಂಪುಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಯುವಜನ ಮತ್ತು ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ರಾಜ್ಯ ಸಚಿವೆಯಾಗಿದ್ದರು.
1999ರಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ (NDA) ಸರ್ಕಾರದಲ್ಲಿ ರೈಲ್ವೆ ಸಚಿವೆಯಾಗಿದ್ದರು. 2003ರಲ್ಲಿ ಮತ್ತೆ ಕೇಂದ್ರ ಸಚಿವೆಯಾಗಿ ಸೇರಿದರು.
2011ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಜಯ ಸಾಧಿಸಿದ ನಂತರ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಅದಾದ ಬಳಿಕ ನಿರಂತರವಾಗಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement