

ಶ್ರೀನಗರ: ಅಪರೂಪದ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ತ್ರಿವರ್ಣ ಧ್ವಜ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ್ದು ಮಾತ್ರವಲ್ಲದೇ ಆ ರಿಬ್ಬನ್ ಅನ್ನು ಗೌರವಯುತವಾಗಿ ಬದಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಾರ್ಯಕ್ರಮವೊಂದರ ಉದ್ಘಾಟನೆಗೆ ತೆರಳಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಯೋಜಕರು ಮಾಡಿದ್ದ ಎಡವಟ್ಟೊಂದನ್ನು ಸರಿಪಡಿಸಿದ್ದು ಮಾತ್ರವಲ್ಲದೇ ಆಗಬಹುದಾಗಿದ್ದ ದೊಡ್ಡ ಪ್ರಮಾದವನ್ನು ತಪ್ಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಇಲ್ಲಿನ ಕಾಶ್ಮೀರ ಹಾತ್ನಲ್ಲಿ 'ನಿಮ್ಮ ಕುಶಲಕರ್ಮಿಗಳನ್ನು ತಿಳಿದುಕೊಳ್ಳಿ' ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸಿದ್ದರು. ಈ ವೇಳೆ ಆಯೋಜಕರು ಅಳವಡಿಸಿದ್ದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಪಟ್ಟೆಗಳನ್ನು ಹೊಂದಿರುವ ಉದ್ಘಾಟನಾ ರಿಬ್ಬನ್ ಅನ್ನು ಗಮನಿಸಿದ ಅವರು ಅದನ್ನು ಕತ್ತರಿಸಲು ನಿರಾಕರಿಸಿದರು. ಬದಲಿಗೆ ಅದನ್ನು ಬಿಚ್ಚಿ ಅದನ್ನು ಗೌರವದಿಂದ ಇಡಬೇಕೆಂದು ಸೂಚನೆಯೊಂದಿಗೆ ಸಂಘಟಕರಿಗೆ ಹಿಂತಿರುಗಿಸಿದರು.
ಕ್ಯಾಮೆರಾ ಸಿಬ್ಬಂದಿ ಸೆರೆಹಿಡಿದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಮುಖ್ಯಮಂತ್ರಿಗಳು ನಡೆದುಕೊಂಡ ರೀತಿ ಮೆಚ್ಚುಗೆಗೆ ಕಾರಣವಾಗಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಒಮರ್ ಅಬ್ದುಲ್ಲಾ ಜೊತೆ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ, ಅವರ ಸಲಹೆಗಾರ ನಾಸಿರ್ ಅಸ್ಲಂ ವಾನಿ ಮತ್ತು ಇತರರು ಉಪಸ್ಥಿತಿರಿದ್ದರು.
Advertisement