

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ ಖೇರಾಗೆ ಮತ್ತೆ ಭಾರಿ ಹಿನ್ನಡೆಯಾಗಿದ್ದು, ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ಏಪ್ರಿಲ್ 4 ರಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಮೂರು ದೇಶಗಳ ಪಾಸ್ಪೋರ್ಟ್ಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ ಅವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ಹೂಡಿದ್ದರು.
ನಿರೀಕ್ಷಣಾ ಜಾಮೀನು ವಿಸ್ತರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಏಪ್ರಿಲ್ 20ರವರೆಗೂ ಬಲವಂತದ ಬಂಧನ ವಿರುದ್ಧ ರಕ್ಷಣೆ ಕೋರಿ ಪವನ್ ಖೇರಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಗುವಾಹಟಿ ಕೋರ್ಟ್ಗೆ ಅರ್ಜಿ ಸಲ್ಲಿಸಿ
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿತು. ನಾವು ಜಾಮೀನು ನೀಡಲು ಆಗುವುದಿಲ್ಲ. ಅರ್ಜಿದಾರರು ಅಸ್ಸಾಂನ ಗುವಾಹಟಿಯಲ್ಲಿರುವ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಮುಂದುವರೆದು, ಗುವಾಹಟಿ ಹೈಕೋರ್ಟ್ನಲ್ಲಿ ವಿಚಾರಣೆ ವೇಲೆ ಸುಪ್ರೀಂ ಕೋರ್ಟ್ ನೀಡಿರುವ ಯಾವುದೇ ಅವಲೋಕನಗಳು ಹೈಕೋರ್ಟ್ನ ತೀರ್ಪಿನ ಮೇಲೆ ಪ್ರಭಾವ ಬೀರಬಾರದು. ಪ್ರಕರಣದ ಅರ್ಹತೆ ಆಧಾರದ ಮೇಲೆ ಜಾಮೀನು ನೀಡಬೇಕು. ಸ್ವತಂತ್ರ್ಯವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ತಪ್ಪಾದ ಆಧಾರ್ ಹಂಚಿಕೊಂಡಿದ್ದಕ್ಕಾಗಿ ಕಿಡಿಕಾರಿತು.
ಜಾಮೀನು ಕೊಟ್ಟಿದ್ದ ತೆಲಂಗಾಣ ಕೋರ್ಟ್
ಕೆಲ ದಿನಗಳ ಹಿಂದೆ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ನೀಡಿತ್ತು. ಇದನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೋರ್ಟ್ ಜಾಮೀನಿಗೆ ತಡೆಯೊಡ್ಡಿ, ಕಾಮೀನು ವಿಸ್ತರಿಸಲು ನಿರಾಕರಿಸಿದೆ.
ವಿವಾದವೇನು?
ಅಸ್ಸಾಂ ಸಿಎಂ ಪತ್ನಿ ಮೂರು ಮೂರು ಪಾಸ್ಪೋರ್ಟ್ ಇಟ್ಟುಕೊಂಡಿದ್ದಾರೆ ಎಂದು ಖೇರಾ ಈ ಹಿಂದೆ ಆರೋಪಿಸಿದ್ದರು. ಜೊತೆಗೆ ದುಬೈನಲ್ಲಿ ಅಮೆರಿಕದ ರಾಜ್ಯದಲ್ಲಿರುವ ಕಂಪನಿಯೊಂದರಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆ ರಿನಿಕಿ ಭುಯಾನ್ ಶರ್ಮಾ ಅವರು ದೂರು ನೀಡಿದ್ದರು. ಅವರು ಕೊಟ್ಟ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
'ನಾನೇನು ಭಯೋತ್ಪಾದಕನಾ?': ಪವನ್ ಖೇರಾ ಆಕ್ರೋಶ
ಈ ಸಂದರ್ಭದಲ್ಲಿ ಪವನ್ ಖೇರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರ ಗುವಾಹಟಿ ಹೈ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿ ಅಲ್ಲಿಯವರೆಗೆ ಖೇರಾ ಅವರಿಗೆ ರಕ್ಷಣೆ ಕೋರಿದರು. ಆದರೆ, ಕೋರ್ಟ್ ನಿರಾಕರಿಸಿತು.
ಈ ವೇಳೆ ಅವರು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಂಗಳವಾರದವರೆಗೆ ನ್ಯಾಯಾಲಯ ನನಗೆ(ಖೇರಾ) ರಕ್ಷಣೆ ನೀಡಲು ಸಾಧ್ಯವಿಲ್ಲವೇ? ನಾನೇನು(ಖೇರಾ) ಭಯೋತ್ಪಾದಕನೇ?" ಎಂದು ಅವರು ಪ್ರಶ್ನಿಸಿದರು.
Advertisement