

ಮುಂಬೈ: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಸಂಪೂರ್ಣ ಮಾಡ್ಯೂಲ್ ಅನ್ನು ಭೇದಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಸಂಬಂಧ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫಡ್ನವೀಸ್, ಬಹುರಾಷ್ಟ್ರೀಯ ಕಂಪನಿ ಟಿಸಿಎಸ್ "ಈ ವಿಷಯವನ್ನು ಗಂಭೀರವಾಗಿ ಗಮನಿಸಿದೆ ಮತ್ತು ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಸಹಾಯ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ತಿಳಿಸಿದರು.
"ಇದು ಒಂದು ಮಾಡ್ಯೂಲ್ನಿಂದ ಹುಟ್ಟಿಕೊಟ್ಟ ಗಂಭೀರ ಸಮಸ್ಯೆಯಾಗಿದೆ. ನಾವು ಆ ಮಾಡ್ಯೂಲ್ ಅನ್ನು ಭೇದಿಸುತ್ತೇವೆ. ನಾವು ಕೇಂದ್ರ ಸಂಸ್ಥೆಗಳಿಂದಲೂ ಸಹಾಯ ಪಡೆಯುತ್ತಿದ್ದೇವೆ" ಎಂದು ಮಹಾ ಸಿಎಂ ಹೇಳಿದ್ದಾರೆ.
ಐಟಿ ಸಂಸ್ಥೆ ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿದ ಅವರು, "ಇದರಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಮುಂಬೈನಿಂದ ಬಂದ ಹಿಂದಿನ ವರದಿಯ ಪ್ರಕಾರ, ಪ್ರಕರಣದ ತನಿಖೆಯು, ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಲು ಏಳು ಪುರುಷ ಆರೋಪಿಗಳು ಸಂಘಟಿತ ಗ್ಯಾಂಗ್ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದೆ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿ ಹೇಳಿದೆ.
Advertisement