

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣದ ಕುರಿತು ಭಾರತೀಯ ಜನತಾ ಪಕ್ಷ (BJP) ಗಂಭೀರ ಆರೋಪಗಳನ್ನು ಮಾಡಿದ್ದು, “ಶೀಶ್ ಮಹಲ್ 2” ಎಂದು ಟೀಕಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ದೆಹಲಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರು, ಕೇಜ್ರಿವಾಲ್ “ಕಾಮನ್ ಮ್ಯಾನ್” ಇಮೇಜ್ ಅನ್ನು ತ್ಯಜಿಸಿದ್ದು, ಲೋದಿ ಎಸ್ಟೇಟ್ನಲ್ಲಿರುವ ಅವರ ನಿವಾಸವನ್ನು ನಿಯಮಗಳಿಗಿಂತ ಹೆಚ್ಚಾಗಿ ಐಷಾರಾಮಿಯಾಗಿ ನವೀಕರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ನವೀಕರಣಗಳಿಗೆ ಖಾಸಗಿ ಹಣ ಬಳಸಲಾಗಿದೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಫೋಟೋಗಳನ್ನೂ ಪ್ರದರ್ಶಿಸಿರುವ ಅವರು, ಅವು ಕೇಜ್ರಿವಾಲ್ ನಿವಾಸದ ಒಳಾಂಗಣದ ದೃಶ್ಯಗಳೆಂದು ಹೇಳಿದ್ದಾರೆ. ಜೊತೆಗೆ, ಈ ಮನೆ ಈಗ “ಶೀಶ್ ಮಹಲ್ 2” ಆಗಿದೆ ಎಂದು ಟೀಕೆ ಮಾಡಿದ್ದಾರೆ.
ಬಳಿಕ ಕೇಜ್ರಿವಾಲ್ ಅವರ ರಾಜಕೀಯ ಜೀವನವನ್ನ ಕಟುವಾಗಿ ಟೀಕಿಸಿದ ಅವರು, ಇವರು ಸಾಮಾನ್ಯ ಜನರ ಪ್ರತಿನಿಧಿಯಲ್ಲ, ಕೇಜ್ರಿವಾಲ್ ಅವರು ಆರಂಭದಲ್ಲಿ ಸರಕಾರಿ ಬಂಗಲೆ ಅಥವಾ ಸೌಲಭ್ಯಗಳನ್ನು ಪಡೆಯುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಆದರೆ, ಈಗ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆಂದು ಹೇಳಿದ್ದಾರೆ. ಅಲ್ಲದೆ, 'ರೆಹಮಾನ್ ಡಕಾಯತ್' (Rahman Dacoit) ಎಂಬ ಸಿನಿಮಾದ ಪಾತ್ರಕ್ಕೆ ಹೋಲಿಸಿ ಸಾರ್ವಜನಿಕ ಹಣದ ಲೂಟಿ ಮಾಡಿದ್ದಾರೆಂದು ಎಂದು ಆರೋಪಿಸಿದ್ದಾರೆ. ಜೊತೆಗೆ ದೆಹಲಿ ಮತ್ತು ಪಂಜಾಬ್ನಲ್ಲಿ ಎಎಪಿ ನಾಯಕರಿಗೆ ಸರ್ಕಾರಿ ವಸತಿ ಮುಂದುವರಿಯುತ್ತಿದೆ ಎಂದೂ ಆರೋಪಿಸಿದ್ದಾರೆ.
ಈ ಆರೋಪಗಳನ್ನು ಆಮ್ ಆದ್ಮಿ ಪಕ್ಷ (AAP) ಸಂಪೂರ್ಣವಾಗಿ ತಿರಸ್ಕರಿಸಿದೆ. ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಬಿಜೆಪಿ ಪ್ರದರ್ಶಿಸಿದ ಫೋಟೋಗಳು “ನಕಲಿ” ಎಂದು ಹೇಳಿದ್ದು, ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮ ಸಂಸ್ಥೆಗಳಿಗೂ ಎಚ್ಚರಿಕೆ ನೀಡಿದ್ದು, ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಅವರು, ದೆಹಲಿ ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸಗಳನ್ನು ಸಾರ್ವಜನಿಕವಾಗಿ ತೋರಿಸಿ, ಹೋಲಿಕೆ ಮಾಡಲಿ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ದ್ವಂದ್ವ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವಿವಾದದ ನಡುವೆ ಎಎಪಿಗೆ ರಾಜಕೀಯವಾಗಿ ದೊಡ್ಡ ಹೊಡೆತವೂ ಎದುರಾಗಿದೆ. ಪಕ್ಷದ ರಾಜ್ಯಸಭೆಯ 10 ಸದಸ್ಯರಲ್ಲಿ 7 ಮಂದಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂಬ ವರದಿಗಳು ಬಂದಿವೆ. ಈ ಬೆಳವಣಿಗೆ ಎಎಪಿ ಒಳಗಿನ ಅಸಮಾಧಾನ ಬಹಿರಂಗವಾಗುವಂತಾಗಿದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಇದು “ವಿಕಸಿತ ಭಾರತ 2047” ಗುರಿಗೆ ಶಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, AAP ನಾಯಕರು ಈ ಪಕ್ಷಾಂತರವನ್ನು ಬಿಜೆಪಿ ರಾಜಕೀಯ ಒತ್ತಡದ ಫಲಿತಾಂಶ ಎಂದು ಆರೋಪಿಸಿದ್ದಾರೆ.
ಪಂಜಾಬ್ನಲ್ಲಿ ಎಎಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಆದಾಗ್ಯೂ, ಎಎಪಿಯೊಳಗಿನ ಆಂತರಿಕ ಅಸಮಾಧಾನ ಮತ್ತು ದೆಹಲಿಯಲ್ಲಿನ ಇತ್ತೀಚಿನ ಚುನಾವಣಾ ಹಿನ್ನಡೆಯಿಂದಾಗಿ ಆಪ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆಂದು ಬಿಜೆಪಿ ಸಮರ್ಥಿಸಿಕೊಂಡಿದೆ.
Advertisement