ಒಳ್ಳೆಯವರ್ಯಾರೂ Arvind Kejriwal ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ: ರಾಘವ್ ಚಡ್ಡಾ BJP ಸೇರ್ಪಡೆ ಕುರಿತು Swati Maliwal

ಒಳ್ಳೆಯವರ್ಯಾರೂ ಅರವಿಂದ್ ಕೇಜ್ರಿವಾಲ್ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ.. AAP ಪಕ್ಷವು ತನ್ನ ಮೂಲ ತತ್ವಗಳಿಂದ "ದೂರ ಸರಿದಿದೆ".. ಅರವಿಂದ್ ಕೇಜ್ರಿವಾಲ್ ಈಗ ಹಿಂದಿನಂತೆ ಇಲ್ಲ..
Swati Maliwal-Arvind Kejriwal
ಸ್ವಾತಿ ಮಲಿವಾಲ್ ಮತ್ತು ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆ ಮೂಲಕ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಇತ್ತ ಇದೇ ವಿಚಾರವಾಗಿ ದೆಹಲಿ ಮಾಜಿ ಸಿಎಂ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ವಾತಿ ಮಲಿವಾಲ್ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

ಎಎಪಿಯಿಂದ ಪಕ್ಷಾಂತರಗೊಂಡ ಸಂಸದೆ ಸ್ವಾತಿ ಮಲಿವಾಲ್ ಶನಿವಾರ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ, 'ಒಳ್ಳೆಯವರ್ಯಾರೂ ಅರವಿಂದ್ ಕೇಜ್ರಿವಾಲ್ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು. ತಮ್ಮ ಹಿಂದಿನ ಪಕ್ಷವು ತನ್ನ ಮೂಲ ತತ್ವಗಳಿಂದ "ದೂರ ಸರಿದಿದೆ" ಎಂದು ಆರೋಪಿಸಿದ ಅವರು, ಅದರ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಹಿಂದಿನಂತೆ ಇಲ್ಲ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ರಾಘವ್ ಛಡ್ಡಾ ಮತ್ತು ಮಲಿವಾಲ್ ಸೇರಿದಂತೆ ಏಳು ರಾಜ್ಯಸಭಾ ಸಂಸದರು ಎಎಪಿ ತೊರೆದು ಬಿಜೆಪಿ ಸೇರಿ ದೊಡ್ಡ ಶಾಕ್ ನೀಡಿದ್ದರು. ಪಕ್ಷದ ಸಂಘಟನೆಯ ಪ್ರಮುಖ ಮುಖವಾದ ಸಂದೀಪ್ ಪಾಠಕ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಅಶೋಕ್ ಮಿತ್ತಲ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಕೂಡ ಈ ಪಟ್ಟಿಯಲ್ಲಿದ್ದಾರೆ.

Swati Maliwal-Arvind Kejriwal
AAP ತೊರೆದು ಬಿಜೆಪಿ ಸೇರಿದ 7 ಸಂಸದರು, ಮೇಲ್ಮನೆಯಲ್ಲಿ ಬಲ ಹೆಚ್ಚಿಸಿಕೊಂಡ NDA: ಮೂರನೇ ಎರಡು ಬಹುಮತಕ್ಕೆ ಕೇವಲ 17 ಸೀಟು ಬಾಕಿ

ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ ಹೊಗಳಿದ ಮಲಿವಾಲ್

ಇದೇ ವೇಳೆ ಪಕ್ಷಾಂತರದ ನಂತರ ಬಿಜೆಪಿ ಸೇರಿದ ಮಲಿವಾಲ್, ಪ್ರಧಾನಿ ನರೇಂದ್ರ ಮೋದಿಯವರ "ನಿರ್ಣಾಯಕ ಮತ್ತು ಬಲವಾದ ನಾಯಕತ್ವ"ವನ್ನು ಹೊಗಳಿದರು. "ನಾನು ನನ್ನ ಮನೆಯನ್ನು ತೊರೆದಿದ್ದೇನೆ, ಏಳು ವರ್ಷಗಳ ಕಾಲ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದೆ, ನನ್ನ ಕೆಲಸವನ್ನು ತ್ಯಜಿಸಿದೆ ಮತ್ತು ಪ್ರತಿಯೊಂದು ಚಳುವಳಿಯನ್ನು ಬೆಂಬಲಿಸಿದೆ. ಆದರೆ ಹಲ್ಲೆಗೊಳಗಾದ ನಂತರ ನಾನು ಎಫ್‌ಐಆರ್ ದಾಖಲಿಸಲು ಪ್ರಯತ್ನಿಸಿದಾಗ, ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರ ಸಹಾಯಕರಿಂದ ನನಗೆ ಥಳಿಸಲಾಯಿತು" ಎಂದು ಮಲಿವಾಲ್ ಹೇಳಿದರು.

ಅಂತೆಯೇ ನಾನು ನನ್ನ ದೂರನ್ನು ಮುಂದುವರಿಸಲು ಪ್ರಯತ್ನಿಸಿದಾಗ, ಅದನ್ನು ಹಿಂಪಡೆಯಲು "ಬೆದರಿಕೆ ಮತ್ತು ಒತ್ತಡ" ಹಾಕಲಾಯಿತು. ಎರಡು ವರ್ಷಗಳ ಕಾಲ, ನನ್ನ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಲಾಯಿತು. ಆದರೆ ನಾನು ತಲೆಬಾಗಲಿಲ್ಲ. ಇದರಿಂದಾಗಿ, ಪಕ್ಷವು ನನಗೆ ಸಂಸತ್ತಿನಲ್ಲಿ ಮಾತನಾಡಲು ಒಂದು ನಿಮಿಷವೂ ಅವಕಾಶ ನೀಡಲಿಲ್ಲ" ಎಂದು ಅವರು ಹೇಳಿದರು.

ಎಎಪಿ ಸುಳ್ಳು, ಭ್ರಷ್ಟಾಚಾರ ಮತ್ತು ಗೂಂಡಾಗಿರಿ ಖ್ಯಾತಿಗಳಿಸಿದೆ

ಆಮ್ ಆದ್ಮಿ ಪಕ್ಷವು ಸಂಪೂರ್ಣವಾಗಿ ಬದಲಾಗಿದೆ. ಈಗ "ಸುಳ್ಳು, ಭ್ರಷ್ಟಾಚಾರ ಮತ್ತು ಗೂಂಡಾಗಿರಿ"ಗೆ ಹೆಸರುವಾಸಿಯಾಗಿದೆ. ನಿಜವಾದ ದ್ರೋಹವೆಂದರೆ ಪಕ್ಷವನ್ನು ಬಿಡುವುದಲ್ಲ, ಆದರೆ ನಿಮ್ಮ ಸ್ವಂತ ತತ್ವಗಳಿಗೆ ಬದ್ಧವಾಗಿರದಿರುವುದು. ಜನರು ಭಯದಿಂದ ಹೊರಹೋಗುತ್ತಿಲ್ಲ. ಅವರು ಅರವಿಂದ್ ಕೇಜ್ರಿವಾಲ್ ಕಾರಣದಿಂದಾಗಿ ಹೊರಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ನಾಯಕರು ಪಕ್ಷವನ್ನು ತೊರೆಯುತ್ತಾರೆ ಎಂದು ಸ್ವಾತಿ ಹೇಳಿದರು.

ಒಳ್ಳೆಯವರ್ಯಾರೂ ಕೇಜ್ರಿವಾಲ್ ಜೊತೆಗಿರಲು ಸಾಧ್ಯವಿಲ್ಲ

ಇದೇ ವೇಳೆ ಯಾವುದೇ ಒಳ್ಳೆಯ ವ್ಯಕ್ತಿ ಕೇಜ್ರಿವಾಲ್ ಅವರೊಂದಿಗೆ ಹೆಚ್ಚು ಕಾಲ ಕೆಲಸ ಮಾಡಲು ಸಾಧ್ಯವಿಲ್ಲ. ಅವರು ಹೇಳೊದೊಂದು ಮಾಡುವುದು ಇನ್ನೊಂದು. ಕೇಜ್ರಿವಾಲ್ ಒಮ್ಮೆ ತಮ್ಮನ್ನು "ಸಾಮಾನ್ಯ ವ್ಯಕ್ತಿ" ಎಂದು ಬಿಂಬಿಸಿಕೊಂಡರು. ಆದರೆ ನಂತರ ಬದಲಾಗಿದ್ದಾರೆ. ಒಂದು ಕಾಲದಲ್ಲಿ ಅವರು 2 ರೂಪಾಯಿ ಪೆನ್ನು ಹಿಡಿದು ಸರಳ ಬಟ್ಟೆ ಧರಿಸುತ್ತಿದ್ದರು. ಇಂದು ಅವರ ಸ್ಥಿತಿ ಮಾತ್ರ ಬದಲಾಗಿದೆ. ಅವರು ಹಲವಾರು "ಶೀಷ್ಮಹಲ್"ಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಕೇಜ್ರಿವಾಲ್ ರಿಮೋಟ್ ಕಂಟ್ರೋಲ್ ಮೂಲಕ ಪಂಜಾಬ್ ಸರ್ಕಾರದ ನಿರ್ವಹಣೆ

ಅಂತೆಯೇ ದೆಹಲಿಯಲ್ಲಿ ಎಎಪಿ ಸೋಲಿನ ನಂತರ ಕೇಜ್ರಿವಾಲ್ ಪಂಜಾಬ್ ಸರ್ಕಾರವನ್ನು "ರಿಮೋಟ್ ಕಂಟ್ರೋಲ್" ಮೂಲಕ ನಡೆಸುತ್ತಿದ್ದಾರೆ. ಪಂಜಾಬ್ ಸರ್ಕಾರವು ಅವರ ವೈಯಕ್ತಿಕ ಎಟಿಎಂ ಆಗಿ ಮಾರ್ಪಟ್ಟಿದೆ. ಅಕ್ರಮ ಮರಳು ಗಣಿಗಾರಿಕೆ ಮತ್ತು ಮಾದಕವಸ್ತು ಬಳಕೆ ಬಹಿರಂಗವಾಗಿ ನಡೆಯುತ್ತಿದೆ ಮತ್ತು ಭ್ರಷ್ಟಾಚಾರವು ಅದರ ಉತ್ತುಂಗದಲ್ಲಿದೆ. ಪಂಜಾಬ್‌ನ ಜನರು ಎಎಪಿಯ ಕಾರ್ಯವೈಖರಿಯ ಬಗ್ಗೆ ಅತೃಪ್ತರಾಗಿದ್ದಾರೆ. ಒಂದು ಕಾಲದಲ್ಲಿ ಸ್ಕೂಟರ್‌ಗಳಲ್ಲಿ ಬಂದವರು ಈಗ ದೊಡ್ಡ ಮನೆಗಳು, ಕಾರುಗಳು ಮತ್ತು ವ್ಯವಹಾರಗಳನ್ನು ಹೊಂದಿದ್ದಾರೆ. ಇದೆಲ್ಲವೂ ಕೇಜ್ರಿವಾಲ್ ಅವರ ರಕ್ಷಣೆಯಲ್ಲಿ ನಡೆಯುತ್ತಿದೆ" ಎಂದು ಸ್ವಾತಿ ಮಲಿವಾಲ್ ಆರೋಪಿಸಿದರು.

Swati Maliwal-Arvind Kejriwal
BJP ಸೇರಿದ 7 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಉಪರಾಷ್ಟ್ರಪತಿಗೆ AAP ಪತ್ರ: ಸಂಜಯ್ ಸಿಂಗ್

ಬಿಜೆಪಿ ಸೇರ್ಪಡೆ ಬಲವಂತವಲ್ಲ

ಇದೇ ವೇಳೆ ತಾವು ಬಲವಂತವಾಗಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಸ್ವಾತಿ, ಇಡಿ ಮತ್ತು ಸಿಬಿಐನಂತಹ ಸಂಸ್ಥೆಗಳ ಭಯದಿಂದಾಗಿ ನಾಯಕರು ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಹೇಳಿಕೆಗಳನ್ನು ಸತ್ಯಕ್ಕೆ ದೂರ ಎಂದರು. ತಾವು ಬಲವಂತದಿಂದಲ್ಲ.. ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಬಿಜೆಪಿಗೆ ಸೇರಿದ್ದೇನೆ. ನಾನು ಹೆದರುವ ವ್ಯಕ್ತಿಯಲ್ಲ. ನಾನು ಪೂರ್ಣ ಹೃದಯದಿಂದ ಸೇರಿದ್ದೇನೆ. ನಾನು ಬಯಸಿದರೆ, ಎರಡು ವರ್ಷಗಳ ಹಿಂದೆಯೇ ಸೇರಬಹುದಿತ್ತು. ಆದರೆ ಈಗ ಸಮಯ ಬಂದಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಮತ್ತು ಅವರ ರಾಜತಾಂತ್ರಿಕತೆಯಿಂದಾಗಿ ಜಾಗತಿಕವಾಗಿ ಪ್ರಬಲವಾಗಿದೆ ಎಂದು ಮೋದಿ ಸರ್ಕಾರವನ್ನು ಕೊಂಡಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com