

ಕಿಯೋಂಝಾರ್: "ಮಾನವೀಯತೆ ಸತ್ತು ಹೋಗಿದೆ" ಎಂಬುದು ಇಂದಿನ ದಿನಗಳಲ್ಲಿ ದೌರ್ಜನ್ಯ, ಸ್ವಾರ್ಥ ಮತ್ತು ಕ್ರೂರತೆ ಹೆಚ್ಚಾದಾಗ ಕೇಳಿಬರುವ ಸಾಮಾನ್ಯ ಬೇಸರದ ಮಾತು. ಆದರೆ ಒಡಿಶಾದ ಕಿಯೋಂಝಾರ್ ಜಿಲ್ಲೆಯ ಮಲ್ಲಿಪಾಶಿಯಲ್ಲಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆ ನಡೆದಿದೆ.
ಒಡಿಶಾ ಗ್ರಾಮ್ಯ ಬ್ಯಾಂಕ್ ಸಿಬ್ಬಂದಿಗೆ ಸೋಮವಾರ ಭೀಕರ ಆಘಾತ ಕಾದಿತ್ತು. 42 ವರ್ಷದ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಹೂತಿಟ್ಟಿದ್ದ ಆಕೆಯ ಶವವನ್ನೇ ಹೊರತೆಗೆದು ಬ್ಯಾಂಕ್ ಎದುರು ತಂದಿಟ್ಟ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಏನಿದು ಘಟನೆ?
ಪಟಾಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದಿಯಾನಾಲಿ ಗ್ರಾಮದ ನಿವಾಸಿ ಜೀತು ಮುಂಡಾ, ಎರಡು ತಿಂಗಳ ಹಿಂದೆ ನಿಧನರಾಗಿದ್ದ ತನ್ನ ತಂಗಿ ಕಲಾ ಮುಂಡಾ ಅವರ ಖಾತೆಯಲ್ಲಿದ್ದ 19,300 ರೂಪಾಯಿಗಳನ್ನು ಹಿಂಪಡೆಯಲು ಬ್ಯಾಂಕ್ಗೆ ಹಲವು ಬಾರಿ ಅಲೆದಿದ್ದಾರೆ.
ಆದರೆ ಬ್ಯಾಂಕ್ ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಹಣವನ್ನು ಪಡೆಯಲು ವಾರಸುದಾರರು ಮರಣ ಪ್ರಮಾಣಪತ್ರ ಅಥವಾ ನಾಮಿನಿ ವಿವರ ಬೇಕಾಗುತ್ತದೆ. ಆದರೆ, ಇವುಗಳ ಅರಿವಿಲ್ಲದ ಜಿತು ಮುಂಡಾ ಅವರು, ಬ್ಯಾಂಕ್ ಅಧಿಕಾರಿಗಳು ಪದೇ ಪದೆ ದಾಖಲೆ ಕೇಳುತ್ತಿರುವುದಕ್ಕೆ ಬೇಸರಗೊಂಡಿದ್ದರು.
ತನ್ನ ತಂಗಿ ಎರಡು ತಿಂಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎಂದು ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದರೂ, ನಿಯಮಗಳ ಪ್ರಕಾರ ಹಣ ನೀಡಲು ದಾಖಲೆ ಸಲ್ಲಿಸಲು ಅವರು ಸೂಚಿಸಿದ್ದರು. ತಂಗಿ ಮೃತಪಟ್ಟಿದ್ದಾಳೆ ಎಂದು ಸಾಬೀತುಪಡಿಸಲು ಬೇರೆ ದಾರಿಯಿಲ್ಲದೆ, ಆತ ಸ್ಮಶಾನಕ್ಕೆ ತೆರಳಿ ಹೂತಿಟ್ಟ ಶವದ ಅವಶೇಷಗಳನ್ನು ಅಗೆದು ತೆಗೆದಿದ್ದಾನೆ. ಬಳಿಕ, ಅದನ್ನು ಪಟಾಣಾ ಬ್ಲಾಕ್ನಲ್ಲಿರುವ ಒಡಿಶಾ ಗ್ರಾಮೀಣ ಬ್ಯಾಂಕ್ ಎದುರು ತಂದು ಇಟ್ಟಿದ್ದಾನೆ. ಈ ದೃಶ್ಯ ಅಲ್ಲಿದ್ದ ಕೆಲವರನ್ನು ಭಯಭೀತಿಗೊಳಿಸಿದರೆ, ಇನ್ನು ಕೆಲವರ ಕಣ್ಣಲ್ಲಿ ನೀರು ತರಿಸಿದೆ.
ನಂತರ, ಪಾಟ್ನಾ ಪೊಲೀಸ್ ಠಾಣೆಯ ಐಐಸಿ ಕಿರಣ್ ಪ್ರಸಾದ್ ಸಾಹು ನೇತೃತ್ವದ ತಂಡ ಸ್ಥಳಕ್ಕೆ ತೆರಳಿ, ಬ್ಯಾಂಕ್ ಅಧಿಕಾರಿಗಳ ಜೊತೆಗೆ ಜೀತು ಶವವನ್ನು ತನ್ನ ಗ್ರಾಮಕ್ಕೆ ತೆಗೆದುಕೊಂಡು ಹೋಗುವಂತೆ ಮನವೊಲಿಸಲು ಪ್ರಯತ್ನಿಸಿದರು.
ಕಾಲಾ ಅವರ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ಅಗತ್ಯವಾದ ದಾಖಲೆಗಳನ್ನು ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಬುಡಕಟ್ಟು ಜನಾಂಗದ ವ್ಯಕ್ತಿ ಅಂತಿಮವಾಗಿ ಶವವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾನೆ.
ಬ್ಯಾಂಕ್ ಸ್ಪಷ್ಟನೆ ಏನು?
ಮೃತದೇಹ ಅವಶೇಷಗಳನ್ನೇ ಬ್ಯಾಂಕ್ ಮುಂದೆ ತಂದಿಟ್ಟ ಘಟನೆಯ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, "ನಾವು ಮೃತ ಗ್ರಾಹಕರನ್ನು ಖುದ್ದಾಗಿ ಹಾಜರುಪಡಿಸುವಂತೆ ಕೇಳಿಲ್ಲ. ಮರಣ ಪ್ರಮಾಣಪತ್ರ ಸಲ್ಲಿಸಿದ ಕೂಡಲೇ ಹಣವನ್ನು ನೀಡುವುದಾಗಿ ತಿಳಿಸಿದ್ದೇವೆ. ಜಿತು ಮುಂಡಾ ಅವರು ಕುಡಿದ ಅಮಲಿನಲ್ಲಿ ಬಂದು ಗಲಾಟೆ ಮಾಡಿದ್ದಲ್ಲದೆ, ಶವದ ಅವಶೇಷಗಳನ್ನು ತಂದಿಟ್ಟಿದ್ದಾರೆ. ಇದು ಅತ್ಯಂತ ಆಘಾತಕಾರಿ" ಎಂದಿದ್ದಾರೆ.
Advertisement