

ನವದೆಹಲಿ: ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆಂಬ ಆರೋಪದ ಮೇಲೆ ಫರಿದಾಬಾದ್ ಮೂಲದ ಯುವತಿ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ, ನಟ ಪ್ರಕಾಶ್ ರಾಜ್ ಪ್ರಧಾನಿ ನರೇಂದ್ರ ಮೋದಿ ಅವರ ಶೈಲಿಯನ್ನು ಅನುಕರಿಸುವಂತಹ ವೀಡಿಯೊವೊಂದನ್ನು ಬಿಡುಗಡೆ ಮಾಡುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, ಮಕ್ಕಳು ಹಿರಿಯರಿಗೆ ಅವಾಚ್ಯ ಭಾಷೆ ಬಳಸಿದಾಗ ಅವರಿಗೆ ಎಚ್ಚರಿಕೆ ನೀಡಲಾಗುತ್ತದೆಯೇ ಹೊರತು, ಅಂತಹ ಮಾತುಗಳಿಗಾಗಿ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದು, ಪೊಲೀಸ್ ದೂರು ನೀಡುವುದು ಅಥವಾ ಕಿರುಕುಳ ನೀಡುವುದು ಸರಿಯಲ್ಲ ಎಂದಿದ್ದಾರೆ.
"ನಮಸ್ಕಾರ ಸ್ನೇಹಿತರೇ, ಇದು ಈ ದೇಶದ ಪೋಷಕರ ಪರವಾಗಿ ಹೇಳುತ್ತಿರುವ ಮಾತು. ಮಕ್ಕಳು ಹಿರಿಯರಿಗೆ ಅವಾಚ್ಯ ಭಾಷೆಯನ್ನು ಬಳಸಿದಾಗ ಅಥವಾ ತಪ್ಪಾಗಿ ಮಾತನಾಡಿದಾಗ, ನಾವು ಅವರಿಗೆ ಬುದ್ಧಿ ಹೇಳುತ್ತೇವೆ. ಹಾಗೆ ಮಾಡದಂತೆ ಎಚ್ಚರಿಸುತ್ತೇವೆ ಮತ್ತು ಪಾಠ ಕಲಿತುಕೊಂಡು ಅದನ್ನು ಪುನರಾವರ್ತಿಸದಂತೆ ಹೇಳುತ್ತೇವೆ. ಆದರೆ, ನಾವು ಅವರ ಮೇಲೆ ಕ್ರಿಮಿನಲ್ ಅಥವಾ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುವುದಿಲ್ಲ ಎಂದದ್ದಾರೆ.
ದೋಷಪೂರಿತ ವ್ಯವಸ್ಥೆಯಿಂದಾಗಿ ತಮ್ಮ ಸಹಪಾಠಿಗಳು ಪ್ರಾಣ ಕಳೆದುಕೊಳ್ಳುವುದನ್ನು ಕಂಡು ಮಕ್ಕಳು "ವೇದನೆ" ಮತ್ತು "ಅಸಹಾಯಕತೆ"ಗೆ ಒಳಗಾಗುವಂತೆ ಮಾಡಿರುವುದಕ್ಕೆ ಸರ್ಕಾರವೇ ಹೊಣೆಗಾರಿಕೆಯನ್ನು ಹೊರಬೇಕು ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ಲಾಠಿ ಮತ್ತು ಪೆಲೆಟ್ ಗನ್ಗಳನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆಯೂ ಹೊಣೆಗಾರಿಕೆ ನಿಗದಿಯಾಗಬೇಕು ಎಂದು ನಟ ಹೇಳಿದರು. ಮಕ್ಕಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಬದಲು, ಅಂತಹ ಕೃತ್ಯಗಳನ್ನು ಮರುಕಳಿಸದಂತೆ ಅವರಿಗೆ ಸೂಚಿಸಬೇಕು ಮತ್ತು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.
"ಮತ್ತೊಂದು ವಿಷಯವೇನೆಂದರೆ, ದೋಷಪೂರಿತ ವ್ಯವಸ್ಥೆಯಿಂದಾಗಿ ಇತರ ಮಕ್ಕಳು ಸಾಯುವುದನ್ನು ನೋಡಿ ಮತ್ತು ವ್ಯವಸ್ಥೆಯ ಮೇಲಿನ ಭರವಸೆ ಕಳೆದುಕೊಂಡು ಆ ಮಕ್ಕಳು ವೇದನೆ ಹಾಗೂ ಅಸಹಾಯಕತೆಗೆ ಒಳಗಾಗುವಂತೆ ಮಾಡಿದಾಗ, ಅದಕ್ಕೆ ನಾವೂ ಹೊಣೆಗಾರರಾಗಿರಬೇಕು. ಅಲ್ಲದೆ, ಲಾಠಿ ಏಟು, ಪೆಲೆಟ್ ಗನ್ ದಾಳಿ ಮತ್ತು ಪೊಲೀಸ್ ದೌರ್ಜನ್ಯಕ್ಕೆ ಅವರು ಒಳಗಾದಾಗ, ನಾವೂ ಕೂಡ ಸ್ವಲ್ಪ ಜವಾಬ್ದಾರಿಯನ್ನು ಹೊರಬೇಕು ಸ್ನೇಹಿತರೇ. ಹಾಗಾಗಿ, ದಯವಿಟ್ಟು ಅವರಿಗೆ ಅದನ್ನು ಮತ್ತೆ ಮಾಡದಂತೆ ಹೇಳಿ ಮತ್ತು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ತಿಳಿಸಿ ಎಂದು ಅವರು ಹೇಳಿದ್ದಾರೆ.
"ಆದ್ದರಿಂದ ದಯವಿಟ್ಟು, ನನ್ನ ಮಿತ್ರರೇ ನಮ್ಮ ಮಕ್ಕಳ ವಿಷಯದಲ್ಲಿ ದಯೆ ತೋರಿ. ಅವರ ವೃತ್ತಿಜೀವನ, ಬದುಕನ್ನು ಹಾಳುಮಾಡಬೇಡಿ. ಅವರನ್ನು ಮತ್ತೆ ಆಘಾತಕ್ಕೆ ದೂಡಬೇಡಿ. ಇಷ್ಟೇ ನಾನು ಹೇಳುವುದು ಎಂದು ಪ್ರಕಾಶ್ ರಾಜ್ ಮನವಿ ಮಾಡಿದ್ದಾರೆ.