

ನವದೆಹಲಿ: ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ವಿಡಿಯೋ ಸಂದೇಶದ ಬಗ್ಗೆ ಕಾಂಗ್ರೆಸ್ ಶನಿವಾರ ತೀವ್ರ ಟೀಕಾ ಪ್ರಹಾರ ನಡೆಸಿದೆ. ದೇಶವು ಪ್ರಧಾನಿಯವರ ಕ್ಷಮೆಯಾಚನೆಗೆ ಆಗ್ರಹಿಸುತ್ತಿದ್ದರೆ, ಅವರು ಬದಲಿಗೆ 'ದೇಶವನ್ನೇ ಕ್ಷಮಿಸಿದ್ದಾರೆ' ಎಂದು ಕಾಂಗ್ರೆಸ್ ಹೇಳಿದೆ.
NEET ಪರೀಕ್ಷೆಯಲ್ಲಿನ ಅಕ್ರಮಗಳ ಹಿನ್ನೆಲೆಯಲ್ಲಿ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ತಮಗೆ ಹಾಗೂ ತಮ್ಮ ದಿವಂಗತ ತಾಯಿಗೂ ನಿಂದನೆಗಳನ್ನು ಎದುರಿಸಬೇಕಾಯಿತು ಎಂದು ಮೋದಿ ಶುಕ್ರವಾರ ಹೇಳಿದರು. ಆದರೆ, ಅಂತಹ 'ದಾರಿ ತಪ್ಪಿದ ಮಕ್ಕಳನ್ನು' ನ್ಯಾಯಾಲಯಕ್ಕೆ ಎಳೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಮತ್ತು ಆದ್ದರಿಂದ ಅವರನ್ನು ಕ್ಷಮಿಸಲು ತಾನು ಬಯಸುವುದಾಗಿ ಅವರು ಹೇಳಿದ್ದಾರೆ.
ಪ್ರಧಾನಿಯವರ ವಿಡಿಯೋ ಮತ್ತು ಪೋಸ್ಟ್ ಅನ್ನು ಉಲ್ಲೇಖಿಸಿ, ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಇದನ್ನು ಕೇಳಿ, ದೇಶವು ಅವರ ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ, ಆದರೆ ಅವರು ದೇಶವನ್ನೇ ಕ್ಷಮಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತಡರಾತ್ರಿ ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಸಮಾಜದಲ್ಲಿರುವ ಆಕ್ರೋಶವನ್ನು ತಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಆದರೆ, ಇದು ಯುವಜನರನ್ನು ಅಪ್ಪಿಕೊಳ್ಳುವ ಮತ್ತು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವ ಸಮಯ ಎಂದು ಅವರು ಒತ್ತಿ ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ನಾನು ಮಾತ್ರವಲ್ಲ, ನನ್ನ ದಿವಂಗತ ತಾಯಿಯೂ ನಿಂದನೆಗೆ ಒಳಗಾದರು. ಆದರೆ ನಿಂದನೆಗಳಿಂದ ಎಂದಿಗೂ ಏನೂ ಪರಿಹಾರವಾಗುವುದಿಲ್ಲ; ದಾರಿ ತಪ್ಪಿದವರಿಗೆ ಸರಿಯಾದ ದಾರಿ ತೋರಿಸೋಣ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು 'ದಾರಿ ತಪ್ಪಿದ ಮಕ್ಕಳು' ಎಂದು ಬಣ್ಣಿಸಿದ ಮೋದಿ, ಅವರಿಗೆ ಶಿಕ್ಷೆ ನೀಡುವುದು ಅಥವಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಒಳಪಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಜನರು ತಪ್ಪುಗಳನ್ನು ಮಾಡುತ್ತಾರೆ, ಆದರೆ ನಮ್ಮ ಹೆಣ್ಣುಮಕ್ಕಳು ಇಂತಹ ನಿಂದನೀಯ ಭಾಷೆಯನ್ನು ಬಳಸುತ್ತಿರುವುದು ಸಾಂಸ್ಕೃತಿಕ ಆಘಾತದ ವಿಷಯವಾಗಿದೆ. ದಾರಿ ತಪ್ಪಿದ ನಮ್ಮ ಯುವಜನರನ್ನು ನಾವು ಕ್ಷಮಿಸಬೇಕು; ಕೊನೆಗೂ ಅವರು ನಮ್ಮ ಮಕ್ಕಳೇ ಆಗಿದ್ದಾರೆ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವುದು ನಮ್ಮ ಕರ್ತವ್ಯ ಎಂದು ಪ್ರಧಾನಿ ಹೇಳಿದ್ದಾರೆ.