

ಕೊಲ್ಕೋತಾ: ಸುಮಾರು 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಮರಳಿರುವ ಬಾಂಗ್ಲಾದೇಶದ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪೂರ್ಣ ಭದ್ರತೆಯ ಭರವಸೆ ನೀಡಿದ್ದಾರೆ.
ತಸ್ಲೀಮಾ ಅವರು ಇನ್ಮುಂದೆ ಬಯಸಿದಾಗಲೆಲ್ಲಾ ಬಂಗಾಳಕ್ಕೆ ಭೇಟಿ ನೀಡಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಪೊಲೀಸ್ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿಯಾಗಿ ನಿಮಗೆ ಸೂಕ್ತ ಭದ್ರತೆ ಒದಗಿಸುವುದು ನನ್ನ ಕರ್ತವ್ಯ. ಒಮ್ಮೆ ಮಾತ್ರವಲ್ಲ, ನೀವು ಎಷ್ಟು ಬಾರಿ ಬಯಸಿದರೂ ಪಶ್ಚಿಮ ಬಂಗಾಳಕ್ಕೆ ಬನ್ನಿ, ಸಂಪೂರ್ಣ ಭದ್ರತೆ ನೀಡಲಾಗುವುದು ಎಂದಿದ್ದಾರೆ.
ಬಂಗಾಳವು ಈಗ ಬೆದರಿಕೆ ಹಾಗೂ ಜನರನ್ನು ಮೌನಗೊಳಿಸುವ ಕಾಲದಿಂದ ಹೊರಬಂದಿದೆ. ಇಲ್ಲಿ ಸಾಂವಿಧಾನಿಕ ಮೌಲ್ಯಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ರಕ್ಷಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
2007 ರ ನಂತರ ಪ್ರಥಮ ಬಾರಿಗೆ ಕೋಲ್ಕತ್ತಾದ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ 63 ವರ್ಷದ ಲೇಖಕಿ ತಸ್ಲೀಮಾ ನಸ್ರೀನ್, ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡಲು ಬಂದಿಲ್ಲ. ಮಹಿಳಾ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅನ್ಯಾಯ ಎಷ್ಟು ಕಾಲ ಮುಂದುವರೆದರೂ ಶಾಶ್ವತವಲ್ಲ ಎಂಬುದಕ್ಕೆ ಇಂದು ತೆರೆದಿರುವ ಈ ಬಾಗಿಲುಗಳೇ ಸಾಕ್ಷಿ. ಇತಿಹಾಸವು ಬಾಗಿಲುಗಳನ್ನು ಯಾರು ಮುಚ್ಚಿದರು ಮತ್ತು ಯಾರು ತೆರೆದರು ಎಂಬುದನ್ನು ನೆನಪಿನಲ್ಲಿಡುತ್ತದೆ ಎಂದು ಭಾವುಕರಾಗಿ ನುಡಿದರು . ಹೊಸ ಸರ್ಕಾರದ ಅಡಿಯಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ವಾಕ್ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಬಂಗಾಳದಲ್ಲಿ ರಕ್ಷಿಸಲಾಗಿದೆ ಎಂದು ಇಂದು ಸಾಬೀತಾಗಿದೆ" ಎಂದು ಅವರು ಹೇಳಿದರು. ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸದೆ, ಅಧಿಕಾರಿ ಬೆದರಿಕೆ ಮತ್ತು ಜನರನ್ನು ಮೌನಗೊಳಿಸುವ ಪ್ರಯತ್ನಗಳ ಯುಗ ಮುಗಿದಿದೆ" ಎಂದು ಹೇಳಿದರು.