NEET-UG ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಇನ್ನೂ 1 ಕೋಟಿ ರೂ ಪರಿಹಾರ ನೀಡದ ಸರ್ಕಾರ! ಸಿಜೆಪಿ ವಾರ್ನಿಂಗ್ ಏನು?

"ಸರ್ಕಾರ ಒಪ್ಪಿಕೊಂಡಂತೆ 1 ಕೋಟಿ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ, ನಾವು ಮತ್ತೆ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
CJP founder Abhijeet Dipke
ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್
Updated on

ನವದೆಹಲಿ: ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸುವುದಾಗಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೋಮವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ (ANI) ಜೊತೆ ಮಾತನಾಡಿದ ಅಭಿಜಿತ್ ದೀಪ್ಕೆ, ಆತ್ಮಹತ್ಯೆ ಮಾಡಿಕೊಂಡ NEET-UG ಆಕಾಂಕ್ಷಿಗಳ ಕುಟುಂಬಗಳಿಗೆ ಕೇಂದ್ರ ಸರ್ಕಾರ ಇನ್ನೂ 1 ಕೋಟಿ ರೂ. ಪರಿಹಾರವನ್ನು ನೀಡಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದರು. "ಸರ್ಕಾರ ಒಪ್ಪಿಕೊಂಡಂತೆ 1 ಕೋಟಿ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ, ನಾವು ಮತ್ತೆ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಯಾವುದೇ ಕುಟುಂಬಕ್ಕೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ: ಸಂತ್ರಸ್ತ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕೆಂದು ನಾವು ಒತ್ತಾಯಿಸಿದ್ದೆವು. ಆದರೆ ಯಾವುದೇ ಕುಟುಂಬಕ್ಕೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಇದಕ್ಕಾಗಿ ನಿಯಮಗಳು ಮತ್ತು ಮಾನದಂಡಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. ಸಂಸದರು ಅಥವಾ ಶಾಸಕರನ್ನು ಖರೀದಿಸಬೇಕಾದಾಗ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತೀರಿ, ಆದರೆ ಪರಿಹಾರ ನೀಡುವಾಗ ಮಾತ್ರ ನಿಯಮಗಳನ್ನು ಪರಿಶೀಲಿಸಬೇಕಾಗುತ್ತದೆ. ಇದರರ್ಥ ಅವರ ಉದ್ದೇಶ ಸರಿಯಿಲ್ಲ ಎಂದು ಹೇಳಿದರು.

ಸಿಜೆಪಿಯ ಪ್ರಮುಖ ಬೇಡಿಕೆಯಾದ 1 ಕೋಟಿ ರೂ.ಪರಿಹಾರ: 1 ಕೋಟಿ ರೂ. ಪರಿಹಾರವು CJP ಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅವರ ಇತರ ಎರಡು ಬೇಡಿಕೆಗಳಲ್ಲಿ ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು (FIR) ಹಿಂಪಡೆಯುವುದು ಸೇರಿದ್ದವು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ಮತ್ತು ತಮ್ಮ ಇತರ ಪ್ರಮುಖ ಬೇಡಿಕೆಗಳ ಬಗ್ಗೆ ಭರವಸೆ ಸಿಕ್ಕ ನಂತರ, CJP ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ 37 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಜುಲೈ 25 ರಂದು ಹಿಂಪಡೆಯಿತು.

ಪ್ರಲ್ಹಾದ್ ಜೋಶಿಗೆ ಇಲ್ಲ ಬೆಂಬಲ: ಪ್ರಲ್ಹಾದ್ ಜೋಶಿ ಅವರನ್ನು ಹೊಸ ಕೇಂದ್ರ ಶಿಕ್ಷಣ ಸಚಿವರನ್ನಾಗಿ ನೇಮಿಸಿರುವುದನ್ನು ತಾವು ಬೆಂಬಲಿಸುವುದಿಲ್ಲ ಎಂದು ದೀಪ್ಕೆ ಹೇಳಿದರು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೇ ನಮ್ಮ ಬೇಡಿಕೆಯಾಗಿತ್ತು. ಅದು ಈಡೇರಿತು. ಆದರೆ ಅವರ ಸ್ಥಾನದಲ್ಲಿ ಯಾರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು? ಪ್ರಲ್ಹಾದ್ ಜೋಶಿ ಅವರನ್ನು! ಬಿಲ್ಕಿಸ್ ಬಾನೋ ಪ್ರಕರಣದ ಅತ್ಯಾಚಾರಿಗಳಿಗೆ ಅವರು ಹಾರ ಹಾಕಿ ಗೌರವಿಸುತ್ತಿರುವುದು ಕಂಡುಬಂದಿದೆ. ಇಂತಹ ದೃಶ್ಯಗಳನ್ನು ನೋಡಿದಾಗ ಶಾಲೆಗೆ ಹೋಗುವ ಬಾಲಕಿಯರಿಗೆ ಹೇಗೆ ಅನಿಸಬಹುದು ಎಂಬುದನ್ನು ಊಹಿಸಿಕೊಳ್ಳಿ. ಹಾಗಾಗಿ, ನಾವು ಇದನ್ನು ಬೆಂಬಲಿಸುವುದಿಲ್ಲ ಎಂದರು.

ಗುಂಡಾಗಳು" ಮತ್ತು ದೆಹಲಿ ಪೊಲೀಸರ ನಡುವೆ ಒಳ ಒಪ್ಪಂದ: ಜುಲೈ 20 ರಂದು ಪೊಲೀಸ್ ಅಧಿಕಾರಿಗಳ ಮೇಲೆ ನಡೆದಿದೆ ಎನ್ನಲಾದ ದಾಳಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುಂಡಾಗಳು" ಮತ್ತು ದೆಹಲಿ ಪೊಲೀಸರ ನಡುವೆ ಒಳ ಒಪ್ಪಂದ ನಡೆದಿದೆ ಎಂದು ಅವರು ಆರೋಪಿಸಿದರು. ಹೋರಾಟದ ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇನೆ; ಪ್ರತಿಭಟನೆಯನ್ನು ಅಪಖ್ಯಾತಿಗೊಳಿಸಲು ಮತ್ತು ಗೊಂದಲ ಸೃಷ್ಟಿಸಲು ಹೊರಗಿನಿಂದ ಕೆಲವರನ್ನು ಕಳುಹಿಸಿ, ಸಿಜೆಪಿ (CJP)ಗೆ ಸೇರಿದವರ ಮೇಲೆ ಆರೋಪ ಹೊರಿಸಲಾಗುತ್ತದೆ. ಈ ದುಷ್ಕರ್ಮಿಗಳು ದೆಹಲಿ ಪೊಲೀಸರೊಂದಿಗೆ ಸೇರಿ ಪಿತೂರಿ ನಡೆಸಿದ್ದರು. ತಪಾಸಣೆಯಿಲ್ಲದೆ ನನ್ನನ್ನು ಹೋಗಲು ಬಿಡದಿದ್ದ ಅದೇ ಪ್ರತಿಭಟನಾ ಸ್ಥಳದಲ್ಲಿ, 2100 ಮಂದಿ ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದರು. ಇದು ದೆಹಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು.

CJP founder Abhijeet Dipke
'ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಪ್ರಧಾನಿ ಮೋದಿ ಹೊಸ ವಿಡಿಯೋಗೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ರಿಯಾಕ್ಷನ್ ಏನು? Video

ಅಮಿತ್ ಶಾ, ಪೊಲೀಸರ ಸ್ಪಷ್ಟ ವೈಫಲ್ಯ: ಜುಲೈ 19 ರಂದು, ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿನ ವೇದಿಕೆಯ ಹಿಂಭಾಗದಲ್ಲಿ ಕಲ್ಲುಗಳಿಂದ ತುಂಬಿದ ಟ್ರಕ್ ಒಂದನ್ನು ನಿಲ್ಲಿಸಿದ್ದರು. ಇದರ ಹಿಂದಿನ ಕಾರಣವೇನು? ಜುಲೈ 20 ಕ್ಕೂ ಮುನ್ನ ಅಲ್ಲಿ ಹಾನಿಗೊಳಗಾದ ವ್ಯಾನ್ ಒಂದನ್ನು ಕೂಡ ನಿಲ್ಲಿಸಲಾಗಿತ್ತು. ಮರುದಿನವೇ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿದೆ ಎಂಬ ಸುದ್ದಿ ಬಂತು. ದೆಹಲಿ ಪೊಲೀಸರು ಇದನ್ನು ಮೊದಲೇ ಯೋಜಿಸಿದ್ದರು," ಎಂದು ಅವರು ಆರೋಪಿಸಿದರು.

ಗೃಹ ಸಚಿವ ಅಮಿತ್ ಶಾ ಅವರ ಆಡಳಿತದಲ್ಲಿ ಇದು ಹೇಗೆ ನಡೆಯಲು ಸಾಧ್ಯ? 12 ವರ್ಷದ ಬಾಲಕಿ ಮೇಲೆ ಹಲ್ಲೆ ನಡೆಸಬೇಕಾದಾಗ ಮಾತ್ರವೇ ಅವರ ಪೊಲೀಸರು ಸಕ್ರಿಯರಾಗುತ್ತಾರೆಯೇ? ಆದರೆ ಅಪರಾಧಿಗಳನ್ನು ತಡೆಯಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಪ್ರತಿಭಟನಾ ಸ್ಥಳದಲ್ಲಿ 2100 ಅಪರಾಧಿಗಳು ಕಂಡುಬಂದಿದ್ದಾರೆ ಎಂದು ಪೊಲೀಸರೇ ಹೇಳಿದ್ದಾರೆ. ಇದು ಅಮಿತ್ ಶಾ ಮತ್ತು ಪೊಲೀಸರ ಸ್ಪಷ್ಟ ವೈಫಲ್ಯವಾಗಿದೆ. ವಾಸ್ತವವಾಗಿ, ಇದು ಅವರ ವೈಫಲ್ಯವಾಗಿರಲಿಲ್ಲ, ಬದಲಿಗೆ ಅವರ ಯೋಜನೆಯ ಒಂದು ಭಾಗವಾಗಿತ್ತು ಎಂದು ದೀಪ್ಕೆ ಆರೋಪಿಸಿದರು.

ಈ ಮಧ್ಯೆ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮದ ಕುರಿತು ಸಂಸತ್ತಿನಲ್ಲಿ ಅಮಿತ್ ಶಾ ಅವರಿಂದ ಉತ್ತರ ನೀಡುವಂತೆ ವಿರೋಧ ಪಕ್ಷಗಳು ಕೂಡ ಆಗ್ರಹಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com