

ನವದೆಹಲಿ: ನ್ಯಾಯ ಸಿಗಲು ತಡವಾದರೆ ಅದು ನ್ಯಾಯವೇ ಅಲ್ಲ ಎಂಬ ಮಾತು ನಮ್ಮಲ್ಲಿ ಸಾಮಾನ್ಯವಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿದ್ದು, ವರ್ಷಗಟ್ಟಲೆ ಕೋರ್ಟ್ ಅಲೆಯುವ ಪರಿಸ್ಥಿತಿ ಬಂದೊದಗಿದೆ. ದೇಶದ ಅತ್ಯುನ್ನತ ನ್ಯಾಯಾಲಯದಿಂದ ಹಿಡಿದು ಕೆಳಹಂತದ ನ್ಯಾಯಾಲಯಗಳವರೆಗೆ ಕೋಟ್ಯಂತರ ಪ್ರಕರಣಗಳು ತೀರ್ಪಿಗಾಗಿ ಕಾಯುತ್ತಿವೆ. ಆ ಕುರಿತ ವರದಿ ಇಲ್ಲಿದೆ:
ಹೌದು, ಸುಪ್ರೀಂ ಕೋರ್ಟ್ನಲ್ಲಿ ಪ್ರಸ್ತುತ 96,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 10,094 ಪ್ರಕರಣಗಳು ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಯಾವುದೇ ತೀರ್ಪಿಲ್ಲದೆ ಹಾಗೇ ಉಳಿದುಕೊಂಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇತ್ತೀಚೆಗೆ ರಾಜ್ಯಸಭೆಗೆ ನೀಡಿದ ಮಾಹಿತಿಯ ಪ್ರಕಾರ, ಭಾರತದ ಸುಪ್ರೀಂ ಕೋರ್ಟ್ನಲ್ಲಿ ಪ್ರಸ್ತುತ 96,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 10,094 ಪ್ರಕರಣಗಳು ಒಂದು ದಶಕ ಅಂದ್ರೆ 10 ವರ್ಷ, 558 ಪ್ರಕರಣಗಳು 20 ವರ್ಷ ಹಾಗೂ 26 ಪ್ರಕರಣಗಳು 30 ವರ್ಷಕ್ಕೂ ಹೆಚ್ಚು ಸಮಯದಿಂದ ಯಾವುದೇ ತೀರ್ಪಿಲ್ಲದೆ ಹಾಗೇ ಉಳಿದುಕೊಂಡಿವೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ದೇಶಾದ್ಯಂತ ಇರುವ ಪ್ರಕರಣಗಳು ಬಾಕಿ ಇರುವುದು ಕೇವಲ ಸುಪ್ರೀಂ ಕೋರ್ಟ್ನಲ್ಲಿ ಮಾತ್ರವಲ್ಲ. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (NJDG) ಅಂಕಿ-ಅಂಶಗಳ ಪ್ರಕಾರ, ಜುಲೈ 2026 ರ ಹೊತ್ತಿಗೆ ಸುಪ್ರೀಂ ಕೋರ್ಟ್, ದೇಶದ ಎಲ್ಲಾ ಉಚ್ಚ ನ್ಯಾಯಾಲಯಗಳು ಮತ್ತು ಜಿಲ್ಲಾ/ಅಧೀನ ನ್ಯಾಯಾಲಯಗಳನ್ನು ಒಳಗೊಂಡಂತೆ ಒಟ್ಟು 5.64 ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ.
ಹೈಕೋರ್ಟ್ಗಳಲ್ಲೆ ಹೆಚ್ಚು ವಿಳಂಬ!
ವರದಿಯ ಪ್ರಕಾರ, ದೇಶದ ವಿವಿಧ ಹೈಕೋರ್ಟ್ಗಳಲ್ಲಿ 30 ವರ್ಷಗಳಿಗಿಂತಲೂ ಹಳೆಯದಾದ 80,660 ಪ್ರಕರಣಗಳು ಬಾಕಿ ಇವೆ. ಇದಕ್ಕೆ ನ್ಯಾಯಾಧೀಶರ ಕೊರತೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಯಾಕಂದ್ರೆ, ದೇಶದ ಹೈಕೋರ್ಟ್ಗಳಲ್ಲಿ ಮಂಜೂರಾದ ಒಟ್ಟು 1,122 ನ್ಯಾಯಾಧೀಶರ ಹುದ್ದೆಗಳ ಪೈಕಿ 341 ಹುದ್ದೆಗಳು ಖಾಲಿ ಇವೆ.
ಮುಂದುವರೆದು, 1987 ರ ಕಾನೂನು ಆಯೋಗದ ಶಿಫಾರಸಿನ ಪ್ರಕಾರ, ಭಾರತದಲ್ಲಿ ಪ್ರತಿ10 ಲಕ್ಷ ಜನರಿಗೆ ಕನಿಷ್ಠ 50 ನ್ಯಾಯಾಧೀಶರು ಇರಬೇಕು. ಆದರೆ, ಹಾಲಿ, ಪ್ರತಿ 10 ಲಕ್ಷ ಜನಸಂಖ್ಯೆಗೆ ಪ್ರಸ್ತುತ ಸುಮಾರು 21 ನ್ಯಾಯಾಧೀಶರುಗಳಿದ್ದಾರೆ. ಈ ಕಾರಣದಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಳಂಬವಾಗುತ್ತಿದೆ. ಇದರ ಪರಿಣಾಮ, ದೇಶದ ಜೈಲುಗಳಲ್ಲಿ ತೀರ್ಪು ಬಾರದೆ ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆ ಜೈಲುಗಳ ಸಾಮರ್ಥ್ಯಕ್ಕಿಂತ ಶೇ. 130 ರಷ್ಟು ಹೆಚ್ಚಾಗಿದೆ.