

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಎರಡು ಉಗ್ರ ದಾಳಿಗಳ ಪ್ರಮುಖ ಸಂಚುಕೋರನೆಂದು ಶಂಕಿಸಲಾಗಿರುವ ಲಷ್ಕರ್-ಇ-ತೊಯ್ಬಾ (LeT) ಉಗ್ರ ಸಂಘಟನೆಯ ಭಯೋತ್ಪಾದಕ ಮೊಹಮ್ಮದ್ ಲತೀಫ್ ಭಟ್ ಬಗ್ಗೆ ಮಾಹಿತಿ ನೀಡುವವರಿಗೆ 15 ಲಕ್ಷ ರೂ. ಬಹುಮಾನ ನೀಡುವುದಾಗಿ ಜಮ್ಮು-ಕಾಶ್ಮೀರ ಪೊಲೀಸರು ಘೋಷಿಸಿದ್ದಾರೆ.
22 ವರ್ಷದ ಲತೀಫ್ ಭಟ್ನ ಭಾವಚಿತ್ರಗಳಿರುವ ಪೋಸ್ಟರ್ಗಳನ್ನು ಶ್ರೀನಗರ ಸೇರಿದಂತೆ ಕಾಶ್ಮೀರದ ಪ್ರಮುಖ ಸ್ಥಳಗಳಲ್ಲಿ ಅಂಟಿಸಲಾಗಿದ್ದು, ಆತನ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಲಾಗಿದೆ.
ಪೋಸ್ಟರ್ನಲ್ಲಿ, ಉಗ್ರನ ಇರುವಿಕೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಇರುವವರು ತಕ್ಷಣವೇ ಭದ್ರತಾ ಪಡೆಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಮಾಹಿತಿ ನೀಡಲು ದೂರವಾಣಿ ಸಂಖ್ಯೆ, ವಾಟ್ಸ್ಆಪ್ ಸಂಖ್ಯೆ ಹಾಗೂ ಟೆಲಿಗ್ರಾಂ ಐಡಿಯನ್ನು ಸಹ ಪ್ರಕಟಿಸಲಾಗಿದೆ.
ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಹಾಗೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಜುಲೈ 22ರಂದು ಅನಂತನಾಗ್ನ ಲಾಲ್ ಚೌಕ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಆಶಿಕ್ ಹುಸೇನ್ ಖುರೇಶಿ ಹತ್ಯೆ ಹಾಗೂ ಜುಲೈ 31ರಂದು ಕುಲ್ಗಾಂ ಜಿಲ್ಲೆಯ ಕಿಲಾಮ್ ಪ್ರದೇಶದ ಇಟ್ಟಿಗೆ ಭಟ್ಟಿಯಲ್ಲಿ ಛತ್ತೀಸ್ಗಢ ಮೂಲದ ಇಬ್ಬರು ಕಾರ್ಮಿಕರ ಹತ್ಯೆ ಪ್ರಕರಣಗಳ ತನಿಖೆಯಲ್ಲಿ ಲತೀಫ್ ಭಟ್ ಪ್ರಮುಖ ಆರೋಪಿಯಾಗಿದ್ದಾನೆ.
ಕಳೆದ ವರ್ಷ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ಲತೀಫ್, ಕಳೆದ ತಿಂಗಳು ಶೋಪಿಯಾನ್ನಲ್ಲಿ ನಡೆದ ಭದ್ರತಾ ಪಡೆಗಳ ಎನ್ಕೌಂಟರ್ ವೇಳೆ ತಪ್ಪಿಸಿಕೊಂಡಿದ್ದನು.
ಆ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಸ್ಥಳೀಯ ಉಗ್ರ ಜಾಕಿರ್ ಅಹ್ಮದ್ ಹತ್ಯೆಯಾಗಿದ್ದರೆ, ಲತೀಫ್ ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು.
ಇತ್ತೀಚಿನ ಸರಣಿ ಉಗ್ರ ದಾಳಿಗಳ ಬಳಿಕ ಲತೀಫ್ ಭಟ್ನ ಪತ್ತೆಗಾಗಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಕಣಿವೆಯ ಹಲವು ಪ್ರದೇಶಗಳಲ್ಲಿ ದಾಳಿ ಮತ್ತು ಶೋಧ ನಡೆಸಿವೆ.
ಪೊಲೀಸ್ ಸಿಬ್ಬಂದಿ ಹತ್ಯೆಯ ಬಳಿಕ ಉಗ್ರರಿಗೆ ನೆರವು ನೀಡುತ್ತಿದ್ದ ಶಂಕೆಯ ಮೇರೆಗೆ 3,500ಕ್ಕೂ ಹೆಚ್ಚು ಶಂಕಿತರನ್ನು (Over Ground Workers - OGWs) ಪೊಲೀಸರು ಹಾಗೂ ಇತರ ಭದ್ರತಾ ಸಂಸ್ಥೆಗಳು ವಶಕ್ಕೆ ಪಡೆದಿವೆ.