

ಮುಂಬೈ: ಸಮಾಜದಲ್ಲಿ ಸಾಮಾಜಿಕ ತಾರತಮ್ಯ ಸಂಪೂರ್ಣವಾಗಿ ನಿರ್ಮೂಲನೆಯಾಗುವವರೆಗೆ ಮೀಸಲಾತಿ (Reservation) ವ್ಯವಸ್ಥೆ ಮುಂದುವರಿಯಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಯುವ ಸಂವಾದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ಕುರಿತು ಬಿ ಆರ್ ಅಂಬೇಡ್ಕರ್ ಅವರ ಮೂಲ ತತ್ವಗಳನ್ನು ಉಲ್ಲೇಖಿಸಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮೀಸಲಾತಿ ಬಗ್ಗೆ ಏನು ಯೋಚಿಸಿದ್ದರು ಎಂಬುದನ್ನೇ ನಾನು ಹೇಳುತ್ತೇನೆ. ಅವರ ಸಲಹೆಯನ್ನು ನಾವು ಪ್ರಾಮಾಣಿಕವಾಗಿ ಅನುಸರಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೀಸಲಾತಿ ಸಾಮಾಜಿಕ ಕಾರಣಗಳಿಂದ ಅಸ್ತಿತ್ವದಲ್ಲಿದೆ. ಸಮಾಜದಲ್ಲಿ ಸಾಮಾಜಿಕ ತಾರತಮ್ಯ ಇರುವವರೆಗೆ ಮೀಸಲಾತಿಯೂ ಮುಂದುವರಿಯುತ್ತದೆ. ಇದರ ಪ್ರಯೋಜನ ಪಡೆದವರು ಅದನ್ನು ಮುಂದಿನ ಅಗತ್ಯವಿರುವವರಿಗೆ ಹಸ್ತಾಂತರಿಸಬೇಕು ಎಂದು ಹೇಳಿದರು.
ಕೆಲವು ರಾಜ್ಯಗಳಲ್ಲಿ ಮೀಸಲಾತಿಯ ಆಂತರಿಕ ವರ್ಗೀಕರಣ (Categorisation) ಕುರಿತ ಬೇಡಿಕೆಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ಮೀಸಲಾತಿಯ ಪ್ರಯೋಜನ ಪಡೆದವರು ಈಗ ಅದನ್ನು ಇತರರಿಗೆ ನೀಡಬೇಕು ಎಂಬ ಧ್ವನಿಗಳು ಕೇಳಿಬರುತ್ತಿವೆ. ಕೆಲವು ರಾಜ್ಯಗಳಲ್ಲಿ ವರ್ಗೀಕರಣಕ್ಕೆ ಬೇಡಿಕೆ ಬಂದಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ ಎಂದರು.
ಮೀಸಲಾತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಎಚ್ಚರಿಸಿದ ಮೋಹನ್ ಭಾಗವತ್, ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ. ಇದು ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರೂಪಿಸಲಾದ ಕ್ರಮ. ಇದರ ಪ್ರಯೋಜನ ಪಡೆದು ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಂಡವರು, ಅದನ್ನು ಇನ್ನೂ ಅವಕಾಶ ಸಿಗದವರಿಗೆ ದೊರೆಯುವಂತೆ ಮಾಡಬೇಕು. ಇಂತಹ ಮನೋಭಾವವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮೀಸಲಾತಿಯ ಮೇಲೆ ರಾಜಕೀಯ ಮಾಡಬಾರದು. ಇದನ್ನು ಸಮಾಜದ ಐಕ್ಯತೆಗಾಗಿ ಜಾರಿಗೆ ತರಲಾಗಿದೆ. ಕ್ರಮದಲ್ಲಿ ತಪ್ಪಿಲ್ಲ, ಆದರೆ ಅದನ್ನು ಬಳಸುವವರು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಳಸುತ್ತಿದ್ದಾರೆ. ಅದು ಸರಿಯಾಗುವವರೆಗೆ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಭಾಗವತ್ ಅವರ ಭಾಷಣದ ಬಳಿಕ ಪ್ರತಿಕ್ರಿಯಿಸಿದ ವಿಶ್ವ ವ್ಯಾಪಾರ ಕೇಂದ್ರದ (World Trade Centre) ಅಧ್ಯಕ್ಷ ವಿಜಯ್ ಕಲಾಂತ್ರಿ, ಜಂತರ್ ಮಂತರ್ನಲ್ಲಿ ನಡೆದ ಇತ್ತೀಚಿನ ಘಟನೆ ದುರದೃಷ್ಟಕರವಾಗಿದ್ದು, ಸರ್ಕಾರ ಮೊದಲೇ ಸಂವಾದ ಆರಂಭಿಸಿದ್ದರೆ ಪರಿಸ್ಥಿತಿ ತಪ್ಪಿಸಬಹುದಿತ್ತು ಎಂದು ಹೇಳಿದರು.
ಸರ್ಕಾರ ಆರಂಭದಲ್ಲೇ ಕಾರ್ಯಪಡೆ (Task Force) ರಚಿಸಿ ಸಂವಾದ ನಡೆಸಬೇಕಿತ್ತು. ವಿಳಂಬದಿಂದ ರಾಜಕೀಯ ಮತ್ತು ಸಮಾಜ ವಿರೋಧಿ ಶಕ್ತಿಗಳು ಚಳವಳಿಯೊಳಗೆ ನುಸುಳಲು ಅವಕಾಶ ಸಿಕ್ಕಿತು. ಇದರಿಂದ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದರು.
ಡಿಜಿಟಲ್ ವೇದಿಕೆಗಳಲ್ಲಿ ಪರಿಶೀಲಿಸದ ಮಾಹಿತಿಯ ಪ್ರಸಾರ ಗೊಂದಲ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಆಡಳಿತಾತ್ಮಕ ಎಚ್ಚರಿಕೆ ಅಗತ್ಯ ಎಂದು ಕಲಾಂತ್ರಿ ಅಭಿಪ್ರಾಯಪಟ್ಟರು.