

ನವದೆಹಲಿ: 'ನನ್ನನ್ನು ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ ನಾನಿದ್ದ ವೇದಿಕೆಯನ್ನು ಶುದ್ಧೀಕರಣ ಮಾಡಿದ್ದಾರೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಳಿಕ, ಅದೇ ಸ್ಥಳದಲ್ಲಿ ‘ಶುದ್ಧೀಕರಣ’ ಹವನ ನಡೆಸಿರುವ ಕುರಿತು ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.
“ಇದು ಸಂಪೂರ್ಣವಾಗಿ ತಪ್ಪು. ರಾಜಕೀಯದಲ್ಲಿ ಇಂತಹ ಮಟ್ಟಕ್ಕೆ ಇಳಿಯುವುದು ಖಂಡನೀಯ. ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ಜೀ ಸಭೆಯನ್ನುದ್ದೇಶಿಸಿ ಮಾತನಾಡಿದರೆ, ಉತ್ತರಾಖಂಡದಲ್ಲಿ ಈ ರೀತಿಯ ‘ಶುದ್ಧೀಕರಣ’ ಆಚರಣೆ ನಡೆಸುವುದು ಎಂತಹ ವರ್ತನೆ? ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಆದರೂ ಮುಖ್ಯಮಂತ್ರಿ ಇದುವರೆಗೆ ಮೌನವಾಗಿದ್ದಾರೆ. ಮುಖ್ಯಮಂತ್ರಿ ಧಾಮಿ ಈ ಬಗ್ಗೆ ಮಾತನಾಡಬೇಕು” ಎಂದು ಅವರು ಹೇಳಿದ್ದಾರೆ.
ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, “ನಾನು ಇದನ್ನು ರಾಜಕೀಯ ವಿಚಾರವನ್ನಾಗಿ ಮಾಡಲು ಬಯಸುವುದಿಲ್ಲ. ನಾನು ಹಲವು ವರ್ಷಗಳಿಂದ ಈ ಸದನದಲ್ಲಿದ್ದೇನೆ. ನಾನು ಪರಿಶಿಷ್ಟ ಜಾತಿಗೆ ಸೇರಿದವನು, ದಲಿತ. ನನಗೆ ಸಹಾಯ ಮಾಡಿ, ನನ್ನನ್ನು ರಕ್ಷಿಸಿ ಎಂದು ನಾನು ಈ ಹಿಂದೆ ಯಾರ ಮುಂದೆಯೂ ಬೇಡಿಕೊಂಡಿಲ್ಲ. ಹೋರಾಡುವ ಶಕ್ತಿ ನನ್ನಲ್ಲಿದೆ ಮತ್ತು ನಾನು ಹೋರಾಡುತ್ತೇನೆ. ಆದರೆ ನೀವು ನನ್ನನ್ನು ಅಸ್ಪೃಶ್ಯನಂತೆ ಕಾಣುತ್ತೀರಿ, ‘ಶುದ್ಧೀಕರಣ’ ಮಾಡುತ್ತೀರಿ ಮತ್ತು ನನ್ನನ್ನು ಅವಮಾನಿಸುತ್ತೀರಿ” ಎಂದು ಹೇಳಿದ್ದಾರೆ.
ನಡ್ಡಾ ಪ್ರತಿಕ್ರಿಯೆ
ಕೇಂದ್ರ ಸಚಿವ ಹಾಗೂ ರಾಜ್ಯಸಭೆಯ ಸದನದ ನಾಯಕ ಜೆ.ಪಿ. ನಡ್ಡಾ, “ಇಂತಹ ಚಟುವಟಿಕೆಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಇದು ನಮ್ಮೆಲ್ಲರಿಗೂ, ಇಡೀ ದೇಶಕ್ಕೂ ವಿಷಾದದ ವಿಷಯ. ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ. ಆದರೆ ಖರ್ಗೆ ಸಾಹೇಬರು, ‘ನೀವು ಇದನ್ನು ಮಾಡಿದ್ದೀರಿ’ ಎಂದು ಹೇಳುವುದು ಸರಿಯಲ್ಲ...” ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸದನದ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ, “ಖರ್ಗೆ ಜೀ ಹೇಳಿದ್ದು ನಿಜಕ್ಕೂ ದುಃಖಕರ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ನಮ್ಮೆಲ್ಲರಿಗೂ ದುಃಖದ ವಿಚಾರ... ಇಂತಹ ಚಟುವಟಿಕೆಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಎಂದಿಗೂ ಬೆಂಬಲಿಸುವುದಿಲ್ಲ. ಆದರೆ ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ.
ಅಲ್ಲಿ ಏನಾಯಿತು ಎಂಬುದರ ಕುರಿತು ಖಂಡಿತವಾಗಿಯೂ ತನಿಖೆ ನಡೆಸಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ. ಆದರೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಇಂತಹ ಚಟುವಟಿಕೆಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ. ನಾನು ಇದನ್ನು ಖಂಡಿಸುತ್ತೇನೆ. ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ನಿಮ್ಮ ಭಾವನೆಗಳಿಗೆ ನೋವುಂಟಾಗಿರುವುದು ನಮ್ಮೆಲ್ಲರಿಗೂ ಅತ್ಯಂತ ವಿಷಾದದ ವಿಚಾರ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, “ನಾನು ಹಲ್ದ್ವಾನಿಯಲ್ಲಿದ್ದೆ. ಅಲ್ಲಿ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದೆ. ಲಕ್ಷಾಂತರ ಜನರು ಅಲ್ಲಿ ಸೇರಿದ್ದರು. ಆ ಸಂದರ್ಭದಲ್ಲಿ ನಾನು ಯಾವುದೇ ಸಮುದಾಯ ಅಥವಾ ಧರ್ಮದ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಸರ್ಕಾರದ ವಿಚಾರಗಳನ್ನು ಮಾತ್ರ ಪುನರುಚ್ಚರಿಸಿದ್ದೆ. ಆದರೆ ನನ್ನ ಭಾಷಣದ ಬಳಿಕ ಬಿಜೆಪಿ ಕಾರ್ಯಕರ್ತರು ಆ ವೇದಿಕೆಯನ್ನು ‘ಶುದ್ಧೀಕರಿಸಲು’ ಅಲ್ಲಿ ಹವನ ನಡೆಸಿದರು... ಪ್ರಜಾಪ್ರಭುತ್ವದಲ್ಲಿ ಇದೇನಾ ನಡೆ? ನೀವು ಸಂವಿಧಾನವನ್ನು ಹೇಗೆ ರಕ್ಷಿಸುತ್ತಿದ್ದೀರಿ? ನಾನು ವಿರೋಧ ಪಕ್ಷದ ನಾಯಕ” ಎಂದು ಹೇಳಿದ್ದಾರೆ.