

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರನ್ನು ದಿಮಾಗಿ ನಕ್ಸಲರು ಎಂಬುದಾಗಿ ಕರೆದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಸೇರಿದಂತೆ ವಿಪಕ್ಷ ನಾಯಕರು ಈ ಕುರಿತು ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ರಿಜಿಜು ಈ ವಿವರಣೆ ನೀಡಿದ್ದಾರೆ. ಕಿರಣ್ ರಿಜಿಜು ಅವರು ಎಕ್ಸ್ ಖಾತೆಯಲ್ಲಿ ‘ದಿಮಾಗಿ ನಕ್ಸಲ್’ ಪದದ ವ್ಯಾಖ್ಯಾನವನ್ನು ಹಂಚಿಕೊಂಡಿದ್ದಾರೆ.
ಮಾವೋವಾದಿಗಳನ್ನು ಬೆಂಬಲಿಸುವ ಮತ್ತು ಭಾರತದ ಸಂವಿಧಾನವನ್ನು ತಿರಸ್ಕರಿಸುವವರು. ಪ್ರತ್ಯೇಕತಾವಾದಿಗಳೊಂದಿಗೆ ನಿಲ್ಲುವ ಹಾಗೂ ಸಂವಿಧಾನದ 370ನೇ ವಿಧಿಯನ್ನು ಬೆಂಬಲಿಸುವವರು. ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗದಿಂದ ಪ್ರತ್ಯೇಕಿಸಲು ಚಿಕನ್ ನೆಕ್ (ಸಿಲಿಗುರಿ ಕಾರಿಡಾರ್) ಕತ್ತರಿಸಲು ಕರೆ ನೀಡುವವರು ದಿಮಾಗಿ ನಕ್ಸಲರು ಎಂದು ರಿಜಿಜು ವ್ಯಾಖ್ಯಾನಿಸಿದ್ದಾರೆ.
ರಿಜಿಜು ಅವರು 2020 ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಶಾರ್ಜಿಲ್ ಇಮಾಮ್ ಅಸ್ಸಾಂ ಮತ್ತು ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕಿಸಲು ಸಿಲುಗಿರಿ ಕಾರಿಡಾರ್ ಅನ್ನು ದಿಗ್ಬಂಧನ ಮಾಡಬೇಕು ಎಂದು ಕರೆ ನೀಡಿದ್ದ ವಿವಾದಾತ್ಮಕ ಭಾಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿಯ ಜನರನ್ನು ಬೆಂಬಲಿಸುವವರನ್ನು ಮಾತ್ರ ದಿಮಾಗಿ ನಕ್ಸಲರು ಎಂದು ಕರೆಯಲಾಗುತ್ತದೆ ಎಂದು ಬರೆದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಮಾವೋವಾದವನ್ನು ಯಶಸ್ವಿಯಾಗಿ ಬುಡಸಮೇತ ಕಿತ್ತೊಗೆದಿದ್ದಕ್ಕಾಗಿ ದೇಶದ ಜನತೆಯನ್ನು ಅಭಿನಂದಿಸಿದ್ದರು. ಇದೇ ವೇಳೆ ಅವರು ಸಾವಿರಾರು ಭದ್ರತಾ ಸಿಬ್ಬಂದಿಯ ತ್ಯಾಗವನ್ನೂ ಸ್ಮರಿಸಿದ್ದರು. "ಕಾಡಿನಲ್ಲಿ ಶಸ್ತ್ರಾಸ್ತ್ರ ಹಿಡಿದಿದ್ದ ಮಾವೋವಾದಿಗಳನ್ನು ಮಟ್ಟಹಾಕಲಾಗಿದ್ದರೂ, ಬೌದ್ಧಿಕ ನಕ್ಸಲರನ್ನು ಗುರುತಿಸಿ ಪ್ರತ್ಯೇಕಿಸುವ ಕಾರ್ಯ ಆಗಬೇಕಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದರು.