

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಮತ್ತೆ ಅರೆಸ್ಟ್ ಆಗಿದ್ದಾರೆ.
ದೆಹಲಿ ಭ್ರಷ್ಟಾಚಾರ ನಿಗ್ರಹ ದಳವು (ACB) ಮಂಗಳವಾರ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಸತ್ಯೇಂದರ್ ಜೈನ್, ಮಾಜಿ ಐಎಎಸ್ ಅಧಿಕಾರಿ ಹಾಗೂ ದೆಹಲಿ ಜಲ ಮಂಡಳಿಯ ಸಿಇಒ ಉದಿತ್ ಪ್ರಕಾಶ್ ರೈ, ಗುತ್ತಿಗೆ ಆಧಾರಿತ ಮಾಜಿ ಸಲಹೆಗಾರ ಅಂಕಿತ್ ಶ್ರೀವಾಸ್ತವ ಮತ್ತು ಮೂವರು ಖಾಸಗಿ ವ್ಯಕ್ತಿಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದೆ.
ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೇ 11,2024 ರಂದು ಈ ಎಫ್ಐಆರ್ ದಾಖಲಾಗಿತ್ತು ಎಂದು ಭ್ರಷ್ಟಚಾರ ನಿಗ್ರಹ ದಳ ತಿಳಿಸಿದೆ.
ಇದು ದೆಹಲಿ ಜಲ ಮಂಡಳಿಯ ಒಳಚರಂಡಿ ಸಂಸ್ಕರಣಾ ಘಟಕಗಳ (STP) ವಿಸ್ತರಣೆ ಮತ್ತು ಉನ್ನತೀಕರಣಕ್ಕಾಗಿ ಹೊರಡಿಸಲಾದ ಟೆಂಡರ್ಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಬೃಹತ್ ಪ್ರಮಾಣದ ಅಕ್ರಮಗಳು, ಟೆಂಡರ್ ಷರತ್ತುಗಳಲ್ಲಿನ ತಿರುಚುವಿಕೆ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣವಾಗಿದೆ.
ಇತರ ಕಂಪನಿಗಳ ಸ್ಪರ್ಧೆಯನ್ನು ಸೀಮಿತಗೊಳಿಸುವ ಮೂಲಕ, ನಿರ್ದಿಷ್ಟ ತಂತ್ರಜ್ಞಾನ ಮತ್ತು 'ಮೆಸರ್ಸ್ ಯುರೋಟೆಕ್ ಎನ್ವಿರಾನ್ಮೆಂಟ್ ಪ್ರೈವೇಟ್ ಲಿಮಿಟೆಡ್' ಎಂಬ ಖಾಸಗಿ ಕಂಪನಿಗೆ ಅನುಕೂಲವಾಗುವಂತೆ ಟೆಂಡರ್ನ ತಾಂತ್ರಿಕ ವಿವರಣೆಯನ್ನು ರೂಪಿಸಲಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಸಂಸ್ಕರಿಸಿದ ತ್ಯಾಜ್ಯ ನೀರಿಗೆ (effluent) ಸಂಬಂಧಿಸಿದ ಅಗತ್ಯ ಮಾನದಂಡಗಳನ್ನು ಟೆಂಡರ್ನಿಂದ ಕೈಬಿಡಲಾಗಿದೆ ಮತ್ತು ತಾಂತ್ರಿಕ ವಿವರಣೆಗಳನ್ನು ಬದಲಾಯಿಸಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭಾರಿ ಆರ್ಥಿಕ ಹೊರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.