

ಶೇಖ್ ಹಸೀನಾ ಅವರ ಹಸ್ತಾಂತರದ ವಿಷಯವಾಗಿ ಭಾರತ- ಬಾಂಗ್ಲಾ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಮಧ್ಯೆ, ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಔಪಚಾರಿಕ ಸ್ವಾಗತಕ್ಕಾಗಿ ಪೂರ್ವಾಭ್ಯಾಸದ ಕುರಿತಾದ ಸಂದೇಶ, ಸಂವಹನವನ್ನು ರಾಷ್ಟ್ರಪತಿ ಭವನ ಹಿಂತೆಗೆದುಕೊಂಡಿದೆ. ಇದು ಅವರ ಮುಂಬರುವ ಬ್ರಿಕ್ಸ್ ಶೃಂಗಸಭೆಯ ಭೇಟಿಯ ಬಗ್ಗೆ ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಷ್ಟ್ರಪತಿ ಭವನದ ಹೊಸ ಹೇಳಿಕೆಯು, "ಈ ಶನಿವಾರ (ಆಗಸ್ಟ್ 21, 2026) ಗಾರ್ಡ್ ಬದಲಾವಣೆ ಸಮಾರಂಭದ ಕುರಿತು ಹೊರಡಿಸಲಾದ ಪತ್ರಿಕಾ ಪ್ರಕಟಣೆಯನ್ನು ಹಿಂಪಡೆಯಲಾಗಿದೆ" ಎಂದು ಹೇಳಿದೆ.
ಭೇಟಿ ನೀಡಲಿರುವ ಬಾಂಗ್ಲಾದೇಶ ಪ್ರಧಾನಿಗೆ ಯೋಜಿಸಲಾದ ಸ್ವಾಗತದ ಪೂರ್ಣ ಪೂರ್ವಾಭ್ಯಾಸದ ಸಾಪ್ತಾಹಿಕ ಸಮಾರಂಭವನ್ನು ರದ್ದುಗೊಳಿಸುವುದಾಗಿ ರಾಷ್ಟ್ರಪತಿ ಭವನ ಘೋಷಿಸಿದ ಒಂದು ಗಂಟೆಯ ನಂತರ ಈ ಬೆಳವಣಿಗೆ ಸಂಭವಿಸಿದೆ.
"ಬಾಂಗ್ಲಾದೇಶ ಪ್ರಧಾನಿಯ ಔಪಚಾರಿಕ ಸ್ವಾಗತಕ್ಕಾಗಿ ಪೂರ್ಣ ಪೂರ್ವಾಭ್ಯಾಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆಯಬೇಕಿದ್ದ ಗಾರ್ಡ್ ಬದಲಾವಣೆ ಸಮಾರಂಭ ಈ ಶನಿವಾರ (ಆಗಸ್ಟ್ 22, 2026) ನಡೆಯುವುದಿಲ್ಲ" ಎಂದು ಹೇಳಿದೆ.
ಹಸೀನಾ ಅವರನ್ನು ಹಸ್ತಾಂತರಿಸಬೇಕೆಂಬ ಢಾಕಾದ ಬೇಡಿಕೆಯ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಮುಂಬರುವ ಬ್ರಿಕ್ಸ್ ಶೃಂಗಸಭೆಗಾಗಿ ರೆಹಮಾನ್ ಅವರ ಪ್ರಸ್ತಾವಿತ ಭೇಟಿಯ ಸುತ್ತ ಮತ್ತಷ್ಟು ರಾಜತಾಂತ್ರಿಕ ಅನಿಶ್ಚಿತತೆಗೆ ಈ ಬೆಳವಣಿಗೆ ಕಾರಣವಾಗಿದೆ.
ಮಂಗಳವಾರ, ಬಾಂಗ್ಲಾದೇಶದ ವ್ಯವಹಾರ ಮುಖಂಡರು ಮತ್ತು ಅಲ್ಲಿಗೆ ಭೇಟಿ ನೀಡಿದ್ದ ಭಾರತೀಯ ನಿಯೋಗಕ್ಕಾಗಿ ಢಾಕಾದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಭಾರತೀಯ ಹೈಕಮಿಷನರ್ ದಿನೇಶ್ ತ್ರಿವೇದಿ ದ್ವಿಪಕ್ಷೀಯ ಘರ್ಷಣೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರೆಹಮಾನ್ ಅವರ ಪ್ರವಾಸವನ್ನು "ಸ್ಮರಣೀಯ" ವನ್ನಾಗಿ ಮಾಡಲು ಬಯಸಿದ್ದಾರೆ ಎಂದು ಅವರು ತಿಳಿಸಿದರು. "ಪ್ರಧಾನಿ ಮೋದಿ ಕೇವಲ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನಾವು ಭೇಟಿಯಾಗಬೇಕಾಗಿದೆ" ಎಂದು ತ್ರಿವೇದಿ ಹೇಳಿದ್ದರು.
ಆದಾಗ್ಯೂ, ಢಾಕಾದ ರಾಜತಾಂತ್ರಿಕ ಕಾರಿಡಾರ್ಗಳಿಂದ ಹೊರಹೊಮ್ಮುವ ಸಂಕೇತಗಳು ಜಾಗರೂಕವಾಗಿಯೇ ಇದ್ದವು. ಗುರುವಾರ ಪ್ರಕಟವಾದ ಸರ್ಕಾರಿ ಸ್ವಾಮ್ಯದ ಬಿಎಸ್ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಬಾಂಗ್ಲಾದೇಶ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಹುಮೈಯುನ್ ಕೋಬಿರ್, "ಪರಸ್ಪರ ನಂಬಿಕೆ" ಮತ್ತು ನವದೆಹಲಿ "ಗೌರವಯುತ ಆಹ್ವಾನ"ದ ಮೇಲೆ ವಾತಾವರಣವನ್ನು ನಿರ್ಮಿಸದ ಹೊರತು ರೆಹಮಾನ್ ಅವರ ಶೃಂಗಸಭೆಯ ಭೇಟಿಯ ಸಾಧ್ಯತೆ "ಕಡಿಮೆ" ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 12-13 ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಮುಂಚಿತವಾಗಿ ನವದೆಹಲಿ ಮತ್ತು ಢಾಕಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಘರ್ಷಣೆಯನ್ನು ಈ ಬೆಳವಣಿಗೆ ಎತ್ತಿ ತೋರಿಸಿದೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶದ ಇತ್ತೀಚಿನ ಬೇಡಿಕೆಯಿಂದ ಸಂಬಂಧಗಳು ಹದಗೆಟ್ಟಿವೆ.