

ಸಂಭಾಲ್: ನವೆಂಬರ್ 2024ರಲ್ಲಿ ಉತ್ತರ ಪ್ರದೇಶದ ಸಂಭಲ್ನಲ್ಲಿ ನಡೆದ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರ (ಮಾಸ್ಟರ್ ಮೈಂಡ್) ಎಂದು ಆರೋಪಿಸಲಾದ ಪರಾರಿಯಾಗಿರುವ ಗ್ಯಾಂಗ್ಸ್ಟರ್ ಶಾರಿಕ್ ಸಟಾ ವಿರುದ್ಧ ಇಂಟರ್ಪೋಲ್ 'ರೆಡ್ ಕಾರ್ನರ್ ನೋಟಿಸ್' ಜಾರಿಗೊಳಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಬಿಜ್ನೋರ್ನ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ನಿಯೋಜನೆಗೊಂಡಿರುವ ಸಂಭಲ್ನ ಮಾಜಿ ಎಸ್ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಶುಕ್ರವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ನವೆಂಬರ್ 24, 2024ರ ಹಿಂಸಾಚಾರದ ಮಾಸ್ಟರ್ ಮೈಂಡ್ ಸಟಾನನ್ನು ನ್ಯಾಯಾಲಯವು ಈ ಹಿಂದೆಯೇ 'ಪರಾರಿಯಾದ ಅಪರಾಧಿ' ಎಂದು ಘೋಷಿಸಿತ್ತ. ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗಳನ್ನೂ ಆರಂಭಿಸಲಾಗಿತ್ತು.
ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಉತ್ತರ ಪ್ರದೇಶ ಪೊಲೀಸರು ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಇಂಟರ್ಪೋಲ್ಗೆ ಮನವಿ ಮಾಡಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೋರಿದ್ದರು. ಸಟಾ ನಕಲಿ ಪಾಸ್ಪೋರ್ಟ್ ಬಳಸಿ ದುಬೈಗೆ ಪರಾರಿಯಾಗಿದ್ದ ಮತ್ತು ಆತನ ಕುಟುಂಬದ ಸದಸ್ಯರು ಆಗಾಗ್ಗೆ ಅಲ್ಲಿಗೆ ಪ್ರಯಾಣಿಸುತ್ತಿದ್ದರು.
ಪೊಲೀಸರು ಆತನ ಮೇಲೆ ತೀವ್ರ ನಿಗಾ ಇರಿಸಿದ್ದರು ಮತ್ತು ಸಿಬಿಐಗೆ ವಿವರವಾದ ವರದಿಯನ್ನು ಸಲ್ಲಿಸಿದ್ದರು.ತರುವಾಯ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಇಂಟರ್ಪೋಲ್ನೊಂದಿಗೆ ಸಮನ್ವಯ ಸಾಧಿಸಿದ್ದರು. ಆತ ಪ್ರಸ್ತುತ ಯಾವ ದೇಶದಲ್ಲಿದ್ದರೂ ಅಲ್ಲಿಂದ ಆತನನ್ನು ಬಂಧಿಸಿ ಭಾರತಕ್ಕೆ ಕರೆತರಲು (ಹಸ್ತಾಂತರ) ಈಗ ಪ್ರಯತ್ನಗಳನ್ನು ನಡೆಸಲಾಗುವುದು.
2024ರ ಘಟನೆ ಹಾಗೂ ಆತನ ವಿರುದ್ಧ ಈ ಹಿಂದೆ ದಾಖಲಾಗಿರುವ 55 ರಿಂದ 60 ಇತರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತ ಕಾನೂನು ಕ್ರಮವನ್ನು ಎದುರಿಸುವಂತೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಬಿಷ್ಣೋಯ್ ಹೇಳಿದರು.
ಆ ಸ್ಥಳದಲ್ಲಿ ಹಿಂದೆ ಹರಿಹರ ದೇವಾಲಯವಿತ್ತು ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದಾಗ ಪ್ರತಿಭಟನಾ ನಿರತ ಸ್ಥಳೀಯರು ಭದ್ರತಾ ಸಿಬ್ಬಂದಿಯೊಂದಿಗೆ ಸಂಘರ್ಷಕ್ಕಿಳಿದಿದ್ದರಿಂದ ನವೆಂಬರ್ 24, 2024ರಂದು ಸಂಭಲ್ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ಗಲಭೆಯಲ್ಲಿ ನಾಲ್ವರು ಮೃತಪಟ್ಟಿದ್ದರು ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದರು.