

ನವದೆಹಲಿ: ತಲೆಮಾರುಗಳಿಂದ ಸಾಮಾಜಿಕ ತಾರತಮ್ಯವನ್ನು ಎದುರಿಸಿರುವ ಸಮುದಾಯಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಕಲ್ಪಿಸಲಾದ ಸಾಂವಿಧಾನಿಕ ಹಕ್ಕು ಇದಾಗಿದ್ದು, ಯಾರದ್ದೋ ಬೇಡಿಕೆಯ ಮೇರೆಗೆ ಮೀಸಲಾತಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಶುಕ್ರವಾರ ಹೇಳಿದರು.
ದೆಹಲಿಗೆ ತೆರಳುವ ಮುನ್ನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಕೇಳಿದಾಗ ಪ್ರತಿಕ್ರಿಯೆ ನೀಡಿದರು.
'ಯಾರ ಬೇಡಿಕೆಯ ಮೇರೆಗೂ ಮೀಸಲಾತಿಯು ರದ್ದುಪಡಿಸಬಹುದಾದ ವಿಷಯವಲ್ಲ, ಹಾಗೆಯೇ ಅದು ಯಾರಿಗೂ ನೀಡುವ ಭಿಕ್ಷೆಯೂ ಅಲ್ಲ. ಮೀಸಲಾತಿ ಒಂದು ಸಾಂವಿಧಾನಿಕ ನಿಬಂಧನೆಯೇ ಹೊರತು, ಯಾವುದೇ ಸರ್ಕಾರದ ವಿವೇಚನೆಗೆ ಅನುಗುಣವಾಗಿ ನೀಡಲಾಗುವ ರಿಯಾಯಿತಿಯಲ್ಲ' ಎಂದು ಪಾಸ್ವಾನ್ ಹೇಳಿದರು.
ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕುರಿತು ಪ್ರಸ್ತಾಪಿಸುತ್ತಾ, ಸಂವಿಧಾನವು ಈ ಸಮುದಾಯಗಳನ್ನು ಗುರುತಿಸಿದೆ ಮತ್ತು ಅವುಗಳ ಅಭಿವೃದ್ಧಿಗೆ ಬೆಂಬಲ ನೀಡುವ ಸಾಧನವಾಗಿ ಮೀಸಲಾತಿಯನ್ನು ಕಲ್ಪಿಸಿದೆ. ಸಮಾಜದಲ್ಲಿ ಸಾಮಾಜಿಕ ತಾರತಮ್ಯದ ಘಟನೆಗಳು ಇನ್ನೂ ನಡೆಯುತ್ತಲೇ ಇವೆ ಮತ್ತು ಹೀಗಾಗಿ ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಕುರಿತಾದ ಚರ್ಚೆಗಳು ಪ್ರಸ್ತುತವಾಗಿವೆ ಎಂದು ಹೇಳಿದರು.
ತಾರತಮ್ಯದ ಮುಂದುವರಿಕೆ ಹಾಗೂ ಸಾಮಾಜಿಕ ನ್ಯಾಯದತ್ತ ಹೆಚ್ಚಿನ ಗಮನಹರಿಸುವ ಅಗತ್ಯದ ಕುರಿತು ಮಾತನಾಡುತ್ತಾ, ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ ನಂತರ ನಡೆ ಶುದ್ಧೀಕರಣ ಘಟನೆಯನ್ನು ಪಾಸ್ವಾನ್ ಉಲ್ಲೇಖಿಸಿದರು.
ಮೀಸಲಾತಿಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವವರ ಕುರಿತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಹೇಳಿಕೆಗಳ ಬಗ್ಗೆ ಕೇಳಿದಾಗ, ಪ್ರತಿಭಟನಾಕಾರರು ತಮ್ಮ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಯನ್ನೂ ಮಾತುಕತೆಯ ಮೂಲಕ ಬಗೆಹರಿಸಬಹುದು. ಪ್ರತಿಭಟನಾಕಾರರೊಂದಿಗೆ ನಡೆಸುವ ಚರ್ಚೆಗಳು ಮೀಸಲಾತಿಯ ಉದ್ದೇಶ ಮತ್ತು ಈ ವ್ಯವಸ್ಥೆಯು ಏಕೆ ಅಗತ್ಯವಾಗಿ ಮುಂದುವರಿಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಬಲ್ಲವು ಎಂದು ಪಾಸ್ವಾನ್ ಹೇಳಿದರು.