

ಚಂಡೀಗಢ: ತಮ್ಮ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ 21 ದಿನಗಳ ಪೆರೋಲ್ ಮಂಜೂರಾಗಿದೆ. ಅದರಲ್ಲೂ, ಈ ಪ್ರಕರಣದಲ್ಲಿ 2017 ರಲ್ಲಿ ಶಿಕ್ಷೆಯಾದ ನಂತರ 17 ಬಾರಿಗೆ ಪೆರೋಲ್ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:
17 ಬಾರಿಗೆ ಪೆರೋಲ್!
ತಮ್ಮ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್, ಬಂಧನದ ನಂತರದ ಸುಮಾರು 400ಕ್ಕೂ ಹೆಚ್ಚು ದಿನಗಳನ್ನು ಪೆರೋಲ್ ಅಡಿಯಲ್ಲಿ ಜೈಲಿನ ಹೊರಗೇ ಕಳೆದಿದ್ದಾರೆ. ಅದರಂತೆ, ಈವರೆಗೂ, 2020 ರ ನಂತರ, 17ಕ್ಕೂ ಹೆಚ್ಚು ಬಾರಿ ತಾತ್ಕಾಲಿಕ ಬಿಡುಗಡೆಯಾಗಿದೆ. ಅದರಲ್ಲೂ, ಪ್ರತಿಬಾರಿಯು ಚುನಾವಣೆ ಅಂದರೆ ಹರಿಯಾಣ, ಪಂಜಾಬ್ ಅಥವಾ ರಾಜಸ್ಥಾನ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಯೇ ಹೆಚ್ಚು ಬಿಡುಗಡೆಯಾಗಿದೆ. ಇನ್ನು, ಈ ಬಾರಿಯೂ ಪಂಜಾಬ್ ಚುನಾವಣೆಗೆ ಕೆಲವೇ ಕೆಲವು ತಿಂಗಳು ಬಾಕಿ ಇರುವ ಕಾರಣದಿಂದ ಈ ಪರೋಲ್ ಮತ್ತೆ ಸುದ್ದಿಯಾಗಿದೆ.
31 ದಿನದೊಳಗೆ 21 ದಿನಗಳ ಬಿಡುಗಡೆ
ಹರಿಯಾಣ ಸರ್ಕಾರದ ಜೈಲು ಆಡಳಿತವು 31 ದಿನಗಳ ಅವಧಿಯೊಳಗೆ 21 ದಿನಗಳ ತಾತ್ಕಾಲಿಕ ಬಿಡುಗಡೆಗೆ (ಫರ್ಲೋ) ಅನುಮೋದನೆ ನೀಡಿದೆ. ಇದರೊಂದಿಗೆ, ರಾಮ್ ರಹೀಮ್ ಸತತ ಮೂರನೇ ಬಾರಿಗೆ ತಮ್ಮ ಸಿರ್ಸಾ ಆಶ್ರಮದಲ್ಲಿ ಇರಲಿದ್ದಾರೆ. ಆದರೆ, ಬಿಡುಗಡೆಯ ನಿಯಮಗಳ ಪ್ರಕಾರ, ಅವರು ಸಾರ್ವಜನಿಕವಾಗಿ ದೊಡ್ಡ ಸಭೆಗಳನ್ನು ನಡೆಸುವಂತಿಲ್ಲ. ಆದರೆ ಆನ್ಲೈನ್ ಮೂಲಕ ಭಕ್ತರನ್ನು ಉದ್ದೇಶಿಸಿ ಮಾತನಾಡಲು ಕಾನೂನುಬದ್ಧವಾಗಿ ಅವಕಾಶವಿದೆ. ಇದಕ್ಕೂ ಮುನ್ನ ಇದೇ ವರ್ಷದ ಜನವರಿಯಲ್ಲಿ 40 ದಿನಗಳ ಪೆರೋಲ್ ಮಂಜೂರಾಗಿತ್ತು. ಜೊತೆಗೆ, ಮೇ ತಿಂಗಳಿನಲ್ಲಿಯೂ 30 ದಿನಗಳ ಪೆರೋಲ್ ಮಂಜೂರಾಗಿ, ಜೂನ್ ಕೊನೆಯಲ್ಲಿ ಜೈಲಿಗೆ ಮರಳಿದ್ದರು.
ಗುರ್ಮೀತ್ ರಾಮ್ ರಹೀಮ್ ಸಿಂಗ್ ಮೇಲಿರುವ ಪ್ರಕರಣಗಳು ಯಾವುವು?
ಸಿರ್ಸಾ ಆಶ್ರಮದಲ್ಲಿ ಇಬ್ಬರು ಮಹಿಳಾ ಸಾಧ್ವಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ರಾಮ್ ರಹೀಮ್ಗೆ ತಲಾ 10 ವರ್ಷಗಳಂತೆ ಒಟ್ಟು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಎರಡೂ ಶಿಕ್ಷೆಗಳು ಒಂದಾದ ಮೇಲೊಂದರಂತೆ ಜಾರಿಯಾಗಲಿವೆ. ಇದಲ್ಲದೆ, ಡೇರಾ ಸಚ್ಚಾ ಸೌದಾ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಹಾಗೂ ಪತ್ರಕರ್ತ ರಾಮಚಂದ್ರ ಛತ್ರಪತಿ ಅವರ ಹತ್ಯೆ ಪ್ರಕರಣಗಳಲ್ಲೂ ಅವರು ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಗಂಭೀರ ಶಿಕ್ಷೆಗಳಿದ್ದರೂ ಪದೇಪದೇ ಪೆರೋಲ್ ಸಿಗುತ್ತಿರುವುದು ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.