

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಯರ್ವಾನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಸಹಚರರನ್ನು (OGWs) ಬಂಧನಕ್ಕೊಳಪಡಿಸಿದ್ದಾರೆ.
ಉಗ್ರ ಜಾಲವನ್ನು ಭೇದಿಸುವ ಹಾಗೂ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ಪ್ರಯತ್ನಗಳನ್ನು ತಡೆಯುವ ನಿಟ್ಟಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು, ಸೇನೆ ಮತ್ತು ಸಿಆರ್ಪಿಎಫ್ ಜಂಟಿಯಾಗಿ ಇಬ್ಬರು ಉಗ್ರರ ಸಹಚರರನ್ನು ಬಂಧಿಸಿದ್ದಾರೆ.
ಇದೇ ವೇಳೆ ಅವರ ಬಳಿಯಿದ್ದ ಒಂದು ಪಿಸ್ತೂಲ್, 12 ಪಿಸ್ತೂಲ್ ಗುಂಡುಗಳು ಹಾಗೂ ಒಂದು ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿ ನಾಥ್ನ ರಾಜ್ಪೋರಾದ ಯರ್ವಾನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳಿಗೆ ದೊರೆತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸುತ್ತುವರಿದು ಶೋಧ ಕಾರ್ಯಾಚರಣೆ (CASO) ಆರಂಭಿಸಲಾಗಿತ್ತು.
ಕಾರ್ಯಾಚರಣೆ ವೇಳೆ ಯಾರ್ವಾನ್ ಅರಣ್ಯ ಪ್ರದೇಶದಿಂದ ಸಿಬಿ ನಾಥ್ ಗ್ರಾಮದ ಕಡೆಗೆ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಬರುತ್ತಿರುವುದನ್ನು ಜಂಟಿ ತಂಡ ಗಮನಿಸಿದೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಇಬ್ಬರನ್ನೂ ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಲತೀಫ್ ಅಹ್ಮದ್ ದೀದಾದ್ ಮತ್ತು ಐಜಾಜ್ ಅಹ್ಮದ್ ಬಜಾದ್ ಎಂದು ಗುರುತಿಸಲಾಗಿದೆ.
ಬಂಧಿತರನ್ನು ತಪಾಸಣೆ ನಡೆಸಿದಾಗ ಪಿಸ್ತೂಲ್, 12 ಗುಂಡುಗಳು ಮತ್ತು ಒಂದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಬಳಿಕ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಪಿಎ ಕಾಯ್ದೆಯ (UAPA) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರು ನಡೆಸುತ್ತಿದ್ದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕಲು, ವಶಪಡಿಸಿಕೊಂಡ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಸಾಮಗ್ರಿಗಳ ಮೂಲ ಪತ್ತೆಹಚ್ಚಲು ಹಾಗೂ ಉಗ್ರ ಜಾಲದೊಂದಿಗೆ ಅವರಿಗಿರುವ ಇತರ ಸಂಪರ್ಕಗಳನ್ನು ಗುರುತಿಸಲು ತನಿಖೆ ಆರಂಭಿಸಿದ್ದಾರೆ.
ಈ ಇಬ್ಬರ ಬಂಧನಕ್ಕೂ ಕೆಲವೇ ಗಂಟೆಗಳ ಮುನ್ನ ಸೋಮವಾರ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರ ಸಹಚರರನ್ನು ಬಂಧಿಸಿದ್ದವು.