

ನವದೆಹಲಿ: ಟಿಎಂಸಿಗೆ ಸೆಡ್ಡು ಹೊಡೆದು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿರುವ 20 ಮಂದಿ ಬಂಡಾಯ ಸಂಸದರ ವಿರುದ್ಧ ಅನರ್ಹತೆ ಪ್ರಕ್ರಿಯೆ ಚುರುಕುಗೊಂಡಿದೆ.
ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿರುವ ಅನರ್ಹತೆ ಅರ್ಜಿಗಳ ಬೆನ್ನಲ್ಲೇ ಲೋಕಸಭಾ ಸಚಿವಾಲಯ 20 ಸಂಸದರಿಗೆ ನೋಟಿಸ್ ಜಾರಿ ಮಾಡಿದ್ದು, 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ಆಗಸ್ಟ್ 25ರಂದು ಜಾರಿಗೊಳಿಸಲಾದ ಈ ನೋಟಿಸ್ಗಳನ್ನು 1985ರ ಪಕ್ಷಾಂತರದ ಆಧಾರದ ಮೇಲೆ ಲೋಕಸಭಾ ಸದಸ್ಯರ ಅನರ್ಹತೆ ನಿಯಮಗಳ ನಿಯಮ 6ರ ಅಡಿಯಲ್ಲಿ ನೀಡಲಾಗಿದೆ.
ಜೂನ್ 18ರಂದು ಈ 20 ಸಂಸದರ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅನರ್ಹತೆ ಅರ್ಜಿಗಳ ಪ್ರತಿಗಳನ್ನೂ ನೋಟಿಸ್ ಜೊತೆಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
20 ಸಂಸದರು ತಾವು ತ್ರಿಪುರಾ ಮೂಲದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI)ಗೆ ಸೇರ್ಪಡೆಗೊಂಡಿದ್ದೇವೆ ಅಥವಾ ಆ ಪಕ್ಷದೊಂದಿಗೆ ವಿಲೀನಗೊಂಡಿದ್ದೇವೆ ಎಂದು ಘೋಷಿಸಿ, ಲೋಕಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸುವಂತೆ ಮನವಿ ಮಾಡಿದ ಬಳಿಕ ಟಿಎಂಸಿ ಸಂಸದೀಯ ಪಕ್ಷದೊಳಗಿನ ವಿವಾದ ತೀವ್ರಗೊಂಡಿದೆ.
ಇದಾದ ಬಳಿಕ ಸಂಸತ್ತಿನಲ್ಲಿ ಈ ಸಂಸದರನ್ನು ಎನ್ಸಿಪಿಐ ಗುಂಪಾಗಿ ಪರಿಗಣಿಸಲಾಗುತ್ತಿದ್ದು, ಅವರು ಎನ್ಡಿಎ ಸಂಸದೀಯ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದಾರೆ.
ಈ 20 ಸಂಸದರು ಟಿಎಂಸಿ ಚಿಹ್ನೆಯಡಿ ಆಯ್ಕೆಯಾಗಿರುವುದರಿಂದ, ಮತ್ತೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಅವರ ನಿರ್ಧಾರವು ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದಂತಾಗುತ್ತದೆ. ಹೀಗಾಗಿ ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸಬೇಕು ಎಂದು ಟಿಎಂಸಿ ವಾದಿಸಿದೆ.
ಆದರೆ, ಬಂಡಾಯ ಸಂಸದರು ತಮ್ಮ ನಡೆ ಕಾನೂನುಬದ್ಧ ವಿಲೀನವಾಗಿದ್ದು, ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹತೆ ಅನ್ವಯಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಅನರ್ಹತೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆಗೆ ಅಂಗೀಕರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು 20 ಸಂಸದರಿಗೆ ನೋಟಿಸ್ ಜಾರಿ ಮಾಡಿತ್ತು.
ಆದರೆ, ನ್ಯಾಯಾಲಯ ಲೋಕಸಭಾ ಸ್ಪೀಕರ್ ಅಥವಾ ಪ್ರಧಾನ ಕಾರ್ಯದರ್ಶಿಗೆ ಪ್ರತ್ಯೇಕ ನೋಟಿಸ್ ನೀಡಲಿಲ್ಲ. ಅವರ ಪರವಾಗಿ ತಾವೇ ಹಾಜರಾಗುತ್ತಿರುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿತು.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, “ನೋಟಿಸ್ ನೀಡುವುದೇ ಪ್ರಶ್ನೆಯಲ್ಲ, ನಿಗದಿತ ಕಾಲಮಿತಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವುದೇ ಪ್ರಶ್ನೆ” ಎಂದು ಅಭಿಪ್ರಾಯಪಟ್ಟಿತು.
20 ಸಂಸದರ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಪ್ರತ್ಯೇಕ ಅನರ್ಹತೆ ಅರ್ಜಿಗಳನ್ನು ಸಲ್ಲಿಸಿದ್ದರು. ಬಳಿಕ ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಮನವಿ ಮಾಡಿದ್ದರು. ಜುಲೈ 27ರಂದು ಲಿಖಿತ ಮನವಿ ಸಲ್ಲಿಸಿದ ಬಳಿಕ, ಆಗಸ್ಟ್ 12ರಂದು ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದರು.
ನೋಟಿಸ್ ಪಡೆದ 20 ಬಂಡಾಯ ಸಂಸದರು....
ಕಾಕೋಲಿ ಘೋಷ್ ದಸ್ತಿದಾರ್
ಸುದೀಪ್ ಬಂದ್ಯೋಪಾಧ್ಯಾಯ
ಶತಾಬ್ದಿ ರಾಯ್
ಪ್ರಸೂನ್ ಬ್ಯಾನರ್ಜಿ
ರಚನಾ ಬ್ಯಾನರ್ಜಿ
ಸಯಾನಿ ಘೋಷ್
ಮಾಲಾ ರಾಯ್
ಯೂಸುಫ್ ಪಠಾಣ್
ಜಗದೀಶ್ ಚಂದ್ರ ಬರ್ಮಾ ಬಸುನಿಯಾ
ಪಾರ್ಥ ಭೌಮಿಕ್
ಅರೂಪ್ ಚಕ್ರವರ್ತಿ
ಅಧಿಕಾರಿ ದೀಪಕ್ ದೇವ್ (ದೇವ್)
ಬಾಪಿ ಹಲ್ದಾರ್
ಮೊಹಮ್ಮದ್ ಅಬು ತಾಹೆರ್ ಖಾನ್
ಕಾಲಿಪದ ಸರೆನ್ ಖೇರ್ವಾಲ್
ಅಸಿತ್ ಕುಮಾರ್ ಮಾಲ್
ಜೂನ್ ಮಾಲಿಯಾ
ಮಿತಾಲಿ ಬಾಗ್
ಖಲೀಲೂರ್ ರೆಹಮಾನ್
ಶರ್ಮಿಳಾ ಸರ್ಕಾರ್