

ಕಠ್ಮಂಡು: ಟಿಬೆಟ್ ಗಡಿಯಲ್ಲಿ ಹಿಮಪಾತದಿಂದಾಗಿ ರೂಪುಗೊಂಡ ಸರೋವರವೊಂದರ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಈ ಮಧ್ಯೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಶುಕ್ರವಾರವೂ ಹೆಚ್ಚಿನ ಮೃತದೇಹಗಳು ಪತ್ತೆಯಾಗಿವೆ. ಇಲ್ಲಿಯವರೆಗೂ ನೇಪಾಳದಲ್ಲಿ ದಿಢೀರ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 538ಕ್ಕೆ ಏರಿದೆ.
ಹಿಮಾಲಯದ ರಾಷ್ಟ್ರವಾದ ನೇಪಾಳದ ಎಂಟು ಜಿಲ್ಲೆಗಳಿಂದ ಈ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ನೇಪಾಳ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನವಾಲ್ಪರಸಿ ಪೂರ್ವದಲ್ಲಿ 134, ಚಿತ್ವಾನ್ನಲ್ಲಿ 221, ಗೋಖಾದಲ್ಲಿ 46 ಮತ್ತು ನುವಾಕೋಟ್ನಲ್ಲಿ 37 ಮೃತದೇಹಗಳು ಪತ್ತೆಯಾಗಿವೆ.
ಅದೇ ರೀತಿ, ಧಾಡಿಂಗ್ನಲ್ಲಿ 33, ತನುನಲ್ಲಿ 28, ನವಾಲ್ಪರಸಿ ಪಶ್ಚಿಮದಲ್ಲಿ 27 ಮತ್ತು ರಸುವಾದಲ್ಲಿ 12 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ದುರಂತ ಸಂಭವಿಸಿದ ಮೂರನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇದಕ್ಕಾಗಿ 2,391 ನೇಪಾಳ ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 7,451 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವಾರದ ಆರಂಭದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ ಸ್ಥಳದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಆ ಪ್ರದೇಶದಲ್ಲಿ ಮತ್ತೊಂದು ಪ್ರವಾಹದ ಅಪಾಯವನ್ನು ಹೆಚ್ಚಿಸಿದೆ ಎಂದು ರಾಷ್ಟ್ರೀಯ ವಿಪತ್ತುನಿರ್ವಹಣಾ ಪ್ರಾಧಿಕಾರ (NDRRMA) ಶುಕ್ರವಾರ ತಿಳಿಸಿದೆ. ಬುಧವಾರ ರಸುವಾ ಮತ್ತು ಮಧ್ಯ ನೇಪಾಳದ ಇತರ ಭಾಗಗಳಲ್ಲಿ ಸಂಭವಿಸಿದ ಭಾರಿ ದಿಢೀರ್ ಪ್ರವಾಹವು ನೂರಾರು ಜನರ ಸಾವಿಗೆ ಮತ್ತು ಸಾವಿರಾರು ಜನರು ನಾಪತ್ತೆಯಾಗಲು ಕಾರಣವಾದ ನಂತರ ಈ ಎಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ ಪ್ರವಾಹ ಪೀಡಿತ ನೇಪಾಳದಲ್ಲಿ ಸುಮಾರು 100 ಭಾರತೀಯ ಮೂಲದವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಮತ್ತು 320 ಭಾರತೀಯ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
ಗಡಿಯ ಚೀನಾ ಭಾಗದಲ್ಲಿದ್ದ 400 ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಮತ್ತು ಅಲ್ಲಿ ಸಿಕ್ಕಿಹಾಕಿಕೊಂಡಿದ್ದ 96 ಭಾರತೀಯರು ಭೂಮಾರ್ಗದ ಮೂಲಕ ಸುರಕ್ಷಿತವಾಗಿ ನೇಪಾಳವನ್ನು ಪ್ರವೇಶಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ನೇಪಾಳದಿಂದ ಮರಳಿದ 21 ಭಾರತೀಯ ಪ್ರಜೆಗಳು ಕಠ್ಮಂಡುವಿನಿಂದ ದೆಹಲಿಯನ್ನು ತಲುಪಿದ್ದು, ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಜೈಶಂಕರ್, "ಅವರ ಅನುಭವಗಳನ್ನು ನೇರವಾಗಿ ಕೇಳಿ ಮನಸ್ಸು ಭಾವುಕವಾಯಿತು ಎಂದು ಹೇಳಿದರು.