Hit And Run: ಪಾದಚಾರಿಗೂ ಬದುಕಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

2021ರಲ್ಲಿ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯ ಗೇಟ್‌ ಬಳಿ ನಡೆದ ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದರು.
Pedestrians have right to cross roads alive
ದೆಹಲಿ ಹೈಕೋರ್ಟ್
Updated on

ನವದೆಹಲಿ: ರಸ್ತೆ ಎನ್ನುವುದು ವಾಹನ ಚಾಲಕರಿಗೆ ಮಾತ್ರ ಸೇರಿದ್ದಲ್ಲ. ಪಾದಚಾರಿಗಳಿಗೂ ಅದರ ಮೇಲೆ ಸಮಾನ ಹಕ್ಕಿದೆ. ಅದರಲ್ಲೂ ಮಧ್ಯರಾತ್ರಿ ಆಸ್ಪತ್ರೆಯೊಂದರ ಎದುರು ರಸ್ತೆ ದಾಟುವ ವ್ಯಕ್ತಿ ಸುರಕ್ಷಿತವಾಗಿ ಇನ್ನೊಂದು ಬದಿಗೆ ತಲುಪುವ ಹಕ್ಕು ಹೊಂದಿರುತ್ತಾನೆ ಎಂದು ದೆಹಲಿ ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

2021ರಲ್ಲಿ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯ ಗೇಟ್‌ ಬಳಿ ನಡೆದ ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ದಲಿಪ್ ಕುಮಾರ್ ಎಂಬಾತನ ಅಪರಾಧ ಸಾಬೀತುಪಡಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಅವರು ಎತ್ತಿಹಿಡಿದಿದ್ದಾರೆ.

2021ರ ಜುಲೈ 27ರ ಮಧ್ಯರಾತ್ರಿ ದಲಿಪ್ ಕುಮಾರ್ ಅತ್ಯಂತ ವೇಗವಾಗಿ SUV ಚಲಾಯಿಸುತ್ತಿದ್ದಾಗ, RML ಆಸ್ಪತ್ರೆಯ ಗೇಟ್ ನಂಬರ್ 4ರ ಎದುರು ರಸ್ತೆ ದಾಟುತ್ತಿದ್ದ ಮೀನಾ ಭಂಡಾರಿ ಮತ್ತು ರಾಜನ್ ಎಂಬವರಿಗೆ ವಾಹನ ಡಿಕ್ಕಿ ಹೊಡೆದಿತ್ತು. ಅಪಘಾತದ ಬಳಿಕ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದ.

ಸಿಸಿಟಿವಿ ವಿಡಿಯೋ ವೈರಲ್

ಅಪಘಾತದ ತೀವ್ರತೆಯ ದೃಶ್ಯಗಳು CCTV ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಜತೆಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳೂ CCTV ದೃಶ್ಯಗಳಿಗೆ ಪೂರಕವಾಗಿದ್ದವು ಎಂದು ನ್ಯಾಯಾಲಯ ಗಮನಿಸಿದೆ. ‘ಪರಿಣಾಮ ತಪ್ಪಿಸಲು ಸಾಧ್ಯವಾಗದಷ್ಟು ವೇಗದಲ್ಲಿ ವಾಹನ ಚಲಾಯಿಸುವುದು ನಿರ್ಲಕ್ಷ್ಯ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ನ್ಯಾಯಾಲಯದ ಆಗಸ್ಟ್ 17ರ ಆದೇಶದಲ್ಲಿ, “ರಸ್ತೆ ಎಲ್ಲರೂ ಹಂಚಿಕೊಳ್ಳುವ ಸಾಮೂಹಿಕ ಹಕ್ಕು. ಮಧ್ಯರಾತ್ರಿ ಆಸ್ಪತ್ರೆಯ ಗೇಟ್ ಬಳಿ ರಸ್ತೆಗಿಳಿಯುವ ಪಾದಚಾರಿಯ ಬಳಿ ಯಾವುದೇ ರಕ್ಷಾಕವಚ ಇರುವುದಿಲ್ಲ.

ವಾಹನ ಚಾಲಕ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಂತೆ ವಾಹನ ಚಲಾಯಿಸುತ್ತಾನೆ ಎಂಬ ನಿರೀಕ್ಷೆಯಷ್ಟೇ ಆತನಿಗಿರುತ್ತದೆ. ಆ ನಿರೀಕ್ಷೆ ಹುಸಿಯಾದಾಗ, ಕಾನೂನು ಸೇಡಿಗಾಗಿ ಅಲ್ಲ, ಸಾಮಾನ್ಯ ಮಾನವ ಹಕ್ಕನ್ನು ರಕ್ಷಿಸಲು ಮಧ್ಯಪ್ರವೇಶಿಸುತ್ತದೆ. ರಸ್ತೆ ದಾಟಿ ಜೀವಂತವಾಗಿ ಇನ್ನೊಂದು ಬದಿಗೆ ತಲುಪುವ ಹಕ್ಕು” ಎಂದು ಹೇಳಿದೆ.

ಶಿಕ್ಷೆ ಈಗಾಗಲೇ ಕಡಿಮೆ: ಕೋರ್ಟ್

2024ರ ಫೆಬ್ರವರಿಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ದಲಿಪ್ ಕುಮಾರ್‌ಗೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 304A ಅಡಿ ಎರಡು ತಿಂಗಳ ಜೈಲು ಶಿಕ್ಷೆ ಹಾಗೂ ಸೆಕ್ಷನ್ 279 ಅಡಿ 15 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಕುಮಾರ್ ಸಲ್ಲಿಸಿದ್ದ ಮನವಿಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ.

ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿರುವ ಶಿಕ್ಷೆ ಕಡಿಮೆ ಮಟ್ಟದಲ್ಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈಗಾಗಲೇ ಕಡಿಮೆ ಮಟ್ಟದಲ್ಲಿರುವ ಶಿಕ್ಷೆಯನ್ನು ಮತ್ತಷ್ಟು ಕಡಿಮೆ ಮಾಡಿದರೆ, ಉಂಟಾದ ಹಾನಿಗೆ ಶಿಕ್ಷೆ ಯಾವುದೇ ರೀತಿಯಲ್ಲೂ ಅನುಪಾತವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

‘ಪಾದಚಾರಿಯ ನಿರೀಕ್ಷೆ ಹುಸಿಯಾಗಬಾರದು’

ಮಧ್ಯರಾತ್ರಿ ಆಸ್ಪತ್ರೆಯ ಮುಂದೆ ರಸ್ತೆ ದಾಟುವ ಪಾದಚಾರಿಗೆ ವಾಹನ ಚಾಲಕ ಸುರಕ್ಷಿತವಾಗಿ ವಾಹನ ಚಲಾಯಿಸುತ್ತಾನೆ ಎಂಬ ಸಹಜ ನಿರೀಕ್ಷೆ ಇರುತ್ತದೆ. ಆ ನಂಬಿಕೆಯನ್ನು ಚಾಲಕನ ನಿರ್ಲಕ್ಷ್ಯ ಅಥವಾ ಅತಿವೇಗದ ಚಾಲನೆ ಹುಸಿಗೊಳಿಸಿದಾಗ, ಕಾನೂನು ಪಾದಚಾರಿಯ ಹಕ್ಕಿನ ರಕ್ಷಣೆಗೆ ನಿಲ್ಲಬೇಕು ಎಂಬ ಸಂದೇಶವನ್ನು ದೆಹಲಿ ಕೋರ್ಟ್ ತನ್ನ ಆದೇಶದ ಮೂಲಕ ನೀಡಿದೆ.

ರಸ್ತೆ ಬಳಸುವ ಹಕ್ಕು ವಾಹನ ಸವಾರರಿಗೆ ಮಾತ್ರವಲ್ಲ; ಜೀವಂತವಾಗಿ ರಸ್ತೆ ದಾಟಿ ಮನೆ ಸೇರುವ ಹಕ್ಕು ಪಾದಚಾರಿಗೂ ಇದೆ ಎಂಬುದನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ನೆನಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com