

ಮುಂಬೈ: ಅಮೆರಿಕ ಹೊಸ ವ್ಯಾಪಾರದೊಂದಿಗೆ ಭಾರತವನ್ನು ಬಹುತೇಕ ಖರೀದಿಸಿದೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಿನ ಹೊಸ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಈ ರೀತಿಯ ಮಾತುಗಳನ್ನಾಡಿರುವ ಸಂಜಯ್ ರಾವತ್, ಭಾರತದ ರೈತರ ಆರ್ಥಿಕ ಬೆಳವಣಿಗೆ ಹಾಗೂ ಯೋಗಕ್ಷಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈಗ ಅಮೆರಿಕ ತಮ್ಮ ಕೃಷಿ ಉತ್ಪನ್ನಗಳನ್ನು ಭಾರತೀಯ ರೈತರ ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಮಾರಾಟ ಮಾಡಬಹುದು. ಇದು ಭಾರತೀಯ ರೈತರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಈ ವ್ಯಾಪಾರ ಒಪ್ಪಂದದೊಂದಿಗೆ ಅಮೆರಿಕ ಭಾರತವನ್ನು ಬಹುತೇಕ ಖರೀದಿಸಿದೆ. ಅವರು ಗೆಲುವು ಅಂತಾ ಹೇಳ್ತಾರೆ. ಆದರೆ ಇದು ಹೇಗೆ ಗೆಲುವು? ಶೇ.18 ರಷ್ಟು ಸುಂಕವನ್ನು ನಿಗದಿಪಡಿಸಲಾಗಿದೆ. ಇದು ಮೊದಲು ಶೇಕಡಾ 3 ರಷ್ಟಿತ್ತು. ಅಮೆರಿಕದ ಕೃಷಿ ಉತ್ಪನ್ನಗಳು ಶೂನ್ಯ ಸುಂಕದೊಂದಿಗೆ ಭಾರತದ ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಧಾನ್ಯಗಳು, ಹಣ್ಣುಗಳು ಮತ್ತು ಡೈರಿ ಉತ್ಪನ್ನಗಳನ್ನುಇದು ಒಳಗೊಂಡಿರುತ್ತದೆ. ನಮ್ಮ ರೈತರು ಕಷ್ಟಪಟ್ಟು, ಹಗಲಿರುಳು ಶ್ರಮಿಸಿ ಈ ಸರಕುಗಳನ್ನು ಉತ್ಪಾದಿಸುತ್ತಾರೆ. ಈಗ ಅಮೆರಿಕ ತನ್ನ ಉತ್ಪನ್ನಗಳನ್ನು ನಮ್ಮ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ಹೀಗಾದರೆ ನಮ್ಮ ರೈತರಿಗೆ ಏನಾಗುತ್ತದೆ? ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ...? ಎಂದು ಅವರು ಪ್ರಶ್ನಿಸಿದ್ದು, ಪ್ರಾಯೋಗಿಕವಾಗಿ ಹೀಗೆ ದೇಶವನ್ನು ಮಾರಾಟ ಮಾಡಿದಂತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಭಾರತ-ಯುಎಸ್ ವ್ಯಾಪಾರ ಒಪ್ಪಂದಡಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 18 ಕ್ಕೆ ಇಳಿಸಿದ್ದು, ದೇಶದಲ್ಲಿ ರಾಜಕೀಯ ಗದ್ದಲ ಉಂಟಾಗಿದೆ. ಕೃಷಿ ಮತ್ತು ಹೈನುಗಾರಿಕೆಯನ್ನು ಸಂರಕ್ಷಿಸಲಾಗಿದೆ ಎಂಬ ಹೇಳಿಕೆಗಳನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಸುಂಕವನ್ನು ಶೇ.25 ರಿಂದ ಶೇ.18ಕ್ಕೆ ಇಳಿಸುವ ಬಗ್ಗೆ ಸ್ಪಷ್ಟತೆ ಕೋರಿದೆ.
ಭಾರತ ಕೂಡಾ ಅಮೆರಿಕದ ಕೆಲವು ಸರಕುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಬಹುದು ಮತ್ತು 500 ಶತಕೋಟಿ ಮೊತ್ತದ ಅಮೆರಿಕದ ಇಂಧನ, ತಂತ್ರಜ್ಞಾನ, ಕಲ್ಲಿದ್ದಲು ಮತ್ತು ಇತರ ಅನೇಕ ಉತ್ಪನ್ನಗಳನ್ನು ಖರೀದಿಸಬಹುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಹೇಳಿಕೆಗಳನ್ನು ಕೇಂದ್ರ ಸರ್ಕಾರ ಇನ್ನೂ ಇನ್ನೂ ದೃಢೀಕರಿಸಬೇಕಾಗಿದೆ.
Advertisement