

ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲೆ ಮಂಡಿಸಲಾಗಿದ್ದ ವಂದನಾ ನಿರ್ಣಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಇಲ್ಲದೆಯೇ ಲೋಕಸಭೆ ಗುರುವಾರ ಅಂಗೀಕರಿಸಿತು. ಇದಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತೀವ್ರ ಗದ್ದಲವುಂಟಾದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.
ಗುರುವಾರ ಬೆಳಿಗ್ಗೆ ಕಲಾಪ ಆರಂಭವಾದಾಗಲೇ, ಹಿಂದಿನ ದಿನದ ಘಟನೆಗಳ ಕುರಿತು ಸ್ಪೀಕರ್ ಓಂ ಬಿರ್ಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಸಂಜೆ ಪ್ರಧಾನಿ ಭಾಷಣಕ್ಕೆ ನಿಗದಿಯಾಗಿದ್ದ ಸಂದರ್ಭದಲ್ಲಿ, ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದ್ದು, ಸಂಸದೀಯ ಗೌರವ ಮತ್ತು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ವಿಪಕ್ಷಗಳ ಈ ನಡೆ ಸದನದ ಶಿಸ್ತು, ಮತ್ತು ಅಧ್ಯಕ್ಷೀಯ ಸ್ಥಾನಕ್ಕೆ ಅಗೌರವ ತೋರಿದಂತಾಗಿದೆ. ಇಂತಹ ವರ್ತನೆಯಿಂದ ಸದನವನ್ನು ಸರಾಗವಾಗಿ ನಡೆಸುವುದು ಅಸಾಧ್ಯವಾಗುತ್ತದೆ ಎಂದು ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು. ಈ ಮಾತಿನ ನಂತರ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಮಧ್ಯಾಹ್ನ ಕಲಾಪ ಆರಂಭವಾದಲೂ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಮತ್ತೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.
ಬುಧವಾರ ಲೋಕಸಭೆಯಲ್ಲಿ ತೀವ್ರ ಗದ್ದಲವುಂಟಾಗಿತ್ತು. ವಿಪಕ್ಷ ಮಹಿಳಾ ಸಂಸದರು ಪ್ರಧಾನಿ ಆಸನದತ್ತ ಬ್ಯಾನರ್ಗಳನ್ನು ಹಿಡಿದು ಧಾವಿಸಿದ್ದರು, ನಂತರ ಕಾರ್ಯಕಲಾಪಗಳನ್ನು ಪೂರ್ಣ ದಿನದ ಮಟ್ಟಿಗೆ ಮುಂದೂಡಲಾಗಿತ್ತು. ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹಾಜರಿರಲಿಲ್ಲ.
ವಿಪಕ್ಷಗಳು, 2020ರ ಚೀನಾ ಗಡಿಭಾಗದ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಪ್ರಕಟವಾಗದ ಪುಸ್ತಕವನ್ನು ಉಲ್ಲೇಖಿಸಿ ಮಾತನಾಡಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಅವಕಾಶ ನೀಡಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿವೆ.
Advertisement