

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸತ್ಯ ಹೇಳಲು ಪ್ರಧಾನಿ ತುಂಬಾ ಹೆದರುತ್ತಿದ್ದು, ಸುಳ್ಳಿನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಯಾಕೆ ಇಷ್ಟೊಂದು ಆತಂಕಗೊಂಡಿದ್ದಾರೆ ಎಂಬುದನ್ನು ಕೆಲವು ಪ್ರಶ್ನೆಗಳಿಂದ ತಿಳಿದುಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.
ಮೋದಿಜೀ ಸತ್ಯಕ್ಕೆ ತುಂಬಾ ಹೆದರುತ್ತಿದ್ದು, ಸುಳ್ಳಿನಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ತನಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಿಂದಿಯಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ತಮ್ಮ ಚರ್ಚೆಯ ವೇಳೆ ಅಡ್ಡಿಪಡಿಸುವ ಮೂಲಕ ಕಾಂಗ್ರೆಸ್ ಭಾರತದ ರಾಷ್ಟ್ರಪತಿಗಳನ್ನು ಅವಮಾನಿಸಿದೆ.ಅಲ್ಲದೇ ಆದಿವಾಸಿಗಳು, ದಲಿತರು ಮತ್ತು ಈಶಾನ್ಯದ ಜನರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಇನ್ನೂ ರಾಜ್ಯಸಭೆಯಲ್ಲೂ ಲೋಕಸಭೆಯಲ್ಲಿನ ಕಲಾಪಕ್ಕೆ ಅಡ್ಡಿಯನ್ನು ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್ ಸಂವಿಧಾನ ಮತ್ತು ರಾಷ್ಟ್ರಪತಿ ಅವರನ್ನು ಅಮಾನಿಸಿದೆ ಎಂದು ಆರೋಪಿಸಿದ್ದರು.
2020ರಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜವಾಬ್ದಾರಿಯನ್ನು ಕೈಬಿಟ್ಟು ನರವಾಣೆ ಅವರಿಗೆ ವಹಿಸಿದರು ಎಂದು ಬುಧವಾರ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಲೋಕಸಭೆಯಲ್ಲಿ ಇದನ್ನು ಉಲ್ಲೇಖಿಸಲು ಅವಕಾಶ ನೀಡಲಿಲ್ಲ. ನಿಮಗೆ ಸರಿ ಅನಿಸಿದ್ದನ್ನು ಮಾಡಿ ಎಂದು ಪ್ರಧಾನಿ ಹೇಳಿದ್ದರು ಎಂದು ನರವಾಣೆ ಉಲ್ಲೇಖಿಸಿರುವುದಾಗಿ ಹೇಳಿದ್ದರು.
Advertisement